Site icon Vistara News

ಕನ್ನಡ ನಾಮಫಲಕ ಹೋರಾಟ ತಾರಕಕ್ಕೆ; ನಾಳೆ ಕರವೇ ಮೆರವಣಿಗೆ; ಕನ್ನಡ ಫಲಕ ಹಾಕದಿದ್ದರೆ ಹುಷಾರ್!

Karnataka Rakshana Vedike TA Narayana Gowda

ಬೆಂಗಳೂರು: ಡಿಸೆಂಬರ್‌ 27ರ ಒಳಗೆ ಬೆಂಗಳೂರಿನ ಎಲ್ಲ ವ್ಯಾಪಾರ, ಉದ್ಯಮಗಳ ನಾಮಫಲಕಗಳಲ್ಲಿ (Name plates of Shops) ಕನ್ನಡವೇ ಅಗ್ರಸ್ಥಾನ ಪಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಗಡುವನ್ನು ವಿಧಿಸಿತ್ತು. ಆದರೆ, ಕೆಲವು ಮಾಲೀಕರು ಕರವೇಯ ಈ ಅಂತಿಮ ಗಡುವಿಗೆ ಸವಾಲು ಹಾಕಿದ್ದರಿಂದ ಆಕ್ರೋಶ ಭುಗಿಲೆದ್ದಿದೆ. ಕರ್ನಾಟಕ ರಕ್ಷಣಾ ವೇದಿಕೆಯು ತಾನು ನೀಡಿದ ಅಂತಿಮ ಗಡುವಿನ ದಿನವಾದ ಡಿಸೆಂಬರ್‌ 27ರಂದು ಬೆಂಗಳೂರಿನಲ್ಲಿ ಬೃಹತ್‌ ಮೆರವಣಿಗೆಯನ್ನು (Procession in Bangalore) ಆಯೋಜಿಸಿದ್ದು, ಈ ವೇಳೆ ಕನ್ನಡ ನಾಮಫಲಕ ಇಲ್ಲದ ಅಂಗಡಿ, ಉದ್ಯಮಗಳು ಕಂಡರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ. ಹೀಗಾಗಿ ಸ್ವಲ್ಪಮಟ್ಟಿಗೆ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯೂ ಎದುರಾಗುವ ಸ್ಥಿತಿ ಕಂಡುಬಂದಿದೆ.

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ, ನೆಲದ ಭಾಷೆ. ಕರ್ನಾಟಕದ ಎಲ್ಲ ವ್ಯಾಪಾರ, ಉದ್ದಿಮೆಗಳ ನಾಮಫಲಕಗಳಲ್ಲಿ ಕನ್ನಡವೇ ಅಗ್ರಸ್ಥಾನ ಪಡೆಯಬೇಕು ಎಂಬ ಸರ್ಕಾರದ ನಿಯಮಾವಳಿಗಳು ಇದ್ದರೂ ಸಹ ಕೆಲವು ಉದ್ಯಮಿಗಳು, ವ್ಯಾಪಾರಸ್ಥರು ಕನ್ನಡದ ಅಸ್ಮಿತೆಯನ್ನು ಅಗೌರವದಿಂದ ಕಾಣುತ್ತ, ಕನ್ನಡದಲ್ಲಿ ನಾಮಫಲಕಗಳನ್ನು ಹಾಕದೇ ಉಡಾಫೆಯಿಂದ ವರ್ತಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಳೆದ ನವೆಂಬರ್ 1ರಿಂದ ಸತತವಾಗಿ ರಾಜ್ಯಾದ್ಯಂತ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಜಾಗೃತಿ ಅಭಿಯಾನ ನಡೆಸುತ್ತ ಬಂದಿದೆ. ಆದರೂ ಕೆಲವು ವಲಸಿಗ ದುರಹಂಕಾರಿ ವ್ಯಾಪಾರಸ್ಥರು ನಾಮಫಲಕ ಬದಲಿಸದ ಹಿನ್ನೆಲೆಯಲ್ಲಿ ಡಿಸೆಂಬರ್ 27ರೊಳಗೆ ನಾಮಫಲಕ ಕನ್ನಡೀಕರಿಸಲು ಕರ್ನಾಟಕ ರಕ್ಷಣಾ ವೇದಿಕೆ ಗಡುವು ನೀಡಿತ್ತು. ಇದೀಗ ನಾಳೆ (ಡಿಸೆಂಬರ್ 27) ಬುಧವಾರ ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ನಾಡಪ್ರಭು ಕೆಂಪೇಗೌಡರ ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ ಟೋಲ್ ಬಳಿ ಸಮಾವೇಶಗೊಂಡು, ಅಲ್ಲಿಂದ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಸಲಿದ್ದಾರೆ ಎಂದು ಕರವೇ ಹೇಳಿದೆ.

