Site icon Vistara News

Namma Metro : ಬಟ್ಟೆ ಕ್ಲೀನ್‌ ಇಲ್ಲ ಎಂದು ರೈತನಿಗೆ ಅಪಮಾನ ಮಾಡಿದ ಮೆಟ್ರೋ ಸಿಬ್ಬಂದಿ ವಜಾ

Namma Metro Farmer dismiss

ಬೆಂಗಳೂರು: ಹಾಕಿಕೊಂಡಿರುವ ಬಟ್ಟೆ ಕ್ಲೀನ್‌ ಇಲ್ಲ ಎಂಬ ಕಾರಣಕ್ಕಾಗಿ ರೈತರೊಬ್ಬರನ್ನು ಮೆಟ್ರೋ (Namma Metro) ಪ್ರವೇಶಿಸಲು (Metro denies entry to Farmer) ಅವಕಾಶ ನೀಡದೆ ಅಪಮಾನ ಮಾಡಿದ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ರಾಜಾಜಿ ನಗರದ ಮೆಟ್ರೋ ಸ್ಟೇಷನ್‌ ನಲ್ಲಿ ತಲೆ ಮೇಲೆ ಮೂಟೆ ಹೊತ್ತು ಬಂದ ರೈತನೊಬ್ಬನನ್ನು ಒಳಗೆ ಬಿಡದೆ ಅಪಮಾನಿಸಿದ ಘಟನೆಯನ್ನು ಸಹಪ್ರಯಾಣಿಕರು ವಿಡಿಯೊ ಮಾಡಿ ಜಾಲತಾಣದಲ್ಲಿ ಹಾಕಿದ್ದರು. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಮೆಟ್ರೋ ಸಿಬ್ಬಂದಿ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತ BMRCL ಮುಜುಗರಕ್ಕೆ ಕಾರಣರಾದ ಸಿಬ್ಬಂದಿ ಅಮಾನತು ಮಾಡಿದೆ. ಈ ಬಗ್ಗೆ X ನಲ್ಲಿ ಅಧಿಕೃತ ಮಾಹಿತಿ ನೀಡಿ ವಿಷಾದ ವ್ಯಕ್ತಪಡಿಸಿದ BMRCL ಪ್ರಯಾಣಿಕರಿಗೆ ಉಂಟಾದ ಅನುಕೂಲತೆಗೆ ವಿಷಾದಿಸಿದೆ.

ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಿ ಭದ್ರತಾ ಮೇಲ್ವಿಚಾರಕರ ಸೇವೆಯನ್ನು ವಜಾಗೊಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನನುಕೂಲತೆಗಾಗಿ ನಿಗಮವು ವಿಷಾದಿಸುತ್ತದೆ ಎಂದು ನಮ್ಮ ಮೆಟ್ರೋ ಹೇಳಿದೆ.

ಅಧಿಕಾರಿಗಳ ವಿರುದ್ಧ ಕ್ರಮ ಎಂದ ಸಚಿವ ಚಲುವರಾಯ ಸ್ವಾಮಿ

ಈ ನಡುವೆ, ಮೆಟ್ರೋದಲ್ಲಿ ರೈತನ ತಡೆದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಚಲುವರಾಯ ಸ್ವಾಮಿ,
ಅದು ತಪ್ಪು, ಆತ ಒಳ್ಳೆಯ ಬಟ್ಟೆಯನ್ನೇ ಹಾಕಿದ್ದಾನೆ, ಬಟ್ಟೆ ಹರಿದು ಹೋಗಿದೆ ಅನ್ನೋದೆಲ್ಲ ನಮ್ಮ ಸಂಸ್ಕಾರ ಅಲ್ಲ. ಅವರವರ ಶಕ್ತಿ ಅನುಸಾರ ಬಟ್ಟೆ ಧರಿಸುತ್ತಾರೆ. ರೈತನನ್ನು ಯಾರೇ ತಡೆದಿದ್ದರೂ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು. ತಡೆದು ಅಪಮಾನ ಮಾಡಿದ್ದು ಅಕ್ಷಮ್ಯ ಅಪರಾಧ ಎಂದಿರುವ ಅವರು ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ : Namma Metro : ಬಟ್ಟೆ ಕ್ಲೀನ್‌ ಇಲ್ಲ ಎಂದು ರೈತನಿಗೆ ಪ್ರವೇಶ ನಿರಾಕರಿಸಿದ ಮೆಟ್ರೋ; ನೆಟ್ಟಿಗರ ಆಕ್ರೋಶ

ಮೆಟ್ರೋ ನಿಲ್ದಾಣದಲ್ಲಿ ಆಗಿದ್ದೇನು?

