Site icon Vistara News

Road Accident: ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಜೀವ ಬಿಟ್ಟ ಸವಾರ; ಟಿವಿಎಸ್‌ ಎಕ್ಸೆಲ್‌ ಪುಡಿಪುಡಿ

Bike accident

ವಿಜಯನಗರ: ಟಿವಿಎಸ್‌ ಎಕ್ಸೆಲ್‌ಗೆ ಕಾರು ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟು, ಕಾರಿನಲ್ಲಿದ್ದ ನಾಲ್ವರು ಗಾಯಗೊಂಡ ಘಟನೆ (Road Accident) ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಬಳಿ ನಡೆದಿದೆ.

ಅಂಜಿನಪ್ಪ (45) ಮೃತ ಸವಾರ. ಬೆಂಗಳೂರಿನಿಂದ ಹೊಸಪೇಟೆ ಕಡೆಗೆ ಹೋಗುತ್ತಿದ್ದ ಕಾರು, ಟಿವಿಎಸ್‌ ಎಕ್ಸೆಲ್‌ಗೆ ಗುದ್ದಿದ್ದರಿಂದ ಸ್ಥಳದಲ್ಲೇ ಸವಾರ ಜೀವ ಬಿಟ್ಟಿದ್ದು, ಕಾರಿನಲ್ಲಿದ್ದ ನಾಲ್ವರು ಗಾಯಾಳುಗಳನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಾನಾಹೊಸಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಿಪ್ಪರ್‌-ಬೈಕ್‌ ಡಿಕ್ಕಿಯಾಗಿ ಸವಾರ ಸಾವು

ವಿಜಯಪುರ: ಟಿಪ್ಪರ್ ಹಾಗೂ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದು ನಗರದ ಅಥಣಿ ರಸ್ತೆಯಲ್ಲಿ ನಡೆದಿದೆ. ಮೃತ ಬೈಕ್ ಸವಾರನ ಹೆಸರು ಹಾಗೂ ಮಾಹಿತಿ ಲಭ್ಯವಾಗಿಲ್ಲ. ಅಪಘಾತಕ್ಕೆ ಕಾರಣವಾದ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Blast in Bengaluru : ರಾಮೇಶ್ವರಂ ಕೆಫೆ ಬಾಂಬರ್‌ನ ಸ್ಪಷ್ಟ‌ ಚಿತ್ರ ಬಿಡುಗಡೆ, ಈಗ್ಲಾದರೂ ಹುಡುಕಿ ಕೊಡಿ!

ನದಿಗೆ ಜಿಗಿದು ಯುವಕ ಆತ್ಮಹತ್ಯೆ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ರಾಮನಗರ: ಅರ್ಕಾವತಿ ನದಿಗೆ ಜಿಗಿದು ಯುವಕನೊರ್ವ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ರಾಮನಗರದ (Ramanagara News) ಕನಕಪುರ ನಗರದ ಮರಳೇಬೇಕುಪ್ಪೆ ವೃತ್ತ ಬಳಿ ನಡೆದಿದೆ. ಮುತ್ತು (28) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವನು.

ಮೂಲತಃ ಮಳವಳ್ಳಿ ತಾಲೂಕಿನ ನಿಂಗನಾಪುರದೊಡ್ಡಿ ನಿವಾಸಿಯಾದ ಮುತ್ತು ಕನಕಪುರದ ಸಾಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಬಾಮೈದನ ಜತೆಗೆ ಅರ್ಕಾವತಿ ನದಿ ಬಳಿ ಹೋಗಿದ್ದ. ಈ ವೇಳೆ ಬಾಮೈದನಿಗೆ ಕ್ಷಮೆಕೋರಿ ಏಕಾಏಕಿ ನದಿಗೆ ಹಾರಿದ್ದಾನೆ.

ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಅಗ್ನಿಶಾಮಕ ದಳ, ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಹೊರ ತೆಗೆಯಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲುಮಟ್ಟಿದೆ. ಕನಕಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಲಿಸುತ್ತಿದ್ದ ಬಸ್ಸಿನಿಂದ ಆಯತಪ್ಪಿ ಬಿದ್ದು ಕಂಡಕ್ಟರ್‌ ಸಾವು

ಮೈಸೂರು: ಚಲಿಸುತ್ತಿದ್ದ ಸರ್ಕಾರಿ ಸಾರಿಗೆ ಬಸ್ (KSTRC Bus) ಫುಟ್ ಬೋರ್ಡ್‌ನಿಂದ (Thrown away from Foot Board) ಆಯತಪ್ಪಿ ಬಿದ್ದು ಕಂಡಕ್ಟರ್ ಮೃತಪಟ್ಟ (Conductor Death) ಘಟನೆ ಮೈಸೂರು ಜಿಲ್ಲೆ (Mysore News) ನಂಜನಗೂಡು ಬಳಿ (Road tragedy) ಸಂಭವಿಸಿದೆ. ಕೆಎಸ್‌ಆರ್‌‌ಟಿಸಿ ಬಸ್‌ ಕಂಡಕ್ಟರ್ ಮಹದೇವಸ್ವಾಮಿ (35) ಸ್ಥಳದಲ್ಲೇ ಮೃತಪಟ್ಟವರು.

ನಂಜನಗೂಡು ತಾಲೂಕಿನ ಮಲ್ಲನಮೂಲೆ ಮಠದ ಬಳಿ ಬಸ್‌ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬಸ್ಸು ಸಾಗುತ್ತಿದ್ದಾಗ ಒಮ್ಮಿಂದೊಮ್ಮೆಗೇ ಬಾಗಿಲು ತೆರೆದುಕೊಂಡು ಕಂಡಕ್ಟರ್‌ ಹೊರಗೆ ಬಿದ್ದಿದ್ದಾರೆ. ಕಂಡಕ್ಟರ್‌ ಬಾಗಿಲಿನಲ್ಲಿ ನಿಂತಿದ್ದಾಗ ಒಮ್ಮೆಗೇ ಅದು ತೆರೆದುಕೊಂಡಿರಬೇಕು, ಇಲ್ಲವೇ ಬಾಗಿಲಿನ ಚಿಲಕ ತೆರೆದುಕೊಂಡು ಒತ್ತಡಕ್ಕೆ ಅದು ತೆರೆದುಕೊಂಡಿರುವ ಸಾಧ್ಯತೆ ಇದೆ.

ಮಹದೇವಸ್ವಾಮಿ ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ಹಳೇಪುರ ಗ್ರಾಮದವರು. ಅವರ ಸಾವಿನಿಂದ ಕುಟುಂಬಿಕರು ಕಂಗಾಲಾಗಿದ್ದು, ಆಸ್ಪತ್ರೆಗೆ ಧಾವಿಸಿದ್ದಾರೆ.

ಇದನ್ನು ಓದಿ ; Blast in Bengaluru: ರಾಮೇಶ್ವರಂ ಕೆಫೆ ಸ್ಫೋಟ: ʼಬಳ್ಳಾರಿ ಗ್ಯಾಂಗ್‌ʼ ಕುರಿತೇ ಶಂಕೆ, ಅಲ್ಲೇ ಇದ್ದಾನೆ ಬಾಂಬರ್!‌

ಘಟನೆ ನಡೆದ ಸ್ಥಳಕ್ಕೆ ನಂಜನಗೂಡು ಡಿವೈಎಸ್ಪಿ ರಘು, ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜು, ಚಾರ ಪೊಲೀಸ್ ಠಾಣೆಯ ಪಿಎಸ್ಐ ಜಯಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version