Site icon Vistara News

Bharat Jodo | ಸೋನಿಯಾ, ರಾಹುಲ್ ಪ್ರಯತ್ನದಿಂದ ಕಲ್ಯಾಣ ಕರ್ನಾಟಕಕ್ಕೆ 371ಜೆ ಸ್ಥಾನಮಾನ: ಖರ್ಗೆ

Bhart Jodo

ಬಳ್ಳಾರಿ: ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಸತತ ಪ್ರಯತ್ನದಿಂದ ಕಲ್ಯಾಣ ಕರ್ನಾಟಕಕ್ಕೆ 371(ಜೆ) ವಿಶೇಷ ಸ್ಥಾನಮಾನ ಸಾಧ್ಯವಾಯಿತು ಎಂದು ಎಐಸಿಸಿ ಅಧ್ಯಕ್ಷ ಅಭ್ಯರ್ಥಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ (Bharat Jodo) ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 371(ಜೆ) ವಿಶೇಷ ಸ್ಥಾನ ಮಾನ ದೊರೆತಿದ್ದರಿಂದ ನಮ್ಮ ಮಕ್ಕಳು ಸರ್ಕಾರಿ ನೌಕರಿಯನ್ನು ಸರಾಗವಾಗಿ ಪಡೆಯುಲು ಸಾಧ್ಯವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ನ ನಾಯಕರಾಗಿರುವ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಪಾದಯಾತ್ರೆಗಾಗಿ 3,500 ಕಿ.ಮೀ ನಡೆಯಲಿದ್ದಾರೆ. ಈಗಾಗಲೇ ಅವರು 1000 ಕಿ.ಮೀ. ನಡೆದಿದ್ದಾರೆ. ಹಾಗಾಗಿ, ಅವರ ಜತೆ ನಾವು ನಾವೆಲ್ಲರೂ ಇರಬೇಕು. ಅವರ ಯಾವ ಉದ್ದೇಶಕ್ಕಾಗಿ ನಡೆಯುತ್ತಿದ್ದಾರೋ ಆ ಉದ್ದೇಶಕ್ಕೆ ಶಕ್ತಿ ತುಂಬ ಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಯಕರ್ತರಲ್ಲಿ ವಿನಂತಿ ಮಾಡಿಕೊಂಡರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ
ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದೊಂದು ಕಮಿಷನ್ ಸರ್ಕಾರವಾಗಿದೆ. ಹಾಗಾಗಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಬೇಕು. ಆ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.

ಆರ್‌ಎಸ್‌ಎಸ್ ಹಾಗೂ ಬಿಜೆಪಿಗಳು ದೇಶದ ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಅವರ ಹುನ್ನಾರವನ್ನು ನಾವು ವಿಫಲಗೊಳಿಸಬೇಕು ಎಂದರೆ, ಈ ಭಾಗದಿಂದ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್‌ ಪಕ್ಷಕ್ಕೆ ಗೆಲ್ಲಿಸಿಕೊಡಬೇಕು. ಆ ಮೂಲಕ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಕೈ ಬಲಪಡಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಾಂಗ್ರೆಸ್‌ನಿಂದ ಒಂದುಗೂಡಿಸುವ ಕೆಲಸ
ಒಂದು ಸ್ಪಷ್ಟ ಉದ್ದೇಶಕ್ಕಾಗಿ ಭಾರತ್ ಜೋಡೋ ಪಾದಯಾತ್ರೆ ನಡೆಯುತ್ತಿದೆ ಎಂದು ಹೇಳಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ಕರ್ನಾಟಕದಿಂದ ಇಂದಿರಾ ಗಾಂಧಿ ಅವರು ಲೋಕಸಭೆಗೆ ಸ್ಪರ್ಧಿಸಿದಾಗ ನಾನು ಕಾರ್ಯಕರ್ತನಾಗಿ ಕೆಲಸ ಮಾಡಿದ್ದೆ ಎಂದು ಈ ಹಿಂದಿನ ದಿನಗಳನ್ನು ನೆನಪಿಸಿಕೊಂಡರು.

ಇಂದಿರಾ ಗಾಂಧಿ ಇದ್ದಾಗಲೂ ಕೆಲವರು ದೇಶ ಒಡೆಯುವ ಕೆಲಸ ಮಾಡುತ್ತಿದ್ದರು. ಅವರ ಪ್ರಯತ್ನವನ್ನು ಕಾಂಗ್ರೆಸ್ ವಿಫಲಗೊಳಿಸಿತು. ಇದಕ್ಕಾಗಿ ರಾಜೀವ್ ಗಾಂಧಿ, ಇಂದಿರಾಗಾಂಧಿ ಹತ್ಯೆಯೂ ಸಹ ಈ ದೇಶದಲ್ಲಿ ಆಯ್ತು.ಈಗ ದೇಶ ಜೊಡಿಸುವ ಕೆಲಸ ಈಗ ರಾಹುಲ್ ಗಾಂಧಿ ಮಾಡ್ತಾ ಇದ್ದಾರೆ. ಅವರಿಗೆ ನಾವು ಬೆಂಬಲವಾಗಿ ನಿಲ್ಲಬೇಕಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ | Bharat Jodo Yatra | ಭಾರತ್ ಜೋಡೋ ಯಾತ್ರೆ ರಾಷ್ಟ್ರೀಯ ಕಾಂಗ್ರೆಸ್, ದೇಶಕ್ಕೆ ಐತಿಹಾಸಿಕ ಘಟನೆ

Exit mobile version