Site icon Vistara News

ರಾಮ ರಾಮ! ಶ್ರೀರಾಮನ ಕಾಲಿನ ಮೇಲೆ ನಿಂತು ಪ್ರತಿಮೆಗೆ ಹೂವಿನ ಹಾರ ಹಾಕಿದ ಬಸವಕಲ್ಯಾಣ ಬಿಜೆಪಿ ಶಾಸಕ!

MLA Sharanu salagara

#image_title

ಬೀದರ್: ಕೆಲವು ಬಿಜೆಪಿ ಶಾಸಕರು ಚುನಾವಣೆಯ ಸಂದರ್ಭದಲ್ಲಿ ಎಡವಟ್ಟುಗಳ ಮೇಲೆ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ! ಇತ್ತ ರಾಯಚೂರು ನಗರ ಶಾಸಕ ಡಾ. ಶಿವರಾಜ್‌ ಪಾಟೀಲ್‌ ಅವರು ಮೋದಿಯೂ ಇಲ್ಲ ಪಾದಿಯೂ ಇಲ್ಲ ಎಂದು ಹೇಳಿದ ವಿಡಿಯೊ ವೈರಲ್‌ ಆಗಿದ್ದರೆ, ಇನ್ನೊಂದು ಕಡೆ ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗರ (MLA Sharanu salagara) ಇನ್ನೊಂದು ಎಡವಟ್ಟು ಮಾಡಿಕೊಂಡಿದ್ದಾರೆ.

ಬಿಜೆಪಿ ಶಾಸಕರು ಬಸವಣ್ಣನವರ ಕರ್ಮಭೂಮಿ ಬಸವ ಕಲ್ಯಾಣದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮನಿಗೆ ಅವಮಾನ ಮಾಡಿದ್ದಾರೆ ಎಂಬ ಆಪಾದನೆ ಕೇಳಿಬಂದಿದೆ. ಅವರು ಶ್ರೀರಾಮನ ಪ್ರತಿಕೃತಿ ಕಾಲಿನ ಮೇಲೆ ನಿಂತು ಕೊರಳಿಗೆ ಹೂವಿನ ಹಾರ ಹಾಕಿದ ಚಿತ್ರಗಳು ವೈರಲ್‌ ಆಗಿವೆ.

ಬಸವ ಕಲ್ಯಾಣ ಶಾಸಕ ಶರಣು ಸಲಗರ ಅವರು ಮಾಲೆ ಹಾಕುತ್ತಿರುವುದು.

ರಾಮನವಮಿಯಂದೇ ಬಿಜೆಪಿ ಶಾಸಕರು ಈ ಮಹಾಎಡವಟ್ಟು ಮಾಡಿಕೊಂಡಿದ್ದಾರೆ. ಕಾಲಿನ ಮೇಲೆ ನಿಂತು ಮೂರ್ತಿಗೆ ಮಾಲೆ ಹಾಕುವಲ್ಲಿಗೆ ಸೀಮಿತವಾದ ಶರಣು ಸಲಗರ್‌ ಅವರು, ಬಗೆಬಗೆಯಲ್ಲಿ ಪೋಸು ಬೇರೆ ಕೊಟ್ಟಿದ್ದಾರೆ.

ಬಸವಕಲ್ಯಾಣದಲ್ಲಿ‌ ನಡೆದ ರಾಮನವಮಿ‌ ಶೋಭಾ ಯಾತ್ರೆ ವೇಳೆ ಘಟನೆ ನಡೆದಿದೆ. ಇದರ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿವೆ.

ರಾಮನ‌ ಮೂರ್ತಿ ಮೇಲೆ ನಿಂತು ಪುಷ್ಪಾರ್ಚಣೆ ಮಾಡಿದ್ದಕ್ಕೆ ಸಾರ್ವಜನಿಕರಿಂದ ಆಕ್ರೋಶ‌ ವ್ಯಕ್ತವಾಗಿದೆ. ವಿಶೇಷವೆಂದರೆ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರೇ ಈ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ‌ ಪೊಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಶಾಸಕ ಶರಣು ಸಲಗರ ಎಡವಟ್ಟು

ನಿಜವೆಂದರೆ, ಅದಕ್ಕಿಂತ ಮೊದಲು ಶಾಸಕ ಶರಣು ಸಲಗರ ಅವರೇ ತಾವು ರಾಮನ ಮೇಲೆ ನಿಂತಿರುವ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರಚಾರದ ಭರಾಟೆಯಲ್ಲಿ ಶಾಸಕರೇ ಎಡವಟ್ಟು ಮಾಡಿಕೊಂಡಿದ್ದು, ಈಗ ಎಲ್ಲೆಡೆ ವೈರಲ್‌ ಆಗಲು ಕಾರಣವಾಗಿದೆ ಎನ್ನಲಾಗಿದೆ. ಇದರ ವಿರುದ್ಧ ಶ್ರೀ ರಾಮ ಭಕ್ತರು ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಯಚೂರು ಶಾಸಕ ಶಿವರಾಜ್‌ ಪಾಟೀಲ್‌ ಆಡಿಯೋದಲ್ಲೇನಿತ್ತು?

