Site icon Vistara News

Car Accident: ಕೆ. ಬಳ್ಳೆಕಟ್ಟೆ ಬಳಿ ಕಾರು ಪಲ್ಟಿಯಾಗಿ ಇಬ್ಬರ ದುರ್ಮರಣ

Car Accident

ಚಿತ್ರದುರ್ಗ: ಜಿಲ್ಲೆಯ ಕೆ.ಬಳ್ಳೆಕಟ್ಟೆ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಪಿಯಾಗಿ ಇಬ್ಬರು ದುರ್ಮರಣ ಹೊಂದಿರುವ ಘಟನೆ (Car Accident) ಮಂಗಳವಾರ ನಡೆದಿದೆ. ಹೆದ್ದಾರಿ ತಡೆಗೋಡೆಗೆ ಡಿಕ್ಕಿಯಾದ ರಭಸಕ್ಕೆ ಕಾರಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ.

ಮಹಾರಾಷ್ಟ್ರ ಮೂಲದ ಕಾರು ಅಪಘಾತಕ್ಕೊಳಗಾಗಿದ್ದು, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಭರಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Murder Case : ತಾಯಿಗಿತ್ತು ಅನೈತಿಕ ಸಂಬಂಧ; ಅಪ್ಪನಿಗಾಗಿ ಕೊಲೆಗಾರನಾದ ಮಗ!

ಮಲಗಿದ್ದವರ ಮೇಲೆ ಹರಿದ ಬೊಲೆರೋ; ಒಬ್ಬ ಸಾವು, ಮತ್ತೊಬ್ಬ ಗಂಭೀರ

ಚಿಕ್ಕಬಳ್ಳಾಪುರ: ಮಲಗಿದ್ದವರ ಮೇಲೆ ಬೊಲೆರೋ ವಾಹನ ಹರಿದಿದೆ. ಪರಿಣಾಮ ಸ್ಥಳದಲ್ಲೇ ಒಬ್ಬ ಮೃತಪಟ್ಟರೆ, ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಚಿಕ್ಕಬಳ್ಳಾಪುರದ ಚೇಳೂರು ತಾಲೂಕಿನ ನೆಂಟಕುಂಟಪಲ್ಲಿ ಗ್ರಾಮದಲ್ಲಿ ಈ ಘಟನೆ (Road Accident) ನಡೆದಿದೆ. ಆರೀಫುಲ್ಲಾ ಮೃತ ದುರ್ದೈವಿ. ನರಸಿಂಹಪ್ಪ ಎಂಬುವವರ ಕಾಲು ಮುರಿದಿದೆ.

ಆರೀಫುಲ್ಲಾ ಮತ್ತು ನರಸಿಂಹಪ್ಪ ಹಸು ಕರು ಹಾಕುತ್ತದೆ ಎಂದು ರಸ್ತೆ ಬದಿಯಲ್ಲಿ ಕಾದು ಕುಳಿತಿದ್ದರು. ಈ ವೇಳೆ ಹಾಗೇ ನಿದ್ದೆಗೆ ಜಾರಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿ ಬಂದ ಚಾಲಕ ಏಕಾಏಕಿ ಮಲಗಿದ್ದವರ ಮೇಲೆ ಹತ್ತಿಸಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಆರೀಫುಲ್ಲಾ ಮೃತಪಟ್ಟರೆ, ನರಸಿಂಹಪ್ಪ ಗಾಯಗೊಂಡಿದ್ದಾರೆ. ಗಾಯಾಳು ನರಸಿಂಹಪ್ಪನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಚಾಲಕ ಗಂಗರಾಜು ಬುಲೆರೋ ವಾಹನ ಬಿಟ್ಟು ಪರಾರಿ ಆಗಿದ್ದಾನೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಾಗಿದ್ದು, ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Self harming : ಪತ್ನಿ ದೂರಾದಳೆಂದು ನೊಂದು ನೇಣಿಗೆ ಶರಣಾದ ನ್ಯಾಷನಲ್ ಕಬಡ್ಡಿ ಆಟಗಾರ

ಗೋವಾಗೆ ಹೊರಟ್ಟಿದ್ದ ಬಸ್‌ ಪಲ್ಟಿ

ಕಾರವಾರ: ಬೆಂಗಳೂರಿನಿಂದ ಗೋವಾಗೆ ಹೊರಟಿದ್ದ ಸೀಬರ್ಡ್ ಬಸ್ ಪಲ್ಟಿಯಾಗಿದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 63ರ ವಜ್ರಳ್ಳಿ ಬಳಿ ಘಟನೆ ನಡೆದಿದೆ. ಬೆಳಗಿನ ಜಾವ 3:15ಕ್ಕೆ ಸಂಭವಿಸಿದ ಅಪಘಾತದಲ್ಲಿ 8ಕ್ಕೂ ಅಧಿಕ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ. ಗಾಯಾಳುಗಳು ಅಂಕೋಲಾ ತಾಲ್ಲೂಕಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಿಯಂತ್ರಣ ತಪ್ಪಿ ಡಿವೈಡರ್‌ ಹತ್ತಿದ ಲಾರಿ

ನಿಯಂತ್ರಣ ತಪ್ಪಿದ ಟಿಪ್ಪರ್‌ ಲಾರಿಯೊಂದು ಡಿವೈಡರ್ ಮೇಲೆ ಹತ್ತಿದೆ. ಬೆಂಗಳೂರಿನ ಚಾಲುಕ್ಯ ಸರ್ಕಲ್‌ನಲ್ಲಿ ಮಂಗಳವಾರ ಬೆಳಗ್ಗೆ 5.30ರ ಸುಮಾರಿಗೆ ಈ ಘಟನೆ ನಡಿದಿದೆ. ಬನಶಂಕರಿಯಿಂದ ಹೆಬ್ಬಾಳದ ಕಡೆ ಹೊರಟಿದ್ದಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿದೆ. ಏಕಾಏಕಿ ರಸ್ತೆಯಿಂದ ಡಿವೈಡರ್‌ಗೆ ಹತ್ತಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಇಲ್ಲ. ಟಿಪ್ಪರ್ ಚಾಲಕ ಮನೋಹರ್‌ ಪೊಲೀಸರಿಗೆ ಮಾಹಿತಿ ನೀಡಿದ್ದು, ಲಾರಿಯನ್ನು ಮೇಲಕ್ಕೆ ಎತ್ತಿದ್ದಾರೆ.

Exit mobile version