Site icon Vistara News

ಪ್ರವೀಣ್‌ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ರದ್ದಾಗಿದ್ದ ಸರಕಾರದ ಜನೋತ್ಸವ ಆಗಸ್ಟ್‌ 28ಕ್ಕೆ ಮರುನಿಗದಿ

BSY BOMMAI

ಬೆಂಗಳೂರು: ಜುಲೈ ೨೮ಕ್ಕೆ ನಿಗದಿಯಾಗಿ ಕೊನೆಯ ಕ್ಷಣದಲ್ಲಿ ರದ್ದಾಗಿದ್ದ ಬಿಜೆಪಿ ಸರಕಾರದ ಸಾಧನಾ ಸಮಾವೇಶ ʻಜನೋತ್ಸವʼವನ್ನು ಆಗಸ್ಟ್‌ ೨೮ಕ್ಕೆ ಮರುನಿಗದಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದು ಬಿಜೆಪಿ ಸರಕಾರದ ಮೂರನೇ ವರ್ಷಾಚರಣೆ ಮತ್ತು ಬೊಮ್ಮಾಯಿ ಅವರ ಅಧಿಕಾರವಧಿಯ ಒಂದು ವರ್ಷದ ಸಂಭ್ರಮವಾಗಿರಲಿದೆ.

ಜುಲೈ ೨೮ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಆಚರಿಸುವುದಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗಿತ್ತು. ಅದರ ಮಧ್ಯೆ ಜುಲೈ ೨೬ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನೆಟ್ಟಾರಿನಲ್ಲಿ ಬಿಜೆಪಿ ಯುವಮೋರ್ಚಾ ಪದಾಧಿಕಾರಿ ಪ್ರವೀಣ್‌ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಈ ಘಟನೆ ಬಿಜೆಪಿ ಕಾರ್ಯಕರ್ತರನ್ನು ತೀವ್ರವಾಗಿ ಕೆರಳಿಸಿತ್ತು. ರಾಜ್ಯ ಸರಕಾರ ಬಿಜೆಪಿ ಮತ್ತು ಸಂಘ ಪರಿವಾರದ ಸಾಮಾನ್ಯ ಕಾರ್ಯಕರ್ತರ ರಕ್ಷಣೆಗೆ ನಿಲ್ಲುತ್ತಿಲ್ಲ ಎಂಬ ಆಕ್ರೋಶ ರಾಜ್ಯಾದ್ಯಂತ ಭುಗಿಲೆದ್ದು ಹಲವು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಅದಷ್ಟೇ ಅಲ್ಲದೆ, ಜುಲೈ ೨೭ರಂದು ಪ್ರವೀಣ್‌ ನೆಟ್ಟಾರು ಅವರ ಅಂತ್ಯಕ್ರಿಯೆಗೆ ಹೋದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರನ್ನೇ ತಡೆದು ನಿಲ್ಲಿಸಲಾಗಿತ್ತು, ಅವರಿದ್ದ ಕಾರನ್ನು ಅಡಿಮೇಲು ಮಾಡಲು ಕಾರ್ಯಕರ್ತರೆ ಮುಂದಾಗಿದ್ದರು. ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಬಿಜೆಪಿ ನಾಯಕರ ಮೇಲೆ ಕಾರ್ಯಕರ್ತರ ತಿರುಗಿಬಿದ್ದಿದ್ದರು. ನಾಡಿನ ಹಲವು ಕಡೆ ಪ್ರತಿಭಟನೆ ಮಾತ್ರವಲ್ಲ, ಜನಪ್ರತಿನಿಧಿಗಳಿಗೆ ಮುತ್ತಿಗೆಯನ್ನೂ ಹಾಕಲಾಗಿತ್ತು.

ಈ ಎಲ್ಲ ವಿದ್ಯಮಾನಗಳು, ಕಾರ್ಯಕರ್ತರ ಆಕ್ರೋಶವನ್ನು ಗಮನಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜುಲೈ ೨೭ರ ರಾತ್ರಿ ೧೨.೧೫ಕ್ಕೆ ಪತ್ರಿಕಾಗೋಷ್ಠಿಯನ್ನು ನಡೆಸಿ ಕಾರ್ಯಕ್ರಮವನ್ನು ರದ್ದು ಮಾಡಿದ್ದಾಗಿ ಪ್ರಕಟಿಸಿದ್ದರು. ಹಾಗೆ ರದ್ದಾದ ಕಾರ್ಯಕ್ರಮ ಈಗ ಆಗಸ್ಟ್‌ ೨೮ರಂದು ನಡೆಯಲಿದೆ.