ಕರ್ನಾಟಕ ರಕ್ಷಣಾ ವೇದಿಕೆಯು ಹಿಂದಿನಿಂದಲೂ ಕನ್ನಡ ನಾಮಫಲಕಕ್ಕಾಗಿ ಹೋರಾಟ ನಡೆಸುತ್ತಿದೆ. ಕಳೆದ ನವೆಂಬರ್‌ 1ರಿಂದ ಅದು ರಾಜ್ಯಾದ್ಯಂತ ಜಾಗೃತಿ ಅಭಿಯಾನ ನಡೆಸುತ್ತಿದೆ. ಆದರೆ, ಕೆಲವು ಅಂಗಡಿಗಳು ಮತ್ತು ಉದ್ಯಮಗಳು ಉಡಾಫೆ ವರ್ತನೆ ತೋರಿಸುತ್ತಿರುವುದು ಕರವೇ ನಾಯಕರನ್ನು ಕೆರಳಿಸಿದೆ. ಹೀಗಾಗಿ ಡಿಸೆಂಬರ್‌ 27ರಂದು ಜಾಗೃತಿ ಅಭಿಯಾನದ ಭಾಗವಾಗಿ ಮೆರವಣಿಗೆ ನಡೆಯಲಿದೆ. ಆದರೆ, ಮೆರವಣಿಗೆ ಸಾಗುವ ದಾರಿಯಲ್ಲಿ ನಾಮಫಲಕ ಹಾಕದೆ ಉಡಾಫೆ ತೋರಿದರೆ ಅಂಗಡಿಗಳ ಮುಂದೆ ಸಂಘರ್ಷ ನಡೆಯುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ.

ಯಾಕೆ ಈ ಆಂದೋಲನ : ಕರವೇ ಅಧ್ಯಕ್ಷ ನಾರಾಯಣ ಗೌಡರು ಹೇಳುವುದೇನು?

ಕರ್ನಾಟಕದಲ್ಲಿ ಕನ್ನಡ ನಾಮಫಲಕಗಳು ಇರಬೇಕು ಎಂಬುದು ಕನಿಷ್ಠ ಸಾಮಾನ್ಯ ಜ್ಞಾನ. ಆದರೆ ಕರ್ನಾಟಕವನ್ನು ಕಬಳಿಸಲು ಹೊರಟ ಶಕ್ತಿಗಳು ಬೇಕೆಂದೇ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿವೆ. ಅದಕ್ಕಾಗಿಯೇ ನಾವು #ಕನ್ನಡದಲ್ಲಿನಾಮಫಲಕ ಆಂದೋಲನಕ್ಕೆ ಕೈ ಹಾಕಿದ್ದೇವೆ. ಕೊನೆಯ ನಾಮಫಲಕ ಬದಲಾಗುವವರೆಗೆ ಈ ಆಂದೋಲನ ನಿಲ್ಲುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಟಿ.ಎ ನಾರಾಯಣ ಗೌಡರು (KARAVE President TA Narayana Gowda) ಹೇಳಿದ್ದಾರೆ.

ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಆಗಿದ್ದೇ ಆಯಾ ಭಾಗದ ನುಡಿಪರಂಪರೆಯನ್ನು ರಕ್ಷಿಸಲು, ಗೌರವಿಸಲು. ಆದರೆ ಕರ್ನಾಟಕದಲ್ಲಿ ಮಾತ್ರ ಕನ್ನಡಕ್ಕೆ ಅಗೌರವ. ಇದನ್ನು ಹೇಗೆ ಸಹಿಸುವುದು, ಯಾಕಾಗಿ ಸಹಿಸುವುದು? ನಾವು ಹಿಂದಿ ರಾಜ್ಯಗಳಲ್ಲಿ ಕನ್ನಡ ನಾಮಫಲಕ ಕೇಳುತ್ತಿದ್ದೇವೆಯೇ? ನಮ್ಮ ನಾಡಿನಲ್ಲೇ ನಮ್ಮ ನುಡಿ ಸೊರಗಬೇಕೇ? ಎನ್ನುವುದು ನಾರಾಯಣ ಗೌಡರ ಪ್ರಶ್ನೆ.

