Site icon Vistara News

ರಬ್ಬರ್ ಪ್ಲಾಂಟೇಶನ್ ಟ್ಯಾಪರ್‌ಗಳಿಗೆ ಶೇ. 12 ಬೋನಸ್ ಹೆಚ್ಚಳ: ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

C M Basavaraj Bommai at India Today Interview.

ಮಂಗಳೂರು: ರಬ್ಬರ್ ಪ್ಲಾಂಟೇಶನ್ ಟ್ಯಾಪರ್‌ಗಳಿಗೆ ಕೋವಿಡ್ ನಂತರ ಬೋನಸ್ ನೀಡಿಲ್ಲದಿರುವ ಕಾರಣ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಿಂದ ಈಗಿನ ಶೇ. 8ರಷ್ಟು ಇರುವ ಬೋನಸ್‌ಗೆ ಶೇ. 12ರಷ್ಟು ಸೇರಿಸಿ ಒಟ್ಟು ಶೇ. 20ರಷ್ಟು ಬೋನಸ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿನ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಹಾಗೂ ಸಾರ್ವಜನಿಕ ಸಮಾರಂಭವನ್ನು ಗುರುವಾರ (ಮಾ. 16) ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ರಬ್ಬರ್‌ ಪ್ಲಾಂಟೇಶನ್‌ ಟ್ಯಾಪರ್‌ಗಳ ನೆರವಿಗೆ ಧಾವಿಸುತ್ತಿರುವುದಾಗಿ ತಿಳಿಸಿದರು.

ಕರಾವಳಿ ಬಹಳಷ್ಟು ಅಭಿವೃದ್ಧಿಯಾಗಬೇಕು

ಡೀಸೆಲ್ ಕೋಟಾ 2 ಲಕ್ಷಕ್ಕೆ ಹೆಚ್ಚಳ, ಬೋಟುಗಳನ್ನು ಡೀಸೆಲ್‌ಗೆ ಪರಿವರ್ತಿಸಲು ಶೇ.50ರಷ್ಟು ವೆಚ್ಚವನ್ನು ಸರ್ಕಾರವೇ ಭರಿಸುವ ತೀರ್ಮಾನ ಮಾಡಲಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ನಾವು ಮಾಡುತ್ತಿದ್ದೇವೆ. ಲಕ್ಷ ದ್ವೀಪ ಮತ್ತು ಮಂಗಳೂರು ನಡುವೆ 65 ಕೋಟಿ ರೂ.ಗಳ ಜೆಟ್ಟಿ ಬೋಟುಗಳನ್ನು ಪ್ರವಾಸೋದ್ಯಮಕ್ಕೆ ಅನುಕೂಲವಾಗುವ ರೀತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮಂಗಳೂರು, ಕಾರವಾರ, ಗೋವಾ ಮತ್ತು ಮುಂಬೈಗೆ ವಾಟರ್ ವೇ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು, ವಿಶೇಷವಾಗಿ ಜನಸಾಮಾನ್ಯರಿಗೆ ಸಂಚಾರ ಮಾಡಲು ಸೌಲಭ್ಯ ಕಲ್ಪಿಸಲಾಗುತ್ತಿದೆ. ಕರಾವಳಿ ಬಹಳಷ್ಟು ಅಭಿವೃದ್ಧಿಯಾಗಬೇಕು. ಆಗ ಜಿಡಿಪಿ ಹೆಚ್ಚಾಗುತ್ತದೆ. ಯುವಕರಿಗೆ ಕೆಲಸಕ್ಕೆ ಅವಕಾಶಗಳು ಕಲ್ಪಿಸುವ ಸಾಧ್ಯತೆ ಹೆಚ್ಚಿದ್ದು, ಕರಾವಳಿಯ ಅಭಿವೃದ್ಧಿಯಲ್ಲಿ ಕನ್ನಡನಾಡಿನ ಅಭಿವೃದ್ಧಿಯೂ ಇದೆ ಎಂದರು.

ಅಗತ್ಯವಿದ್ದಲ್ಲಿ ಫ್ಲೋಟಿಂಗ್ ಜೆಟ್ಟಿಗೆ ಮಂಜೂರಾತಿ

ಕರಾವಳಿಯಲ್ಲಿ ಕೇಂದ್ರ ಸರ್ಕಾರದ ಸಿ.ಆರ್.ಜೆಡ್ ನಿಯಮಗಳನ್ನು ಸರಳೀಕೃತಗೊಳಿಸಿದೆ. 35 ವರ್ಷಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಆರ್ಥಿಕ ಚಟುವಟಿಕೆಗಳು, ಪ್ರವಾಸೋದ್ಯಮ ಔದ್ಯೋಗೀರಣ ದೊಡ್ಡ ಪ್ರಮಾಣದಲ್ಲಿ ಆಗಲಿದೆ. ಮೊದಲ ಬಾರಿಗೆ ಮರೀನಾ ಕ್ಕೆ ಮಂಜೂರು ಮಾಡಲಾಗಿದೆ. ಮಂಗಳೂರು ಕಾರವಾರ ಪೋರ್ಟ್ ಅಭಿವೃದ್ಧಿ, 8 ಮೀನುಗಾರಿಕೆ ಬಂದರು ಅಭಿವೃದ್ಧಿಯಲ್ಲದೇ ಫ್ಲೋಟಿಂಗ್ ಜೆಟ್ಟಿಗೆ ಮಂಜೂರಾತಿ ನೀಡಿಲಾಗಿದೆ. ಅಗತ್ಯವಿದ್ದಲ್ಲಿ ಫ್ಲೋಟಿಂಗ್ ಜೆಟ್ಟಿಗೆ ಮಂಜೂರಾತಿ ನೀಡಲಾಗುವುದು. ಕಡಲ ಕೊರೆತ ನಿಯಂತ್ರಣಕ್ಕೆ ವೇವ್ ಬ್ರೇಕಿಂಗ್ ತಂತ್ರಜ್ಞಾನಕ್ಕೆ ಅನುಮತಿ ನೀಡಲಾಗಿದೆ. ಬಟ್ಟಂಪಾಡಿಯಲ್ಲಿ ಈ ಕೆಲಸ ಆಗಲಿದೆ ಎಂದರು.

