Site icon Vistara News

ಚಾಲಕನ ನಿರ್ಲಕ್ಷ್ಯದಿಂದ ಫುಟ್‌ಪಾತ್‌ ಮೇಲೇರಿದ ಕಾರು, ಪಾದಚಾರಿ ಮರಣ

ಅಪಘಾತ‌

ಬೆಂಗಳೂರು: ಹೊರ ವರ್ತುಲ ರಸ್ತೆಯಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಕಾರೊಂದು ಫುಟ್ ಪಾತ್‌ ಮೇಲೇರಿ ಅವಾಂತರ ಸೃಷ್ಟಿಸಿದ್ದು, ಪಾದಚಾರಿಯೊಬ್ಬರು ಮೃತಪಟ್ಟಿದ್ದಾರೆ. ಫುಟ್‌ಪಾತ್‌ ಮೇಲೇರಿದ ಕಾರು ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದರಿಂದ ಅವು ಜಖಂಗೊಂಡಿದ್ದು, ಇತರ ನಾಲ್ವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಮುಕೇಶ್‌ ಎಂಬವರು ಕತ್ತರಿಗುಪ್ಪೆಯಿಂದ ಇಟ್ಟಮಡು ಜಂಕ್ಷನ್ ಕಡೆಗೆ ವೇಗವಾಗಿ ಮತ್ತು ನಿರ್ಲಕ್ಷ್ಯದಿಂದ ಕಾರು ಚಾಲನೆ ಮಾಡಿಕೊಂಡು ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಕಾರು ನಿಯಂತ್ರಣ ತಪ್ಪಿ ಉದ್ಭವ ಆಸ್ಪತ್ರೆ ಬಳಿ ಇರುವ ಚಂದನ್ ಮೋಟಾರ್ ದ್ವಿಚಕ್ರ ವಾಹನ ಷೋರೂಂ ಬಳಿಯಲ್ಲಿ ಅವಾಂತರ ಸೃಷ್ಟಿಯಾಗಿದೆ.

ಈ ಅಪಘಾತದಲ್ಲಿ ಫುಟ್‌ಪಾತ್‌ ಮೇಲೆ ನಡೆದುಕೊಂಡು ಹೋಗುತ್ತಿದ್ದ ಸಚಿನ್, ಶಿವರಾಜು, ಸುರೇಶ್ ಮತ್ತು ಶೈಲೇಂದ್ರ ಎಂಬ ನಾಲ್ವರು ಪಾದಚಾರಿಗಳಿಗೆ ಕಾರು ಡಿಕ್ಕಿ ಹೊಡೆದಿದೆ. ಅಲ್ಲದೆ, ಫುಟ್‌ಪಾತ್‌ ಮೇಲೆ ನಿಂತಿದ್ದ ಕಾರು ಮತ್ತು ಎರಡು ದ್ವಿಚಕ್ರ ವಾಹನಗಳಿಗೂ ಬಡಿದಿದೆ. ರಭಸದಿಂದ ಗುದ್ದಿದ ಕಾರಣಕ್ಕೆ ವಾಹನಗಳು ಜಖಂಗೊಂಡಿವೆ.

ಈ ಅಪಘಾತದಲ್ಲಿ ಪಾದಚಾರಿ ಸುರೇಶ್ ಅವರಿಗೆ ತೀವ್ರ ಗಾಯವಾಗಿತ್ತು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವಾಸವಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಉಳಿದ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.

Exit mobile version