ಯಡಿಯೂರಪ್ಪ ಅವರ ಜತೆ ಸಭೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಾಜಿ ಮುಖ್ಯಮಂತ್ರಿ ಅವರ ಜತೆಗೆ ಖಾಸಗಿಯಾಗಿ ಭೇಟಿ ಮಾಡಿ ರಾಜಕೀಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಆಗಸ್ಟ್‌ ೨೮ರಂದು ಜನೋತ್ಸವ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.

ನಾಲ್ಕು ಜಿಲ್ಲೆಗಳಿಗೆ ಸೀಮಿತ?
ಈ ನಡುವೆ, ದೊಡ್ಡಬಳ್ಳಾಪುರದಲ್ಲೇ ಹಿಂದೆ ನಿಗದಿಯಾದಲ್ಲೇ ಆಗಸ್ಟ್‌ ೨೮ರಂದು ಜನೋತ್ಸವ ನಡೆಯಲಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಆದರೆ, ಈ ಬಾರಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ತುಮಕೂರು ಜಿಲ್ಲೆಯ ಜನರಿಗೆ ಸೀಮಿತವಾಗಿ ಜನೋತ್ಸವ ನಡೆಯಲಿದೆ ಎಂದು ಅವರು ಹೇಳಿದರು.

ಹಲವು ವಿಷಯಗಳ ಬಗ್ಗೆ ಚರ್ಚೆ
ಹಾಲಿ ಸಿಎಂ ಹಾಗೂ ಮಾಜಿ ಸಿಎಂ ನಡುವೆ ಬಿ.ಎಸ್‌. ಯಡಿಯೂರಪ್ಪ ಅವರ ಸರ್ಕಾರಿ ನಿವಾಸವಾಗಿರುವ ಕಾವೇರಿಯಲ್ಲಿ ಮಾತುಕತೆ ನಡೆಯಿತು. ಹೈಕಮಾಂಡ್‌ ನೀಡಿದ ಸಂದೇಶಗಳ ಅವರಿಬ್ಬರು ಪರಸ್ಪರ ಚರ್ಚೆ ನಡೆಸಿದರೆಂದು ಹೇಳಲಾಗಿದೆ.

ಪ್ರವೀಣ್‌ ಹತ್ಯೆ ಮತ್ತು ಇದರಿಂದ ಕಾರ್ಯಕರ್ತರಿಗೆ ಆಗಿರುವ ಬೇಸರದ ಬಗ್ಗೆ ಅಮಿತ್‌ ಶಾ ಅವರು ಕೇಳಿರುವುದು, ಸಂಪುಟ ವಿಸ್ತರಣೆ ಬಗ್ಗೆ ಬಿಎಸ್‌ವೈ ಅವರಿಂದ ಬೊಮ್ಮಾಯಿ ಅವರು ಸಲಹೆ ಪಡೆದರೆಂದು ಹೇಳಲಾಗಿದೆ.

ಸಂಪುಟ ವಿಸ್ತರಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಗಾಗಿ ತಾನು ಆಗಸ್ಟ್‌ ೧೬ರ ಬಳಿಕ ದಿಲ್ಲಿಗೆ ಹೋಗುವ ಬಗ್ಗೆ ಬೊಮ್ಮಾಯಿ ಅವರು ಬಿಎಸ್‌ವೈ ಅವರ ಅಭಿಪ್ರಾಯ ಕೇಳಿದರು. ಜತೆಗೇ ಮುಂದಿನ ರಾಜ್ಯ ಪ್ರವಾಸ, ಪಕ್ಷ ಸಂಘಟನೆ, ಚುನಾವಣೆ ಸಿದ್ಧತೆಯ ಬಗ್ಗೆ ಚರ್ಚೆ ನಡೆದಿದೆ. ಎಸಿಬಿ ರದ್ದು ಕುರಿತು ಹೈಕೋರ್ಟ್ ಆದೇಶ ಹಾಗೂ ಈ ಕುರಿತ ಮುಂದಿನ ನಡೆ ಬಗ್ಗೆಯೂ ಚರ್ಚೆ ನಡೆದಿದೆ.

ಹಿಂದಿನ ಸುದ್ದಿ| Praveen Nettaru | ಬಿಜೆಪಿ ಕಾರ್ಯಕರ್ತರ ಆಕ್ರೋಶ ಭುಗಿಲು, ಪಕ್ಷದ ಜನೋತ್ಸವ ಕಾರ್ಯಕ್ರಮ ರದ್ದು

Exit mobile version