Site icon Vistara News

Murder Case : ಪ್ರಿಯಕರನ ಜತೆ ಸರಸದಲ್ಲಿದ್ದಾಗ ಗಂಡನ ಎಂಟ್ರಿ; ಕೆಲವೇ ಸೆಕೆಂಡಲ್ಲಿ ಫಿನಿಷ್‌!

Love sex and crime

ಬೆಂಗಳೂರು: ಗಂಡ ತನ್ನ ಕೆಲಸದ ಮೇಲೆ ಹೊರಗೆ ಹೋಗಿದ್ದ! ಇನ್ನು ಬರೋದು ಏನಿದ್ದರೂ ನಾಳೆ ಬೆಳಗ್ಗೆ ಎಂದುಕೊಂಡ ಆಕೆ ಆತುರದಲ್ಲಿ ಪ್ರಿಯಕರನನ್ನು ಕರೆಸಿಕೊಂಡಿದ್ದಳು (Lovers game). ಅವನೋ ಸಿಕ್ಕಿದ್ದೇ ಚಾನ್ಸ್‌ ಎಂಬಂತೆ ಓಡಿಬಂದಿದ್ದ. ಇಬ್ಬರೂ ಖುಷಿಯಿಂದ ಕುಣಿದಾಡಿ ಸರಸಕ್ಕೆ ಶುರುವಿಟ್ಟುಕೊಂಡಿದ್ದರು. ಆಗ ಬಾಗಿಲು ಬಡಿದ ಶಬ್ದ! ತೆರೆದು ನೋಡಿದರೆ ಗಂಡ! ಹಾಗಂತ ಅವನೇನೋ ಸಂಶಯದಿಂದ ಬಂದಿದ್ದಲ್ಲ. ಅವನಿಗೆ ಆವತ್ತು ಕೆಲಸ ಇರಲಿಲ್ಲ! ಹಾಗಾಗಿ ಮನೆಗೆ ಮರಳಿದ್ದ. ಬಂದು ನೋಡಿದರೆ ಇಲ್ಲಿ ಕಂಡಿದ್ದೇ ಬೇರೆ. ಇದನ್ನೆಲ್ಲ ನೋಡಿದ ಅವನು ಕೆಲವೇ ನಿಮಿಷದಲ್ಲಿ ಶೌಚಾಲಯದಲ್ಲಿ ಹೆಣವಾಗಿ ಬಿದ್ದಿದ್ದ (Murder Case)! ಆತನ ಹೆಂಡತಿ ಅಯ್ಯೋ ಅಯ್ಯೋ ನನ್ನ ಗಂಡನಿಗೇನಾಯಿತು ಎಂದು ಬೊಬ್ಬಿಡಲು ಶುರು ಮಾಡಿದ್ದಾಳೆ!

ಇದು ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ವ್ಯಾಪ್ತಿಯಲ್ಲಿ ನಡೆದ ವೆಂಕಟರಮಣ (35) ಎಂಬವನ ಸಾವಿನ ಕಥೆ. ವೆಂಕಟರಮಣ ಹಗಲಿನಲ್ಲಿ ಒಂದು ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ ಎಚ್‌.ಎಸ್‌.ಆರ್‌‌ ಲೇಔಟ್‌ನಲ್ಲಿನ ಒಂದು ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ.

ಗಂಡ ಹೀಗೆ ಹಗಲು ರಾತ್ರಿ ದುಡಿಯುತ್ತಿದ್ದರೆ ಮನೆಯಲ್ಲೇ ಇದ್ದ ಹೆಂಡತಿ ನಂದಿನಿ ಆಗಾಗ ಆಂಧ್ರ ಪ್ರದೇಶದಲ್ಲಿರುವ ತನ್ನ ಪ್ರಿಯಕರನನ್ನು ಕರೆಸಿಕೊಂಡು ಆಸೆ ಪೂರೈಸಿಕೊಳ್ಳುತ್ತಿದ್ದಳು. ಕಳೆದ ಜನವರಿ 6ರಂದು ಕೂಡಾ ಹೀಗೇ ಆಗಿತ್ತು!

ಗಂಡ ಕೆಲಸಕ್ಕೆ ಹೋಗಿರುವುದನ್ನು ಖಚಿತಪಡಿಸಿಕೊಂಡ ನಂದಿನಿ ತನ್ನ ಪ್ರಿಯಕರ ನಿತೀಶ್‌ ಕುಮಾರ್‌ನನ್ನು ಕರೆಸಿಕೊಂಡಿದ್ದಳು. ನಿತೀಶ್‌ ಮತ್ತು ನಂದಿನಿ ಇಬ್ಬರೂ ಆಂಧ್ರ ಪ್ರದೇಶದ ಸತ್ಯ ಸಾಯಿ ತಾಲ್ಲೂಕಿನವರು. ಬಾಲ್ಯದಿಂದ ಸ್ನೇಹಿತರಾಗಿದ್ದವರು ಬಳಿಕ ಪ್ರೇಮಿಗಳಾಗಿದ್ದಾರೆ. ಆದರೆ, ಅದ್ಯಾಕೋ ಗೊತ್ತಿಲ್ಲ. ಪ್ರೀತಿಸಿದವರು ಮದುವೆಯಾಗಲಿಲ್ಲ. ಇಬ್ಬರಿಗೂ ಬೇರೆ ಬೇರೆ ಮದುವೆಯಾಗಿದೆ.

