Site icon Vistara News

ಎಣ್ಣೆ ಏಟಲ್ಲಿ ಹದ್ದುಮೀರಿದ ಸ್ಕೋಡಾ, ಸಿಗ್ನಲ್‌ನಲ್ಲಿ ಐದು ಕಾರುಗಳಿಗೆ ಡಿಕ್ಕಿ

ಬೆಂಗಳೂರು: ವೇಗವಾಗಿ ಧಾವಿಸಿ ಬಂದ ಸ್ಕೋಡಾ ಕಾರೊಂದು ಬ್ಯಾಟರಾಯನಪುರ ಸಿಗ್ನಲ್‌ನಲ್ಲಿ ನಿಂತಿದ್ದ ಐದು ಕಾರುಗಳಿಗೆ ಡಿಕ್ಕಿ ಹೊಡೆದ ಘಟನೆ ಸೋಮವಾರ ಮುಂಜಾನೆ ನಡೆದಿದೆ.

ರಾಹುಲ್‌ ಎಂಬಾತ ಹೆಬ್ಬಾಳದಲ್ಲಿ ಪಾರ್ಟಿ ಮುಗಿಸಿಕೊಂಡು ಸ್ಕೋಡಾ ಕಾರನ್ನು ವೇಗವಾಗಿ ಓಡಿಸುತ್ತಿದ್ದ ವೇಳೆ ಈ ದುರಂತ ನಡೆದಿದೆ. ಈ ವೇಳೆ‌ ಬ್ಯಾಟರಾಯನಪುರ ಸಿಗ್ನಲ್‌ ಬಳಿ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಕಾರು ಗಂಟೆಗೆ 140-150 ಕಿ ಮೀ ವೇಗದಲ್ಲಿ ಓಡುತ್ತಿತ್ತು ಎನ್ನಲಾಗಿದೆ.

ರಾಹುಲ್‌ ಪಾರ್ಟಿಯಲ್ಲಿ ಚೆನ್ನಾಗಿ ಕುಡಿದು ಮನೆಗೆ ಹೋಗುತ್ತಿದ್ದಾಗ ಮತ್ತಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸ್ಕೋಡಾ ಕಾರಿನ ವಿಮೆ ಕೂಡಾ ಫೆಬ್ರವರಿಯಲ್ಲೇ ಲುಪ್ತವಾಗಿದೆ ಎನ್ನಲಾಗಿದೆ.

ಡಿಕ್ಕಿ ಹೊಡೆಸಿಕೊಂಡ ಕಾರುಗಳಲ್ಲಿ ಇಂಡಿಕಾ ಕೂಡಾ ಒಂದಾಗಿದ್ದು, ಇದರ ಚಾಲಕ ಪುರುಷೋತ್ತಮ ಮತ್ತು ಅದರಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಓಲಾಗೆ ಅಟ್ಯಾಚ್‌ ಮಾಡಲಾದ ಈ ಕಾರಿನಲ್ಲಿ ಪ್ರಯಾಣಿಕರನ್ನು ಬಿಟ್ಟು ಬರಲು ತೆರಳುತ್ತಿದ್ದರು ಪುರುಷೋತ್ತಮ. ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಕಾರು ಚಾಲಕ ರಾಹುಲ್‌ ನನ್ನು ವಶಕ್ಕೆ ಪಡೆದಿರುವ ಹೆಬ್ಬಾಳ ಸಂಚಾರಿ ಠಾಣೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Exit mobile version