Site icon Vistara News

Lalbagh Flower Show: ಫಲಪುಷ್ಪ ಪ್ರದರ್ಶನದಲ್ಲಿ ಬಸವ ತತ್ವ; ಎಂ.ಬಿ. ಪಾಟೀಲ್‌ ಸಂತಸ

MB Patil visit flower show

ಬೆಂಗಳೂರು: ಬೆಂಗಳೂರಿನ ಲಾಲ್‌ಬಾಗ್ ಸಸ್ಯತೋಟದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ (Lalbagh Flower Show) ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ (MB Patil) ಅವರು ಕುಟುಂಬ ಸಮೇತರಾಗಿ ಭೇಟಿ ನೀಡಿ ವೀಕ್ಷಿಸಿದರು.

ಬಸವಣ್ಣ ಮತ್ತು ವಚನ ಸಾಹಿತ್ಯದ ಥೀಮ್ ಆಧರಿಸಿ ಈ ಬಾರಿಯ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ಇದಕ್ಕೆ ಸಚಿವ ಎಂ.ಬಿ. ಪಾಟೀಲ್‌ ಅವರು ಪತ್ನಿ ಆಶಾ ಪಾಟೀಲ್‌ ಅವರ ಜತೆ ಭೇಟಿ ನೀಡಿದ್ದರು. ಈ ವೇಳೆ ಬಸವಾದಿ ಶರಣರ ವಚನ ಸಾಹಿತ್ಯ ಆಧಾರಿತವಾದ ಥೀಮ್‌ ಅಳವಡಿಕೆ ಬಗ್ಗೆ ಸಂತಸ ವ್ಯಕ್ತಪಡಿಸಿದ ಎಂ.ಬಿ. ಪಾಟೀಲ್‌ ಅವರು, ರಾಜ್ಯ ಸರ್ಕಾರವು ಇತ್ತೀಚೆಗೆ ಬಸವಣ್ಣನನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಇದಕ್ಕೆ ಮೆರುಗು ತಂದಿದೆ ಎಂದು ಹೇಳಿದರು.

ಇದನ್ನೂ ಓದಿ: Ram Mandir: ನಾನು ಯಾವ ದೇವಾಲಯಕ್ಕೂ ಹೋಗಲ್ಲ, ನನಗೆ ಭಕ್ತಿ ಇಲ್ಲ ಏನು ಮಾಡಲಿ? ಪ್ರಿಯಾಂಕ್‌ ಖರ್ಗೆ

ಈ ಬಾರಿಯ ವಿಶೇಷ ಏನು?

ಬಸವಾದಿ ಶರಣರ ವಚನ ಸಾಹಿತ್ಯ ಆಧಾರಿತವಾದ ಫಲಪುಷ್ಪ ಪ್ರದರ್ಶನ ಈ ಬಾರಿಯ ವಿಶೇಷತೆಯಾಗಿದೆ. ಹನ್ನೆರಡನೆಯ ಶತಮಾನದಲ್ಲಿ ಜಾತಿರಹಿತ ಹಾಗೂ ಮೂಢನಂಬಿಕೆ ಕಂದಾಚಾರಗಳಿಂದ ಮುಕ್ತವಾದ ಸಮ ಸಮಾಜ ನಿರ್ಮಾಣ ಮಾಡಲು ಹೋರಾಟ ನಡೆಸಲಾಗಿತ್ತು. ಈ ವಚನ ಚಳವಳಿಯ ಬಗ್ಗೆ ಜನರಿಗೆ ಪ್ರಚುರಪಡಿಸುವ ಉದ್ದೇಶದಿಂದ ಈ ಬಾರಿಯ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಹಲವಾರು ಬಗೆಯ ಫಲಪುಷ್ಪಗಳ ಮೂಲಕ ಬಸವಾದಿ ಶರಣರ ಸಂದೇಶಗಳನ್ನು ಪ್ರಚುರಪಡಿಸಲಾಗುತ್ತಿದೆ. ಈಗಾಗಲೇ ಆರಂಭವಾಗಿರುವ ಫಲಪುಷ್ಪ ಪ್ರದರ್ಶನವು ಜನವರಿ 28ರ ವರೆಗೆ ನಡೆಯಲಿದೆ.

ಉದ್ಘಾಟನೆ ಮಾಡಿದ್ದ ಸಿಎಂ ಸಿದ್ದರಾಮಯ್ಯ

ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ 2024ಕ್ಕೆ ಲಾಲ್ ಬಾಗ್‌ನ ಗಾಜಿನ ಮನೆಯಲ್ಲಿ ಗುರುವಾರ (ಜ. 18) ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಈ ವೇಳೆ ಮಾತನಾಡಿದ್ದ ಅವರು, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ (Basavanna Cultural Icon of Karnataka) ಎಂದು ಗೌರವಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಬಸವಣ್ಣನವರ ಹೆಸರು ಚಿರಸ್ಥಾಯಿಯಾಗಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದರು.

ಶಿವಮೊಗ್ಗದಲ್ಲಿರುವ ಜೈಲಿನ 46 ಎಕರೆ ಪ್ರದೇಶದಲ್ಲಿ ಉದ್ಯಾನವನಕ್ಕೆ ಅಲ್ಲಮಪ್ರಭು ಉದ್ಯಾನವನ ಎಂದು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ಅಲ್ಲಮಪ್ರಭು ಹಾಗೂ ಅಕ್ಕಮಹಾದೇವಿ ಶಿಕಾರಿಪುರದವರಾದ್ದರಿಂದ ಅವರ ಹೆಸರನ್ನೂ ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಈ ತೀರ್ಮಾನ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು.

ಇದನ್ನೂ ಓದಿ: DK Shivakumar: ಕೈಯಲ್ಲಿ ಮಂತ್ರಾಕ್ಷತೆ, ಬಗಲಲ್ಲಿ ದೊಣ್ಣೆ ಹಿಡಿದ ಬಿಜೆಪಿ ಗೂಂಡಾಗಳಿಗೆ ಹೆದರಲ್ಲ: ಡಿಕೆಶಿ

ತೋಟಗಾರಿಕೆ ಇಲಾಖೆ ಮಾಡಿಕೊಟ್ಟಿರುವ ಈ ಅವಕಾಶವನ್ನು ಬೆಂಗಳೂರಿನ ನಾಗರಿಕರು ಸದುಪಯೋಗ ಪಡಿಸಿಕೊಳ್ಳಬೇಕು. ತೋಟಗಾರಿಕಾ ಇಲಾಖೆಯಿಂದ ವಿವಿಧ ಫಲ ಪುಷ್ಪಗಳನ್ನು ಬೆಳೆಯಲಾಗುತ್ತಿದ್ದು, ಅವುಗಳ ಬಗ್ಗೆ ವಿಸ್ತೃತ ಮಾಹಿತಿಯನ್ನು ಜನರು ಪಡೆಯಬಹುದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.

Exit mobile version