Site icon Vistara News

Nadageethe Row : ಕೆಟ್ಟ ಮೇಲೆ ಬುದ್ಧಿ; ವಿವಾದಿತ ನಾಡಗೀತೆ ಸುತ್ತೋಲೆ ಬದಲಿಸಿದ ಸರ್ಕಾರ!

Nadageethe row Amendment old and New

ಬೆಂಗಳೂರು: ಕುವೆಂಪು ವಿರಚಿತ ನಾಡಗೀತೆಯನ್ನು (Nadageethe Row) ಖಾಸಗಿ ಶಾಲೆಗಳಲ್ಲಿ ಹಾಡುವುದು ಕಡ್ಡಾಯವಲ್ಲ, ಐಚ್ಛಿಕ ಎಂಬ ಸುತ್ತೋಲೆ (Government Circular) ಹೊರಡಿಸಿ ಭಾರಿ ಎಡವಟ್ಟಿನ ಮೂಲಕ ಮುಖಭಂಗಕ್ಕೆ ಒಳಗಾಗಿದ್ದ ರಾಜ್ಯ ಸರ್ಕಾರ (Karnataka Government) ಇದೀಗ ತಿದ್ದುಪಡಿಗೇ ತಿದ್ದುಪಡಿ ಮಾಡಿ ಮುಖ ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಹೊಸ ಸುತ್ತೋಲೆ ಪ್ರಕಾರ, ಖಾಸಗಿ ಶಾಲೆಗಳಲ್ಲೂ ನಾಡಗೀತೆ ಹಾಡುವುದು ಕಡ್ಡಾಯ (Nadageethe Compulsory in private schools also) ಎಂದು ಇದರಲ್ಲಿ ಹೇಳಲಾಗಿದೆ.

ನಾಡಗೀತೆಗೆ ಸಂಬಂಧಿಸಿ ಹೈಕೋರ್ಟ್‌ಗೆ ನೀಡಬೇಕಾಗಿದ್ದ ದಾಖಲೆಯಲ್ಲಿ ಸರ್ಕಾರ ಈ ಎಡವಟ್ಟು ಮಾಡಿಕೊಂಡಿತ್ತು ಎನ್ನಲಾಗಿದೆ. ಇದು ಪ್ರತಿಪಕ್ಷಗಳ ತೀವ್ರ ವಾಗ್ದಾಳಿ, ಗೇಲಿಗೆ ಒಳಗಾದ ಹಿನ್ನೆಲೆಯಲ್ಲಿ ಸರ್ಕಾರ ಆ ಸುತ್ತೋಲೆಯಲ್ಲೇ ಬದಲಾವಣೆ ಮಾಡಿದೆ.

ಹಿಂದಿನ ಸುತ್ತೋಲೆಯಲ್ಲಿ ಏನು ಹೇಳಲಾಗಿತ್ತು?

ಕುವೆಂಪು ಅವರ ‘ಜಯ ಭಾರತ ಜನನಿಯ ತನುಜಾತೆ’ (Jaya Bharatha Jananiya Thanujathe) ಕವನವನ್ನು ‘ನಾಡಗೀತೆ’ಯಾಗಿ ಘೋಷಿಸಿ ಈ ಹಿಂದೆ ಸರಕಾರ ಹೊರಡಿಸಿದ್ದ ಆದೇಶದಲ್ಲಿ ಒಂದು ತಿದ್ದುಪಡಿಯನ್ನು ಪ್ರಕಟಿಸಿ ಫೆ. 16ರಂದು ಹೊಸ ಆದೇಶವನ್ನು ಹೊರಟಿಸಲಾಗಿದೆ. ‘ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂಬುದು ಮೂಲ ಆದೇಶ. ಅದನ್ನು ‘ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

ಮೊದಲ ತಿದ್ದುಪಡಿ ಮಾಡಿದ ಸುತ್ತೋಲೆ.. ಇದರಲ್ಲಿ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ಎಂದಿದೆ.

ಇದನ್ನೂ ಓದಿ : Nadageethe Row : ಮಿಷನರಿಗಳಿಗೆ ಮಣಿದ ಸರ್ಕಾರ, ಡೋಂಗಿ ಕನ್ನಡ ಪ್ರೇಮಿ ಸಿದ್ದರಾಮಯ್ಯ; ಬಿಜೆಪಿ ಆಕ್ರೋಶ

ಬದಲಾದ ತಿ‌ದ್ದುಪಡಿ ಸುತ್ತೋಲೆಯಲ್ಲಿ ಏನಿದೆ?

