Site icon Vistara News

Bomb threat : ಮಲಗಲು ಬಿಡದ್ದಕ್ಕೆ ಮಸೀದಿಗೆ ಹುಸಿ ಬಾಂಬ್‌ ಇಟ್ಟ

bomb threat Accused arrested

ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ಶಿವಾಜಿನಗರದ ಆಜಾಂ ಮಸೀದಿಯಲ್ಲಿ (Shivaji nagar Mosque) ಬಾಂಬ್‌ (Bomb threat) ಇಡಲಾಗಿದೆ ಎಂಬ ಸುದ್ದಿಯೊಂದು ಕಳೆದ ಜು.6 ರಂದು ಬೆಂಗಳೂರು ಪೊಲೀಸರನ್ನು (Bangalore Police) ತಲ್ಲಣಗೊಳಿಸಿತು. ಆದರೆ ತಪಾಸಣೆ ಮಾಡಿದಾಗ ಯಾವುದೇ ಅಪಾಯಕಾರಿ ವಸ್ತುಗಳು (Dangerous materials) ಸಿಗದೆ ನಿಟ್ಟುಸಿರು ಬಿಟ್ಟಿದ್ದರು. ಹುಸಿ ಬಾಂಬ್‌ ಕರೆ ಮಾಡಿದವನ ಜಾಡು ಹಿಡಿದ ಶಿವಾಜಿನಗರ ಪೊಲೀಸರು ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ. ಸೈಯದ್ ಖಾಜಿ ಮಹಮದ್ ಅನ್ವರ್ ಉಲ್ಲಾ (37) ಬಂಧಿತ ಆರೋಪಿ ಆಗಿದ್ದಾನೆ.

ಆರೋಪಿ ಸೈಯದ್‌ ಮೂಲತಃ ಮಹಾರಾಷ್ಟ್ರದವನು. ಮದರಸಾ ಹೆಸರಿನಲ್ಲಿ ಮಸೀದಿಗಳಲ್ಲಿ ಚೆಂದಾ ಕೇಳುತ್ತಿದ್ದ. ಹೀಗೆ ಕಳೆದ ಜು. 4 ರಂದು ಬೆಂಗಳೂರಿಗೆ ಬಂದು, ಬಳಿಕ 5 ರಂದು ತೆಲಂಗಾಣಕ್ಕೆ ಹೊರಟಿದ್ದ. ದೇವನಹಳ್ಳಿ ದಾಟುತಿದ್ದಂತೆ ಮೊಬೈಲ್ ಮೂಲಕ ಪೊಲೀಸ್ ಕಂಟ್ರೋಲ್‌ ರೂಂಗೆ ಕರೆ ಮಾಡಿ ಬಾಂಬ್ ಇಡುತ್ತಿದ್ದಾರೆ ಎಂದೇಳಿ ಕಾಲ್‌ ಕಟ್‌ ಮಾಡಿದ್ದ.

ಬಳಿಕ ಕರ್ನೂಲ್‌ನಿಂದ ಮಹಬೂಬ್ ನಗರಕ್ಕೆ ತೆರಳಿ ಪರಾರಿ ಆಗಿದ್ದ. ಕಳೆದ ಕೆಲವು ವರ್ಷಗಳಿಂದ ದೊಡ್ಡ ಮಟ್ಟದ ಸಾಮೂಹಿಕ ಭಯೋತ್ಪಾದಕ ಕೃತ್ಯಗಳಿಲ್ಲದೆ (Terrorist activity) ಒಂದಿಷ್ಟು ನೆಮ್ಮದಿಯಲ್ಲಿದ್ದ ಪೊಲೀಸರಿಗೆ ಒಮ್ಮಿಂದೊಮ್ಮೆಗೇ ಮಸೀದಿಯಲ್ಲಿ ಬಾಂಬ್‌ ಇಡಲಾಗಿದೆ ಎಂಬ ಸುದ್ದಿ ಭಾರಿ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ಪೊಲೀಸರು ಹುಸಿ ಬಾಂಬ್‌ ಬೆದರಿಕೆ ಇದು ಎಂದು ಸುಮ್ಮನಾಗದೇ ಆರೋಪಿಯ ಹಿಂದೆ ಬಿದ್ದು, ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ.

