Site icon Vistara News

Pay Ministers : ಪೇ ಸಚಿವರೇ! ಡಿಕೆಶಿ, ಚಲುವರಾಯಸ್ವಾಮಿ ವಿರುದ್ಧ ರಾಜ್ಯ ಬಿಜೆಪಿ ಅಭಿಯಾನ

Chaluvarayaswamy and DK Shivakumar infront of Vidhana soudha and BJP Logo

ಬೆಂಗಳೂರು: ಬಿಜೆಪಿ ಸರ್ಕಾರದ (BJP Government) ಮೇಲೆ 40% ಕಮಿಷನ್‌ (40% Commission) ಆರೋಪ ಹೊರಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ (Congress Government) ಇದೀಗ ಅದೇ ಕಮಿಷನ್‌ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಬಿಜೆಪಿ ಈಗ ಇದನ್ನೇ ಪ್ರಬಲ ಅಸ್ತ್ರವನ್ನಾಗಿಸಿಕೊಂಡು “ಪೇ ಸಚಿವರೇ” (Pay Ministers) ಅಭಿಯಾನವನ್ನು ಶುರು ಮಾಡಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಕೃಷಿ ಸಚಿವ ಎನ್.‌ ಚಲುವರಾಯಸ್ವಾಮಿ ವಿರುದ್ಧ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ರಾಜ್ಯ ಬಿಜೆಪಿ ಘಟಕದ ವತಿಯಿಂದ ಸೋಷಿಯಲ್‌ ಮೀಡಿಯಾದಲ್ಲಿ ಈ ಅಭಿಯಾನವನ್ನು ಆರಂಭಿಸಲಾಗಿದೆ. ಡಿ.ಕೆ. ಶಿವಕುಮಾರ್‌ ವಿರುದ್ಧ ಗುತ್ತಿಗೆದಾರರ ಸಂಘದವರು 15 ಪರ್ಸೆಂಟ್‌ ಕಮಿಷನ್‌ ಆರೋಪವನ್ನು ಮಾಡುತ್ತಿದ್ದರೆ, ಕೃಷಿ ಸಚಿವ ಎನ್.‌ ಚುಲುವರಾಯಸ್ವಾಮಿ ಅವರ ಮೇಲೆ ಲಂಚ ಕೇಳುತ್ತಿರುವ ಆರೋಪವುಳ್ಳ ಪತ್ರದ ಮೂಲಕ ಮಂಡ್ಯ ಜಿಲ್ಲೆಯ ಸಹಾಯಕ ಕೃಷಿ ಅಧಿಕಾರಿಗಳ ಹೆಸರಿನಲ್ಲಿ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಈ ಎರಡೂ ವಿಚಾರಗಳ ಬಗ್ಗೆ ಈಗ ಬಿಜೆಪಿ ಸೋಷಿಯಲ್‌ ಮೀಡಿಯಾ ಕ್ಯಾಂಪೇನ್‌ ಅನ್ನು ಆರಂಭಿಸಿದೆ.

ಏಟಿಗೆ ತಿರುಗೇಟು ನೀಡಲು ತಯಾರಿ

ಗುತ್ತಿಗೆದಾರರಿಂದ (Contractors association) ಬಿಜೆಪಿ ನಾಯಕರು ಮತ್ತು ಸರ್ಕಾರ 40 ಪರ್ಸೆಂಟ್‌ ಕಮಿಷನ್‌ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘ ಪ್ರಧಾನಿವರೆಗೂ (Prime minister Narendra Modi) ದೂರು ನೀಡಿತ್ತು. ಇದೀಗ ಕಾಂಗ್ರೆಸ್‌ ಸರ್ಕಾರದ ಮೇಲೆ ರಾಜ್ಯಪಾಲರಿಗೆ ದೂರು ನೀಡಿದೆ. ಈಗ ಗುತ್ತಿಗೆದಾರರ ಟಾರ್ಗೆಟ್‌ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar). ಇದೀಗ ಗುತ್ತಿಗೆದಾರರ ಬೆಂಬಲಕ್ಕೆ ಬಿಜೆಪಿಯೂ ನಿಂತಿರುವುದರಿಂದ ಪ್ರಕರಣ ಗಂಭೀರ ಸ್ವರೂಪವನ್ನು (Commission politics) ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದರ ಜತೆಗೆ ಚಲುವರಾಯಸ್ವಾಮಿ ಅವರು ಲಂಚ ಕೇಳುತ್ತಿದ್ದಾರೆ ಎಂಬ ಆರೋಪವುಳ್ಳ ಪತ್ರವು ರಾಜ್ಯಪಾಲರಿಗೆ ತಲುಪಿರುವುದು, ಇದರ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಅವರು ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿರುವುದು ಸಹ ಈಗ ಬಿಜೆಪಿಗೆ ಅಸ್ತ್ರ ಸಿಕ್ಕಂತೆ ಆಗಿದೆ.

ರಾಜ್ಯಾದ್ಯಂತ ಪೇ ಸಚಿವರೇ ಅಭಿಯಾನ

ಕೃಷಿ ಸಚಿವ ಚಲುವರಾಯಸ್ವಾಮಿ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಕಮಿಷನ್ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪೇ ಸಚಿವರೇ ಅಭಿಯಾನವನ್ನು ಆರಂಭಿಸಿರುವ ಬಿಜೆಪಿ, ಸೋಷಿಯಲ್ ಮೀಡಿಯಾವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಿದೆ.

ರಾಜ್ಯಾದ್ಯಂತ ಅಭಿಯಾನ ನಡೆಸುವ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ ಬಿಜೆಪಿ, ಈ ಸಚಿವರ ರಾಜೀನಾಮೆ ಪಡೆಯುವವರೆಗೂ ಅಸ್ತ್ರ ಕೈ ಬಿಡದಂತೆ ಸೂಚನೆ ನೀಡಿದೆ.

ಇದನ್ನೂ ಓದಿ: Amit Shah: ಬೆಳಗ್ಗೆ 4ಕ್ಕೇ ಮೋದಿಯಿಂದ ಕರೆ; ಭಾರತ ಮಾತೆಯ ಹತ್ಯೆ ಎಂದ ರಾಹುಲ್‌ ಗಾಂಧಿಗೆ ಅಮಿತ್‌ ಶಾ ತಪರಾಕಿ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಪೇ ಸಿಎಂ ಅಭಿಯಾನವನ್ನು ಕಾಂಗ್ರೆಸ್ ಶುರು ಮಾಡಿತ್ತು. ಅಂದಿನ ಬಿಜೆಪಿ ಸರ್ಕಾರಕ್ಕೆ ಬಾರಿ ಮುಜುಗರ ತರಿಸಿದ್ದ ಪ್ರಕರಣ ಇದಾಗಿತ್ತು. ಅದೇ ರೀತಿ ಕಾಂಗ್ರೆಸ್‌ಗೆ ತಿರುಗೇಟು ಕೊಡಲು ಬಿಜೆಪಿ ಈಗ ಮುಂದಾಗಿದೆ.

Exit mobile version