ಬೆಂಗಳೂರು: ಬೆಂಗಳೂರು ಇಂದು ಅಂತಾರಾಷ್ಟ್ರೀಯ ಮಟ್ಟದ ನಗರವಾಗಿ ಹೊರಹೊಮ್ಮಿದೆ. ಆದರೆ ಈ ರೀತಿಯ ಬೆಳವಣಿಗೆಗೆ ನಾಡಪ್ರಭು ಕೆಂಪೇಗೌಡ ಅವರು ನೀಡಿರುವ ಕೊಡುಗೆ ಅಮೋಘ. ಅದರ ಪ್ರಯೋಜನವನ್ನು ಬೆಂಗಳೂರಿನ ಜನತೆ ಈಗಲೂ ಪಡೆಯುವಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Modi in Bengaluru) ಅವರು ಹೇಳಿದರು.
ಬೆಂಗಳೂರು ನಗರ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ನಡೆದ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಬೆಂಗಳೂರಿನ ನಿರ್ಮಾಣದಲ್ಲಿ ಕೆಂಪೇಗೌಡ ಅವರ ತ್ಯಾಗ, ಹೋರಾಟ, ಪರಿಶ್ರಮ ಚಿರಸ್ಮರಣೀಯವಾಗಿದೆ ಎಂದರು.
ಕೆಂಪೇಗೌಡರು ಕಟ್ಟಿರುವ ಪೇಟೆಗಳು ಇಂದಿಗೂ ಸಕ್ರಿಯ
ಕೆಂಪೇಗೌಡರಿಗೆ ಬೆಂಗಳೂರನ್ನು ಅದ್ವಿತೀಯ ಎಂಬಂತೆ ಕಟ್ಟುವ ದೂರದೃಷ್ಟಿ ಇತ್ತು. ಹೀಗಾಗಿ ಬೆಂಗಳೂರಿನ ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿಗೆ ನಗರವನ್ನು ಬೆಳೆಸಿದರು. ಜತೆಗೆ ಇಲ್ಲಿನ ಸಾಂಸ್ಕೃತಿಕ, ಆಧ್ಯಾತ್ಮಿಕ ಪ್ರಗತಿಗೆ ಕೂಡ ಆದ್ಯತೆ ನೀಡಿದರು. ಬೆಂಗಳೂರು ಇಂದು ಎಷ್ಟೇ ಬೆಳೆದಿರಬಹುದು. ಅದರ ರೂಪುರೇಷೆಗಳು ಬದಲಾಗಿರಬಹುದು. ಆದರೆ ಕೆಂಪೇಗೌಡರು ಕಟ್ಟಿರುವ ಪೇಟೆಗಳು ಇಂದಿಗೂ ವಾಣಿಜ್ಯ ಚಟುವಟಿಕೆಗಳ ಕೇಂದ್ರವಾಗಿದೆ.