ಇದನ್ನೂ ಓದಿ: Weather Report : ರಾಜ್ಯದ ಈ 15 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಹುಸಿ ಬಾಂಬ್ ಕರೆಯ ಅಸಲಿ ಕಾರಣ ಏನು?

ಸೈಯದ್‌ಯನ್ನು ಬಂಧಿಸಿ ವಿಚಾರಣೆ ನಡೆಸಿದ ಶಿವಾಜಿನಗರ ಪೊಲೀಸರಿಗೆ ಅಸಲಿ ಕಥೆ ಕೇಳಿ ಪಿತ್ತ ನೆತ್ತಿಗೇರಿತ್ತು. ಕಳೆದ 4ರಂದು ಬೆಂಗಳೂರಿನ ಶಿವಾಜಿನಗರ ಆಜಾಂ ಮಸೀದಿಗೆ ಬಂದಿದ್ದ. ಚಂದಾ ಕೇಳಿ ರಾತ್ರಿ ಉಳಿದು ಕೊಳ್ಳಲು ಮುಂದಾಗಿದ್ದ. ಆದರೆ ಅಲ್ಲಿನ ಸಿಬ್ಬಂದಿ ಯಾರಿಗೂ ಇಲ್ಲಿ ಉಳಿದುಕೊಳ್ಳುವ ಅವಕಾಶ ಇಲ್ಲ ಎಂದೇಳಿ ಮಸೀದಿಯಿಂದ ಕಳುಹಿಸಿದ್ದರು. ಇದೇ ಬೇಸರದಲ್ಲಿ ಅಲ್ಲಿಂದ ರಾತ್ರಿ 9.30ಕ್ಕೆ ಮೆಜೆಸ್ಟಿಕ್ ಬಂದಿದ್ದ. ಮೆಜೆಸ್ಟಿಕ್‌ನಿಂದ ಕರ್ನೂಲ್ ಬಸ್ ಹತ್ತಿದ್ದ ಸೈಯದ್‌ ದೇವನಹಳ್ಳಿ ದಾಟುತಿದ್ದಂತೆ ಪೊಲೀಸ್‌ ಕಂಟ್ರೋಲ್ ನಂಬರ್ 100ಕ್ಕೆ ಕರೆ ಮಾಡಿದ್ದ. ಅದು ಆಟೋ ಫಾರ್ವರ್ಡ್ ಮುಖಾಂತರ 112ಗೆ ಕನೆಕ್ಟ್ ಆಗಿತ್ತು. ಈ ವೇಳೆ ಹುಸಿ ಬಾಂಬ್‌ ಕಥೆ ಬಿಟ್ಟು ಹೋಗಿದ್ದ.

ಮಸೀದಿಯಲ್ಲಿ ಮಲಗಲು ಬಿಟ್ಟಿಲ್ಲ ಎಂದು ಸಿಬ್ಬಂದಿ ಮೇಲಿನ ಕೋಪಕ್ಕೆ ಈ ರೀತಿಯ ಕುಚೇಷ್ಟೆ ಮಾಡಿದ್ದಾನೆ. ಈತನ ಕೃತ್ಯದಿಂದ ರಾತ್ರಿಯಿಡಿ ಹುಡುಕಾಡಿ ಪೊಲೀಸರು ಸುಸ್ತಾಗಿದ್ದರು. ಅಸಲಿಗೆ ಸೈಯದ್‌ ಬಿಎಸ್ಸಿ ಮುಗಿಸಿದ್ದು, ಯಾವುದೇ ಕೆಲಸ ಕಾರ್ಯಗಳನ್ನು ಮಾಡುತ್ತಿರಲಿಲ್ಲ. ದಿನಕ್ಕೊಂದು ರಾಜ್ಯ, ಕಂಡ ಕಂಡ ಊರು ಸುತ್ತುವ ಸೈಯದ್‌, ಮಸೀದಿಗಳ ಬಳಿ ಚಂದಾ ಎತ್ತಿ ಜೀವನ ನಡೆಸುತ್ತಿದ್ದ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version