ಸ್ತ್ರೀ ಸಾಮರ್ಥ್ಯಕ್ಕೆ ಒತ್ತು

ದುಡಿಮೆಗೆ ಹೆಚ್ಚಿನ ಮಹತ್ವ ನೀಡಿ, ಕಾಯಕ ಯೋಜನೆಯಡಿ 50 ಸಾವಿರ ರೂ.ಗಳನ್ನು ನೀಡಲಾಗಿದೆ. ಸಾಮಾಜಿಕ ನ್ಯಾಯ ಒದಗಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಹೆಚ್ಚಿಸಲಾಗಿದೆ. ಅಸಾಧ್ಯವನ್ನು ಸಾಧ್ಯವಾಗಿಸಿದ ಸರ್ಕಾರ ನಮ್ಮದು. ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇವೆ. ವಸತಿ ಶಾಲೆ ಗಳನ್ನು ತಲಾ 25 ಕೋಟಿ ರೂ.ಗಳ ವೆಚ್ಚದಲ್ಲಿ ಒಟ್ಟು 4 ವಸತಿ ಶಾಲೆಗಳನ್ನು ಕಳೆದ ವರ್ಷ ಮಂಜೂರು ಮಾಡಿದ್ದು ಈ ವರ್ಷ ಮತ್ತೂ 4 ವಸತಿ ಶಾಲೆಗಳನ್ನು ಮಂಜೂರು ಮಾಡಿದೆ. ಸಮಾಜದಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸುವುದು ನಮ್ಮ ಬದ್ಧತೆ. ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಜಿಲ್ಲೆಯಲ್ಲಿ 2248 ಸ್ವಸಹಾಯ ಸಂಘಗಳಿಗೆ ಈಗಾಗಲೇ ಅನುದಾನ ತಲುಪಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಉತ್ತರದಾಯಿತ್ವ ವ್ಯವಸ್ಥೆ

ಸರ್ಕಾರಗಳ ಅಸ್ತಿತ್ವ ಜನರ ಬದುಕಿನ ಜೀವನಾಡಿಯನ್ನು ಆಧರಿಸಿದೆ. ವ್ಯವಸ್ಥೆಯಲ್ಲಿ ನಂಬಿಕೆ ಬರಲು ಸರ್ಕಾರ ಉತ್ತರದಾಯಿತ್ವ ಆಗಿರಬೇಕು. ಅಂಥ ಉತ್ತರದಾಯಿತ್ವ ವ್ಯವಸ್ಥೆಯನ್ನು ಜನ ಬೆಂಬಲಿಸಬೇಕು. ಆಗ ಪ್ರಜಾಪ್ರಭುತ್ವದಲ್ಲಿ ಅಭಿವೃದ್ಧಿ ನಿರಂತರವಾಗಿ ಆಗುತ್ತದೆ. ಮಕ್ಕಳಿಗೆ ಶಿಕ್ಷಣ ನೀಡಿದಾಗ ಸಮಾಜ ಪ್ರಗತಿಯಾಗುತ್ತದೆ ಎಂದರು.

ದಕ್ಷಿಣ ಕನ್ನಡದಲ್ಲಿ 139571 ರೈತರಿಗೆ ಕಿಸಾನ್ ಸಮ್ಮಾನ್ ಸೌಲಭ್ಯ

ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸಬ್ ಕಾ ಪ್ರಯಾಸ್ ಎನ್ನುವ ಮಂತ್ರ ಪ್ರಧಾನಿಗಳದ್ದು. ಕಿಸಾನ್ ಸಮ್ಮಾನ್ ಯೋಜನೆ ರೂಪಿಸಲಾಗಿದೆ. ಒಟ್ಟು 10 ಸಾವಿರ ರೂ.ಗಳನ್ನು ಈ ಯೋಜನೆಯಡಿ ನೀಡಲಾಗುತ್ತಿದೆ. 53.42 ಲಕ್ಷ ರೈತರಿಗೆ 16 ಸಾವಿರ ಕೋಟಿ ರೂ. ನೇರವಾಗಿ ಜಮಾ ಆಗಿದೆ. ದಕ್ಷಿಣ ಕನ್ನಡದಲ್ಲಿ 139571 ರೈತರಿಗೆ ಈ ಸೌಲಭ್ಯ ತಲುಪಿದೆ. 500 ಕೋಟಿ ರೂಪಾಯಿಗಳಿಗೂ ಹೆಚ್ಚು ಅನುದಾನ ದಕ್ಷಿಣ ಕನ್ನಡ ಜಿಲ್ಲೆಗೆ ತಲುಪಿದೆ ಎಂದು ಬೊಮ್ಮಾಯಿ ತಿಳಿಸಿದರು.

Exit mobile version