ದುರಹಂಕಾರ ತೋರಿದ ಮಾಲೀಕರು; ಕರವೇ ಆಕ್ರೋಶ

ಕನ್ನಡದಲ್ಲಿ ನಾಮಫಲಕ ಹಾಕಿ ಎಂದು ಮನವಿ ಪತ್ರ ನೀಡಿದ್ದಕ್ಕೆ ನನ್ನ ಮೇಲೆ, ನನ್ನ ಸಂಘಟನೆಯ ಮುಖಂಡರ ಮೇಲೆ ಮಾಲ್ ಒಂದರ ಮಾಲೀಕ ದೂರು ದಾಖಲಿಸಿದ್ದಾನೆ. ದುಡ್ಡಿನ ದುರಹಂಕಾರ ಇವರನ್ನು ಎಲ್ಲಿಗೆ ತಂದು ನಿಲ್ಲಿಸಿದೆ ನೋಡಿ. ಈ ದುರಹಂಕಾರಿಗಳಿಗೆ ಯಾವ ಭಾಷೆಯಲ್ಲಿ ಉತ್ತರ ಕೊಡಬೇಕೋ ಅದನ್ನು ಕೊಡುತ್ತೇವೆ ಎಂದು ನಾರಾಯಣ ಗೌಡರು ಎಚ್ಚರಿಸಿದ್ದಾರೆ.

ನಾಮಫಲಕ ಹಾಕದಿದ್ದರೆ ಏನು ಮಾಡುವುದೋ ಮಾಡ್ತೇವೆ

ಪ್ರತಿವರ್ಷ ರಾಜ್ಯೋತ್ಸವ ತಿಂಗಳಲ್ಲಿ ಕನ್ನಡದಲ್ಲಿ ನಾಮಫಲಕ ಹಾಕಬೇಕು ಎಂಬ ಕೂಗು ಕನ್ನಡಿಗರಿಂದ ಏಳುತ್ತದೆ. ಇನ್ನೆಷ್ಟು ವರ್ಷ ಇದನ್ನೇ ಹೇಳಿಕೊಂಡಿರುವುದು. ಇನ್ನೆಂದೂ ನಾಮಫಲಕದ ವಿಷಯವೇ ಬರಬಾರದು. ಕರ್ನಾಟಕದ ಎಲ್ಲ ನಾಮಫಲಕಗಳು ಕನ್ನಡೀಕರಣವಾಗಬೇಕು. ಆಗದಿದ್ದರೆ ಅದನ್ನು ಹೇಗೆ ಮಾಡುವುದೆಂಬುದು ನಮಗೆ ಗೊತ್ತಿದೆ. ಕರ್ನಾಟಕ ಸರ್ಕಾರ ಜಾರಿಗೆ ತಂದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಎಲ್ಲ ಅಂಗಡಿ ಮುಂಗಟ್ಟುಗಳ ಮೇಲೂ ಕನ್ನಡದ ನಾಮಫಲಕವೇ ದೊಡ್ಡದಾಗಿರಬೇಕು ಎಂದು ಹೇಳುತ್ತದೆ. ಈ ನೆಲದ ಕಾಯ್ದೆ ಕಾನೂನು ಪಾಲಿಸದವರು ಕರ್ನಾಟಕದಲ್ಲಿ ಇರಲು ಯೋಗ್ಯರಲ್ಲ. ಕಾನೂನು ಪಾಲಿಸುವ ಮನಸು ಇಲ್ಲದಿದ್ದರೆ ತಮ್ಮ ತಮ್ಮ ರಾಜ್ಯಗಳಿಗೆ ಹೋಗಿಬಿಡಲಿ.