ಮದುವೆಯಾದ ನಂದಿನಿ ಬೆಂಗಳೂರಿಗೆ ಬಂದಿದ್ದಾಳೆ. ಆದರೆ ಗಂಡ ಹಗಲು ರಾತ್ರಿ ಡಬಲ್‌ ಡ್ಯೂಟಿ ಮಾಡುತ್ತಿರುವುದರ ಲಾಭ ಪಡೆದ ನಂದಿನಿ ಆಗಾಗ ನಿತೇಶ್‌ ಕುಮಾರ್‌ನನ್ನು ಕರೆಸಿಕೊಳ್ಳುತ್ತಿದ್ದಳು. ಅವರಿಬ್ಬರು ನಿರಂತರವಾಗಿ ಸರಸದಲ್ಲಿ ತೊಡಗಿದ್ದರು.

ಹಾಗೇನೇ ಅವನು ಜನವರಿ 6ರಂದು ನಂದಿನಿ ಮನೆಗೆ ಬಂದಿದ್ದ. ಆದರೆ, ‌ ಆವತ್ಯಾಕೋ ಹೋದ ಕೆಲಸ ಆಗಿಲ್ಲ ಎಂದು ವೆಂಕಟರಮಣ ಮನೆಗೆ ಮರಳಿದ್ದ! ಅವನನ್ನು ಕಂಡು ಅವಾಕ್ಕಾದ ಪ್ರೇಮಿಗಳು ಹೀಗೇ ಬಿಟ್ಟರೆ ಆಗದು ಎಂದು ಆತನನ್ನು ಹಿಡಿದು ಒರಳು ಕಲ್ಲಿನೊಂದಿಗೆ ಜಜ್ಜಿ ಕೊಲೆ ಮಾಡಿದ್ದಾರೆ.

ಅಲ್ಲಿಂದ ಶುರುವಾಯಿತು ನಾಟಕ!

ಈ ನಡುವೆ, ವೆಂಕಟರಮಣನನ್ನು ಕೊಲೆ ಮಾಡಿದ ಬಳಿಕ ಅವರಿಬ್ಬರು ಶವವನ್ನು ಹೊರಗಿನ ಶೌಚಾಲಯದ ಬಳಿ ಹಾಕಿದ್ದಾರೆ. ನಿತೇಶ್‌ ಕುಮಾರ್‌ ತಪ್ಪಿಸಿಕೊಂಡಿದ್ದಾನೆ. ಇತ್ತ ನಂದಿನಿ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾಳೆ. ನನ್ನ ಗಂಡ ಹೊರಗೆ ಹೋದವರು ಹುಷಾರಿಲ್ಲ ಎಂದು ಮರಳಿ ಬಂದರು. ಬಂದವರೇ ಟಾಯ್ಲೆಟ್‌ಗೆ ಹೋಗಿ ಅಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದಳು.

ಕೂಡಲೇ ಪೊಲೀಸರು ಆಂಬ್ಯುಲೆನ್ಸ್‌ ಸಹಿತ ಧಾವಿಸಿ ಆತನ ಶವವನ್ನು ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿದರು. ಆಗ ಇದೊಂದು ಹೃದಯಾಘಾತವಲ್ಲ, ಕೊಲೆ ಎನ್ನುವುದು ಅವರಿಗೆ ಸಂಶಯ ಬಂತು. ಇಲ್ಲಿ ನಂದಿನಿಯೋ ಪರಮ ಪತಿವೃತೆಯಂತೆ ಗಂಡನನ್ನು ಕಳೆದುಕೊಂಡ ಹೆಣ್ಣಿನ ನೋವಿನಲ್ಲಿ ಗೋಳಾಡುತ್ತಿದ್ದಳು! ಆದರೆ, ಪೊಲೀಸರಿಗೆ ಆಕೆಯ ಮೇಲೆ ಮೊದಲೇ ಸಂಶಯ ಬಂದಿತ್ತು. ಸ್ಥಳ ಪರಿಶೀಲನೆ, ಹೆಂಡತಿಯ ನಡವಳಿಕೆಯಿಂದ ಸಣ್ಣದೊಂದು ಗುಮಾನಿ ಬಂದಿತ್ತು. ಇತ್ತ ಮರಣೋತ್ತರ ವರದಿಯೂ ಬರುತ್ತಿದ್ದಂತೆಯೇ ಅದು ದೃಢವಾಯಿತು

ಮೊದಲೇ ಪತ್ನಿ ನಂದಿನಿ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಮರಣೋತ್ತರ ವರದಿ ಬಂದ ಬಳಿಕ ತಮ್ಮ ಸ್ಟೈಲ್ ನಲ್ಲಿ‌ ವಿಚಾರಣೆ ನಡೆಸಿದರು. ಆಗ ತಾನೇ ಪ್ರಿಯಕರ ನಿತೀಶ್ ಕುಮಾರ್ ಜೊತೆ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇದೀಗ ಆಕೆ ಮತ್ತು ಪ್ರಿಯಕರ ನಿತೀಶ್‌ ಕುಮಾರ್‌ನನ್ನು ಬಂಧಿಸಲಾಗಿದೆ. ಇಬ್ಬರನ್ನೂ ಬಂಧಿಸಿದ ಹೆಚ್ ಎಸ್ ಆರ್ ಲೇಔಟ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Exit mobile version