ರಾಯಚೂರು ಶಾಸಕ ಶಿವರಾಜ್‌ ಪಾಟೀಲ್‌ ಆಡಿಯೋದಲ್ಲಿರುವ ರಂಗುರಂಗಿನ ವಿಚಾರಗಳು ಇಲ್ಲಿವೆ.

ʻಮೋದಿಯ ರೈಟ್ ಹ್ಯಾಂಡ್‌ಗೇ ನಾನು ಕೇಳಲ್ಲ. ನಾನೇ ಸಿಂಗಲ್ ಆರ್ಮಿ, ನನಗೆ ರೈಟ್ ಇಲ್ಲ, ಲೆಫ್ಟ್ ಇಲ್ಲ. ನನ್ನ ಕೈ ನನ್ನ ಕಾಲು/ ನಾನೇ ಮೋದಿ, ನಾನೇ ಟ್ರಂಪ್. ಯಾವ ಬದನೆಕಾಯಿ ಮಾತು ಸಹ ನಾನು‌ ಕೇಳಂಗಿಲ್ಲʼʼ ಎಂದು ಶಿವರಾಜ್‌ ಪಾಟೀಲ್‌ ಹೇಳಿದ್ದಾರೆ.

ʻʻಯಾವ ಮೋದಿಯೂ ಇಲ್ಲ. ಪಾದಿಯೂ ಇಲ್ಲ. ನಾನೇ ಶಿವರಾಜ್ ‌ಪಾಟೀಲ್. ಶಿವರಾಜ್ ‌ಪಾಟೀಲ್ ಅಂದ್ರೇ ದೇವರು, ನಾನು ಇದ್ರೇನೆ ಜಗತ್ತುʼʼ ಎಂದೆಲ್ಲ ಹೇಳಿಕೊಂಡಿದ್ದಾರೆ ಪಾಟೀಲ್‌.

ನಾನು ಯಾರಿಗೂ ಕೇರ್‌ ಮಾಡಲ್ಲ, ನಾನು ಸಿಂಗಲ್‌ ಆರ್ಮಿ

ʻʻಸೋಮಶೇಖರ್ ರೆಡ್ಡಿ, ಶ್ರೀರಾಮುಲುಗೂ ನಾನು ಕೇರ್‌ ಮಾಡಲ್ಲ. ನನ್ನ ಮುಂದೆ ಏನೂ ನಡೆಯಂಗಿಲ್ಲ. ಮೊದಲಿನಿಂದಲೂ ನನ್ನ ಕ್ಷೇತ್ರಕ್ಕೆ ‌ಲೀಡರ್ ಗಳಿಗೆ ಬಾ ಅಂತೀನಾ…? ನನಗೆ ಯಾರೂ‌ ಇಲ್ಲ… ನಾನು‌ ಸಿಂಗಲ್ ಆರ್ಮಿʼʼ ಎಂದಿದ್ದಾರೆ ಶಿವರಾಜ್‌ ಪಾಟೀಲ್‌.

ನಾನೇ ದೇವರು, ನನ್ನ ಕಾಲಿಗೆ ಬೀಳಿ ಅಂತೀನಿ!

ʻʻಎಲೆಕ್ಷನ್‌ನಲ್ಲಿ ಸೋತರು ಚಿಂತೆಯಿಲ್ಲ, ಗೆದ್ರು ಚಿಂತೆಯಿಲ್ಲ, ಮಲಗಿದರೂ ಚಿಂತೆಯಿಲ್ಲ… ಜಗತ್ತಿನಲ್ಲಿ ಚಿಂತೆಯಿಲ್ಲದ ಪುರುಷ ಅಂದ್ರೆ ಅದು ಶಿವರಾಜ್ ಪಾಟೀಲ್. ನಾನು ದೇವರು ಇದ್ದಂಗೆ, ಅದಕ್ಕೆ ನಮ್ಮ ಹುಡುಗರಿಗೆ ಹೇಳ್ತೀನಿ. ದಿನಾಲೂ ನನ್ನ ಕಾಲಿಗೆ ನಮಸ್ಕಾರ ಮಾಡ್ರಿ ಅಂತ. ಶಿವರಾಜ್ ಪಾಟೀಲ್ ದೈವ ಬರೆಸಿಕೊಳ್ಳಲ್ಲ.. ನಾನೇ ದೈವ ಬರಿತೀನಿ.ʼʼ-ಹೀಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಶಿವರಾಜ್‌ ಪಾಟೀಲ್‌.

ಇದನ್ನೂ ಓದಿ Karnataka Elections : ಯಾವ ಮೋದಿಯೂ ಇಲ್ಲ, ಪಾದಿಯೂ ಇಲ್ಲ, ನಾನೇ ಮೋದಿ, ನಾನೇ ಟ್ರಂಪ್‌ ಎಂದ ಬಿಜೆಪಿ ಶಾಸಕ: ಆಡಿಯೊ ವೈರಲ್‌

Exit mobile version