ಕನ್ನಡಿಗರು ಯಾರ ಅಡಿಯಾಳುಗಳೂ ಅಲ್ಲ: ನಾರಾಯಣ ಗೌಡರ ಸ್ಪಷ್ಟ ನುಡಿ

ಕನ್ನಡಿಗರು ಇತರೆ ರಾಜ್ಯಗಳಿಗೆ ಹೋದಾಗ ಅಲ್ಲಿನ ನುಡಿ, ಸಂಸ್ಕೃತಿಗಳನ್ನು ಗೌರವಿಸುತ್ತ ಬದುಕುತ್ತಿದ್ದಾರೆ. ಆದರೆ ಕರ್ನಾಟಕಕ್ಕೆ ಬರುವ ಉತ್ತರ ಭಾರತೀಯರೇಕೆ ಕನ್ನಡವನ್ನು ಗೌರವಿಸುತ್ತಿಲ್ಲ, ಕರ್ನಾಟಕವನ್ನು ಗೌರವಿಸುತ್ತಿಲ್ಲ? ಕನ್ನಡದ ನೆಲ, ಜಲ, ಸಂಪತ್ತು ಬೇಕು, ಕನ್ನಡ ಬೇಡವೆಂದರೆ ಹೇಗೆ? ಕನ್ನಡಿಗರು ಯಾರ ಅಡಿಯಾಳುಗಳಲ್ಲ. ನಮ್ಮ ನೆಲದಲ್ಲಿ ನಾವು ಸಾರ್ವಭೌಮರು. ಇದನ್ನು ಎಲ್ಲರಿಗೂ ನೆನಪಿಸುವ ಕಾಲವಿದು. ಕನ್ನಡದಲ್ಲಿ ಗ್ರಾಹಕ ಸೇವೆ ಪಡೆಯುವುದು ಕನ್ನಡಿಗನ ಹಕ್ಕು. ಯಾರಾದರೂ ನಿರಾಕರಿಸಿದರೆ ಅದನ್ನು ಸಹಿಸಿಕೊಂಡಿರಬೇಡಿ. #ಕನ್ನಡದಲ್ಲಿನಾಮಫಲಕ ಇಲ್ಲದಿದ್ದರೆ ಪ್ರಶ್ನಿಸುವುದನ್ನು ಮರೆಯಬೇಡಿ ಎಂದು ನಾರಾಯಣ ಗೌಡರು ಹೇಳಿದ್ದಾರೆ.

ಇದನ್ನೂ ಓದಿ: ಕನ್ನಡ ನಾಮಫಲಕಕ್ಕೆ ಆಗ್ರಹ; ಡಿ.27ಕ್ಕೆ ಬೆಂಗಳೂರಿನಲ್ಲಿ ಕರವೇ ಬೃಹತ್ ಪ್ರತಿಭಟನಾ ಮೆರವಣಿಗೆ

ನಾಮಫಲಕ ಹಾಕದವರು ಕನ್ನಡ ದ್ರೋಹಿಗಳು

ಡಿಸೆಂಬರ್ 27ರಂದು ಕರ್ನಾಟಕ ರಕ್ಷಣಾ ವೇದಿಕೆ ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ ಗೇಟ್ ಬಳಿಯಿಂದ ದೊಡ್ಡ ಮೆರವಣಿಗೆ ಇಟ್ಟುಕೊಂಡಿದೆ. ಅಂದು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ತೆರಳಲಿದೆ. #ಕನ್ನಡದಲ್ಲಿನಾಮಫಲಕ ಇಲ್ಲದಿದ್ದರೆ ಆಗುವ ಅನಾಹುತಗಳಿಗೆ ನಾವು ಜವಾಬ್ದಾರರಲ್ಲ. ಇದು ನನ್ನ ಅಂತಿಮ ಎಚ್ಚರಿಕೆ. ನಾನು ಯಾವ ಭಾಷೆಯ ವಿರೋಧಿಯಲ್ಲ. ಯಾವ ಭಾಷಿಕರ ವಿರೋಧಿಯೂ ಅಲ್ಲ. ಆದರೆ ಪದೇ ಪದೇ ಕನ್ನಡಕ್ಕೆ, ಕನ್ನಡಿಗರಿಗೆ ಅಪಮಾನ ಆಗುವುದನ್ನು ಸಹಿಸುವುದಿಲ್ಲ. #ಕನ್ನಡದಲ್ಲಿನಾಮಫಲಕ ಹಾಕದವರು ಕನ್ನಡದ್ರೋಹಿಗಳು, ನಾಡದ್ರೋಹಿಗಳು. ಅವರಿಗೆ ಈ ನಾಡಿನಲ್ಲಿ ಇರುವ ಯೋಗ್ಯತೆ ಇಲ್ಲ. ಇಂಥವರ ವಿರುದ್ಧ ನಮ್ಮ ಹೋರಾಟವೇ ಹೊರತು, ಯಾವುದೇ ಭಾಷೆ, ಭಾಷಿಕರ ವಿರುದ್ಧವಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣ ಗೌಡರು ಹೇಳಿದ್ದಾರೆ.