ಸರ್ಕಾರ ಬುಧವಾರ ಮಧ್ಯಾಹ್ನದ ಹೊತ್ತಿಗೆ ತಿದ್ದುಪಡಿ ಸುತ್ತೋಲೆಯನ್ನು ಪ್ರಕಟಿಸಿದೆ. ಅಂದರೆ ಮೂಲದಲ್ಲಿ ನಾಡಗೀತೆಯನ್ನು ಎಲ್ಲರೂ ಹಾಡುವುದು ಕಡ್ಡಾಯ ಎಂಬ ಸೂಚನೆಯಲ್ಲಿ ಸಣ್ಣದಾಗಿ ಬದಲಾವಣೆ ಮಾಡಲಾಗಿತ್ತು. ಎಲ್ಲರಿಗೂ ಕಡ್ಡಾಯ ಎಂಬ ಸೂಚನೆಯಲ್ಲಿ ಖಾಸಗಿ ಶಾಲೆಗಳಿಗೆ ವಿನಾಯಿತಿ ನೀಡಲಾಗಿತ್ತು. ಈಗ ಪ್ರಕಟಿಸಿರುವ ತಿದ್ದುಪಡಿಯಲ್ಲಿ ಹಿಂದಿನ ಅಂಶವನ್ನೇ ಉಳಿಸಿಕೊಳ್ಳಲಾಗಿದೆ. ಅಂದರೆ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯ ಎಂಬ ಅಂಶವನ್ನು ಉಲ್ಲೇಖಿಸಿ ಅದೇ ಅಂಶ ಮುಂದುವರಿಯುತ್ತದೆ ಎಂದು ಎರಡು ಬಾರಿ ಹೇಳಲಾಗಿದೆ.

ಇದು ತಿದ್ದುಪಡಿಗೇ ತಿದ್ದುಪಡಿ ಮಾಡಿ ಪ್ರಕಟಿಸಿದ ಹೊಸ ಸುತ್ತೋಲೆ

ಇದನ್ನೂ ಓದಿ: Nadageethe Row : ಇದು ಎಡವಟ್ಟು ಗಿರಾಕಿ ಸರ್ಕಾರ, ಇಲ್ಲಿ ಅಧಿಕಾರಿಗಳದ್ದೇ ದರ್ಬಾರ್‌; ಅಶ್ವತ್ಥನಾರಾಯಣ

ಬಿಜೆಪಿಯಿಂದ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ತ್ವರಿತ ಕ್ರಮ

ರಾಜ್ಯ ಸರ್ಕಾರ ನಾಡಗೀತೆಯನ್ನು ಖಾಸಗಿ ಶಾಲೆಗಳಲ್ಲಿ ಹಾಡಬೇಕಾಗಿಲ್ಲ ಎಂಬ ಸರ್ಕಾರದ ಹೊಸ ಸುತ್ತೋಲೆಯನ್ನು ಮಿಷನರಿಗಳ ಒತ್ತಡಕ್ಕೆ ಮಣಿದ ಸರ್ಕಾರ ಎಂಬಂತೆ ಬಿಜೆಪಿ ಬಿಂಬಿಸಿತ್ತು. ಅದರ ಜತೆಗೆ ಪದೇಪದೆ ಸರ್ಕಾರ ಎಡವಟ್ಟುಗಳನ್ನು ಮಾಡುತ್ತಿದ್ದು, ಇದು ಅಧಿಕಾರಿಗಳ ದರ್ಬಾರಿನ ಸರ್ಕಾರ ಎಂದು ವ್ಯಾಖ್ಯಾನಿಸಿತ್ತು. ಹೀಗೆ ವಿದ್ಯಮಾನ ಬೇರೆ ಬೇರೆ ಸ್ವರೂಪಗಳನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತ್ವರಿತವಾಗಿ ಸ್ಪಂದಿಸಿ ತಿದ್ದುಪಡಿಯನ್ನು ತಿದ್ದುಪಡಿ ಮಾಡಿದೆ. ಆದರೆ, ಈ ಮೂಲ ತಿದ್ದುಪಡಿಯನ್ನು ಮಾಡಿದ್ದರ ಹಿಂದಿನ ಉದ್ದೇಶ ನಿಗೂಢವಾಗಿದೆ.

Exit mobile version