Site icon Vistara News

Hit and Run: ಎರಡೇ ದಿನಗಳಲ್ಲಿ ರಾಜಧಾನಿಯಲ್ಲಿ ಎರಡು ಹಿಟ್‌ ಆ್ಯಂಡ್‌ ರನ್‌; ಇಬ್ಬರ ಬಲಿ

hit and run

ಬೆಂಗಳೂರು: ರಾಜಧಾನಿಯಲ್ಲಿ ಎರಡೇ ದಿನಗಳಲ್ಲಿ ಎರಡು ಹಿಟ್‌ ಆ್ಯಂಡ್‌ ರನ್‌ (Hit and Run) ಪ್ರಕರಣಗಳು ಸಂಭವಿಸಿವೆ. ನಿನ್ನೆ ರಾತ್ರಿ ನಡೆದ ಹಿಟ್‌ ಆ್ಯಂಡ್‌ ರನ್‌ ದುರ್ಘಟನೆಯಲ್ಲಿ (Road Accident) ಕಾಲೇಜು ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾನೆ.

ಚಿಕ್ಕಬಳ್ಳಾಪುರ ಮೂಲದ ಅತಿಕ್ ರೆಹಮಾನ್ (22) ಅಪಘಾತಕ್ಕೆ ಬಲಿಯಾದ ವಿದ್ಯಾರ್ಥಿ. ದೇವನಹಳ್ಳಿ ಕೋಟೆ ಕ್ರಾಸ್ ಬಳಿ ದುರ್ಘಟನೆ ನಡೆದಿದೆ. ರಾತ್ರಿ ಎಂಟು ಗಂಟೆ ಸುಮಾರಿಗೆ ಭೀಕರ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಅತಿಕ್‌ ರೆಹಮಾನ್ ಸ್ಥಳದಲ್ಲೆ ಸಾವಿಗೀಡಾಗಿದ್ದಾನೆ.

ಅತಿಕ್ ರೆಹಮಾನ್ ದೇವನಹಳ್ಳಿಯ ಮಹೇಶ್ವರಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ. ಅಪಘಾತವೆಸಗಿ ಪರಾರಿಯಾಗಿದ್ದ ಕಾರು ಚಾಲಕನನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಟ್ ಆ್ಯಂಡ್ ರನ್‌ಗೆ ಬೈಕ್ ಸವಾರ ಬಲಿ

ರಾಜಧಾನಿಯಲ್ಲಿ ಹಿಟ್‌ ಆ್ಯಂಡ್‌ ರನ್‌ಗೆ (hit and run) ಬೈಕ್‌ ಸವಾರರೊಬ್ಬರು ಬಲಿಯಾಗಿದ್ದಾರೆ. ಕೆಂಗೇರಿ ಸಮೀಪದ ಗಾಣಕಲ್ ರಸ್ತೆಯಲ್ಲಿ ದುರ್ಘಟನೆ ನಡೆದಿದೆ. ಅಜಯ್ ಕುಮಾರ್ ಮೃತ ಬೈಕ್ ಸವಾರ.

ಚಿಕ್ಕೇಗೌಡನಪಾಳ್ಯ ಕಡೆಯಿಂದ ಉತ್ತರಹಳ್ಳಿ ರಸ್ತೆ ಕಡೆಗೆ ವೇಗವಾಗಿ ತೆರಳುತಿದ್ದ ಕಾರ್, ಈ ವೇಳೆ ಮುಂದೆ ಬರುತಿದ್ದ ಬೈಕಿಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಬೈಕ್ ಸಂಪೂರ್ಣ ಜಖಂ ಆಗಿದ್ದು, ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಸ್ಥಳದಿಂದ ಕಾರು ಸಮೇತ ಚಾಲಕ ಪರಾರಿಯಾಗಿದ್ದಾನೆ. KA53MH9090 ಸಂಖ್ಯೆಯ ಕಾರ್ ಚಾಲಕ ಹಿಟ್ ಆ್ಯಂಡ್ ರನ್ ಮಾಡಿದ್ದು, ಸಿಸಿಟಿವಿಯಲ್ಲಿ ದಾಖಲಾಗಿದೆ. ಕೆಂಗೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಕಾರು ಚಾಲಕನ ಪತ್ತೆಗಾಗಿ ಶೋಧ ನಡೆಯುತ್ತಿದೆ.

ಇದನ್ನೂ ಓದಿ: Road Accident: ಬಿಬಿಎಂಪಿ ಕಸದ ಲಾರಿಗೆ ಬೈಕ್ ಡಿಕ್ಕಿ, ಸವಾರ ಸಾವು

Exit mobile version