Site icon Vistara News

Karnataka Election 2023: ವಿಜಯನಗರ, ಗೋವಿಂದರಾಜ ನಗರದಲ್ಲಿ ಬಿಜೆಪಿ ಅಬ್ಬರದ ಪ್ರಚಾರ; ಸಚಿವ ಅಶ್ವತ್ಥನಾರಾಯಣರಿಂದ ರೋಡ್‌ ಶೋ

BJP campaigns in Govindaraja nagar and Vijayanagar Road show by Minister Ashwathnarayana

ಬೆಂಗಳೂರು: ವಿಧಾನಸಭಾ ಚುನಾವಣೆಗೆ (Karnataka Election 2023) ಇನ್ನು ಎಂಟೇ ದಿನ ಬಾಕಿ ಇದೆ. ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್. ರವೀಂದ್ರ ಮತ್ತು ಗೋವಿಂದರಾಜ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಶೆಟ್ಟಿ ಪರ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಸೋಮವಾರ ಬಿರುಸಿನ ಪ್ರಚಾರ ನಡೆಸಿದರು.

ಮೊದಲಿಗೆ, ಇದರ ಅಂಗವಾಗಿ ವಿಜಯನಗರ ಕ್ಷೇತ್ರದ ವ್ಯಾಪ್ತಿಯ ದೀಪಾಂಜಲಿ ನಗರದ ಮೆಟ್ರೊ ನಿಲ್ದಾಣದ ಸುತ್ತಲಿನ ಪ್ರದೇಶದಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಬಳಿಕ ಹೊಸಕೆರೆಹಳ್ಳಿ, ಗಿರಿನಗರ ಸುತ್ತಲಿನ ಪ್ರದೇಶಗಳಲ್ಲಿ ಬಿಜೆಪಿ ಕಾರ್ಯಕರ್ತರ ಬೈಕ್ ರ‍್ಯಾಲಿ ಮೂಲಕ ಮತಯಾಚನೆ ಮಾಡಲಾಯಿತು. ಸಚಿವರು ಅಭ್ಯರ್ಥಿ ರವೀಂದ್ರ ಮತ್ತು ಇತರರೊಂದಿಗೆ ತೆರೆದ ವಾಹನದಲ್ಲಿ ಸಾಗುತ್ತ, ಬಿಜೆಪಿ ಪರವಾಗಿ ಮತ ಕೋರಿದರು.

ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಸಚಿವ ಅಶ್ವತ್ಥನಾರಾಯಣ ಮತ್ತು ಮುಖಂಡರು

ಇದನ್ನೂ ಓದಿ: Karnataka Election 2023: ಲೇಟೆಸ್ಟ್‌ ಇಂಟೆಲಿಜೆನ್ಸ್‌ ರಿಪೋರ್ಟ್‌ ಪ್ರಕಾರ ಬಿಜೆಪಿ ಎಷ್ಟು ಸೀಟು ಗೆಲ್ಲಲಿದೆ?

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ಕುಟುಂಬ ರಾಜಕಾರಣದ ವಿರುದ್ಧವಾಗಿದ್ದು, ಜನ ಸಮುದಾಯಗಳ ಪರವಾಗಿರುವ ಬಿಜೆಪಿಗೆ ಈ ಬಾರಿ ಸ್ಪಷ್ಟ ಜನಾದೇಶ ಕೊಡುವ ಮೂಲಕ ಬೆಂಗಳೂರು ಮತ್ತು ಕರ್ನಾಟಕದ ಸರ್ವಾಂಗೀಣ ಪ್ರಗತಿಗೆ ಜತೆಯಾಗಿ ನಿಲ್ಲಬೇಕು” ಎಂದು ಕರೆ ಕೊಟ್ಟರು.

ಬಿಜೆಪಿ ಬೈಕ್‌ ರ‍್ಯಾಲಿ

ಹೋದ ಬಾರಿ ಬಿಜೆಪಿಗೆ ಸ್ವಲ್ಪದರಲ್ಲಿ ಸ್ಪಷ್ಟ ಬಹುಮತ ತಪ್ಪಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಜನಾದೇಶವನ್ನೇ ಧಿಕ್ಕರಿಸಿದವು. ಆದರೆ, ಬಿಜೆಪಿ ತನಗೆ ಸಿಕ್ಕಿದ ಮೂರೂವರೆ ವರ್ಷಗಳ ಅವಕಾಶದಲ್ಲಿ ಕೋವಿಡ್, ಅತಿವೃಷ್ಟಿಯಂತಹ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದೆ. ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಪರ್ವವೇ ಸೃಷ್ಟಿಯಾಗಿದೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ: Congress Manifesto : ಪಂಚ ಉಚಿತ ಘೋಷಣೆಗೆ ಇನ್ನೆರಡು ಸೇರ್ಪಡೆ; ಹಳೆ ಪಿಂಚಣಿ ಜಾರಿ, ನಂದಿನಿ ರಕ್ಷಣೆ ಭರವಸೆ

ನಂತರ ಅವರು ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಹಲವು ಪ್ರದೇಶಗಳಲ್ಲಿ ಪ್ರಚಾರ ಕೈಗೊಂಡರು. ಅಭ್ಯರ್ಥಿ ಉಮೇಶ ಶೆಟ್ಟಿ ಅವರೂ ಇದ್ದರು.‌ ಈ ಸಂದರ್ಭದಲ್ಲಿ ಎರಡೂ ಕ್ಷೇತ್ರಗಳ ಸಾವಿರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಜತೆಯಲ್ಲಿ ಹೆಜ್ಜೆ ಹಾಕಿದರು.

Exit mobile version