ತಲೆಯ ಮೇಲೆ ಬಟ್ಟೆಯ ಮೂಟೆಯೊಂದನ್ನು ಹೊತ್ತುಕೊಂಡು ಬಂದ ವ್ಯಕ್ತಿಯೊಬ್ಬರನ್ನು ಮೆಟ್ರೋ ಸುರಕ್ಷತಾ ತಪಾಸಣೆ ಸಿಬ್ಬಂದಿ ತಡೆದಿದ್ದಾರೆ. ಆಗ ಅದನ್ನು ನೋಡಿದ ಸಹಪ್ರಯಾಣಿಕರೊಬ್ಬರು ಅವರನ್ನು ಯಾಕೆ ಒಳಗೆ ಬಿಡುತ್ತಿಲ್ಲ ಎಂದು ಕೇಳಿದ್ದಾರೆ. ಆಗ ಸಿಬ್ಬಂದಿ ಅವರ ಬಟ್ಟೆ ಗಲೀಜಾಗಿದೆ, ಹೀಗಿದ್ದರೆ ಸಹ ಪ್ರಯಾಣಿಕರಿಗೆ ಅಸಹ್ಯವಾಗುತ್ತದೆ. ಆ ಕಾರಣಕ್ಕಾಗಿ ಒಳಗೆ ಬಿಡಲಾಗುತ್ತಿಲ್ಲ ಎಂದು ಹೇಳಿದರು.

ಇದಕ್ಕೆ ಸಹಪ್ರಯಾಣಿಕರು ಭದ್ರತಾ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮೆಟ್ರೋ ಪ್ರಯಾಣಿಕರು ಯಾವ ರೀತಿಯ ಬಟ್ಟೆ ಧರಿಸಬೇಕು ಎಂದು ಎಲ್ಲಾದರೂ ನಿಯಮವಿದೆಯಾ ಎಂದು ಕೇಳಿದ ಸಹಪ್ರಯಾಣಿಕರು ರೈತರಿಗೆ ಈ ರೀತಿ ಅಪಮಾನ ಮಾಡಿದ್ದು ಸರಿಯಾ ಎಂದು ಕೇಳಿದ್ದಾರೆ.

ಬಟ್ಟೆ ಕೊಳಕಾಗಿದೆ ಎಂಬ ಕಾರಣಕ್ಕೆ ಒಳಗೆ ಬಿಡುವುದಿಲ್ಲ ಅಂತೀರಲ್ಲಾ.. ನನ್ನ ಬಟ್ಟೆ ಲಕಲಕ ಹೊಳೆಯುತ್ತಿದೆ. ಹಾಗಿದ್ದರೆ ನನ್ನನ್ನು ಫ್ರೀ ಆಗಿ ಕರೆದುಕೊಂಡು ಹೋಗುತ್ತೀರಾ ಎಂದು ಕೇಳಿದ್ದಾರೆ. ಕೊನೆಗೆ ಸಿಬ್ಬಂದಿಯ ಯಾವ ಮಾತಿಗೂ ಕ್ಯಾರೇ ಅನ್ನದೆ ರೈತನನ್ನು ಮೆಟ್ರೋ ರೈಲಿನಲ್ಲಿ ಕರೆದುಕೊಂಡು ಹೋಗಿದ್ದಾರೆ.

ಅವರ ಮೂಟೆಯಲ್ಲಿ ಏನಾದರೂ ವಸ್ತುಗಳಿವೆ ಎಂಬ ಕಾರಣಕ್ಕಾಗಿ ಅವರನ್ನು ತಡೆದರೆ ನಾನೇನೂ ಮಾತನಾಡುವುದಿಲ್ಲ. ಆದರೆ, ಒಬ್ಬ ರೈತನ ಬಟ್ಟೆ ಕೊಳಕಾಗಿದೆ ಎಂಬ ಕಾರಣಕ್ಕಾಗಿ ಆತನನ್ನು ಅಪಮಾನಿಸಬಾರದು ಎಂದು ಸಹಪ್ರಯಾಣಿಕ ಲೈವ್‌ ವಿಡಿಯೊದಲ್ಲಿ ಹೇಳುತ್ತಾರೆ.

ಇದನ್ನೂ ಓದಿ: Namma Metro : ಮೆಟ್ರೋ ಪ್ರಯಾಣಿಕರಿಗೆ ‌Good News; ಈಗ 3 ನಿಮಿಷಕ್ಕೊಂದು ರೈಲು!

Exit mobile version