ಫೆ. 28ರೊಳಗೆ ಕನ್ನಡ ನಾಮಫಲಕ ಕಡ್ಡಾಯ: ಇದು ಬಿಬಿಎಂಪಿ ಸೂಚನೆ

ಈ ನಡುವೆ, ಬೆಂಗಳೂರಿನಲ್ಲಿ ಬಿಬಿಎಂಪಿ ಒಂದು ಆದೇಶವನ್ನು ಹೊರಡಿಸಿ, ಫೆಬ್ರವರಿ 28ರೊಳಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚನೆ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಭಾಷೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಂಗಡಿ ಮುಂಗಟ್ಟುಗಳು, ಹೋಟೆಲ್ ಗಳು, ಮಾಲ್ ಸೇರಿದಂತೆ ಇನ್ನಿತರೆ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಅನುಷ್ಠಾನಗೊಳ್ಳಬೇಕೆಂದು ಬಿಬಿಎಂಪಿ ಆಯುಕ್ತರಾದ ತುಷಾತ್‌ ಗಿರಿನಾಥ್‌ ಹೇಳಿದ್ದಾರೆ.

ಕನ್ನಡ ನಾಮಫಲಕ ಕಡ್ಡಾಯ : ಸಿಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು: ಬೆಂಗಳೂರಿನ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ 60 ಕನ್ನಡ ಅಕ್ಷರಗಳ ಬಳಕೆ ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ಫೆಬ್ರುವರಿ 28 ಕಡೆಯ ದಿನವಾಗಿದ್ದು, ಕನ್ನಡವನ್ನು ಉಳಿಸಿ, ಕನ್ನಡತನವನ್ನು ಬೆಳೆಸುವ ಸಲುವಾಗಿ ಈ ನಿಯಮ ತರಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಹೇಳಿದ್ದಾರೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ಮನವಿ ಮಾಡಿಕೊಂಡಿರುವ ಅವರು, ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು, ಹೊರರಾಜ್ಯದಿಂದ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡವರನ್ನು ನಾವು “ಕನ್ನಡಿಗ”ರೇ ಎಂದು ಭಾವಿಸಿದ್ದೇವೆ.  ಕನ್ನಡ ನೆಲದಲ್ಲಿ ಕನ್ನಡಕ್ಕೇ ಮೊದಲ ಪ್ರಾಶಸ್ತ್ಯ, ಅನ್ನ ಕೊಡುವ ಈ ನೆಲದ ನಿಯಮ ಪಾಲನೆ ಮಾಡಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ ಕೂಡ.  ಕನ್ನಡವನ್ನು ಉಳಿಸಿ, ಕನ್ನಡತನವನ್ನು ಬೆಳೆಸುವ ಸಲುವಾಗಿ ಬೆಂಗಳೂರಿನ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ.60 ಕನ್ನಡ ಅಕ್ಷರಗಳ ಬಳಕೆ ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ಫೆಬ್ರವರಿ 28 ಕಡೆಯ ದಿನವಾಗಿದ್ದು, ನಿಯಮ ಪಾಲನೆ ಮಾಡಿ “ಹೆಮ್ಮೆಯ ಕನ್ನಡಿಗ”ರಾಗಿ ಎಂದು ಸಂದೇಶ ರವಾನಿಸಿದ್ದಾರೆ.

Exit mobile version