Site icon Vistara News

Byndoor Beach: ಕರಾವಳಿಯ ಬೈಂದೂರಿನಲ್ಲಿ ದೇಶದಲ್ಲೇ ಪ್ರಥಮ ಮರೀನಾ ನಿರ್ಮಾಣ: ಸಿಎಂ ಬಸವರಾಜ ಬೊಮ್ಮಾಯಿ

coastal karnataka

ಬೆಂಗಳೂರು: ಕರಾವಳಿ ಪ್ರದೇಶದ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಭಾರತದ ಪ್ರಥಮ ಮರೀನಾವನ್ನು (ಕಿರು ಬಂದರು) ಕರ್ನಾಟಕದ ಬೈಂದೂರಿನಲ್ಲಿ (Byndoor Beach) ನಿರ್ಮಿಸಲಾಗುವುದು. ಸಿಆರ್‌ಝಡ್‌ಗೆ ಕೇಂದ್ರ ಸರ್ಕಾರದ ಅನುಮತಿ ಪಡೆದು ಬರುವ ದಿನಗಳಲ್ಲಿ ಕರಾವಳಿ ಪ್ರದೇಶದಲ್ಲಿ ಬೀಚ್ ಪ್ರವಾಸೋದ್ಯಮ, ಯಾತ್ರಾ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕದ ಏಳು ಅದ್ಭುತಗಳ ಘೋಷಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯವನ್ನಾಳಿದ ಗಂಗರು, ಕದಂಬರು, ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರ ಕಾಲದ ಇತಿಹಾಸವನ್ನು ಪುರಾತತ್ವ ಇಲಾಖೆಯಿಂದ ಪಡೆದು ಐತಿಹಾಸಿಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಯಿಂದ ಪ್ರವಾಸೋದ್ಯಮದ ಅಭಿವೃದ್ಧಿಯ ಜತೆಗೆ ಇತಿಹಾಸದ ಅರಿವನ್ನು ಪಡೆಯಬಹುದಾಗಿದೆ ಎಂದರು.

ಪುರಾತನ ದೇವಾಲಯಗಳ ಕಾರಿಡಾರ್

ಬನವಾಸಿಯಲ್ಲಿರುವ ಮಧುಕೇಶ್ವರ, ಗಾಣಗಾಪುರ ದತ್ತಾತ್ರೆಯ ದೇಗುಲ ಸೇರಿ ಹಲವಾರು ಪುರಾತನ ದೇವಾಲಯಗಳ ಕಾರಿಡಾರ್ ನಿರ್ಮಿಸಿ ಯಾತ್ರಾ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ. ಬೆಣಕಲ್ ಪ್ರದೇಶದ ಅಭಿವೃದ್ಧಿ ಮಾಡಲು ಸೂಚನೆ ನೀಡಲಾಗಿದ್ದು, ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.

ಪ್ರವಾಸಿ ಮಾರ್ಗದರ್ಶಕರಿಗೆ ಸೌಲಭ್ಯ

ನೋಂದಾಯಿತ ಪ್ರವಾಸಿ ಮಾರ್ಗದರ್ಶಕರಿಗೆ 5000 ಮಾಸಾಶನ ಕೊಡುವ ಯೋಜನೆಯನ್ನು ರೂಪಿಸಲಾಗಿದೆ. ಅವರಿಗೆ ಹೆಚ್ಚಿನ ಸೌಲಭ್ಯಗಳನ್ನು ಸರ್ಕಾರ ಒದಗಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ | BJP Rathayatre : ಈ ಬಾರಿ 150 ಗುರಿ; ಮಾ.1ರಿಂದ 4 ತಂಡಗಳಲ್ಲಿ ರಾಜ್ಯಾದ್ಯಂತ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ

ಇತಿಹಾಸದ ಕುರುಹುಗಳನ್ನು ಹುಡುಕುವ ಕೆಲಸವಾಗಬೇಕು

ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವ ಸರ್ಕಾರದ ಉದ್ದೇಶಕ್ಕೆ ಇಂಬು ನೀಡುತ್ತಿರುವ 7 ವಂಡರ್ಸ್ ಕಾರ್ಯಕ್ರಮಕ್ಕೆ ಸರ್ಕಾರದ ಸಹಕಾರವಿದೆ. 7 ವಂಡರ್‌ಗಳನ್ನು ಹುಡುಕುವ ಪ್ರಕ್ರಿಯೆಯಲ್ಲಿ ಸುವರ್ಣ ನ್ಯೂಸ್ ಸಂಶೋಧಿಸಿರುವ ಕರ್ನಾಟಕದ 5000 ಪ್ರದೇಶಗಳ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸಿದರೆ, ಅಂತಹ ಪ್ರದೇಶಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಸುವರ್ಣ ನ್ಯೂಸ್ ಸಂಸ್ಥೆ ಇಂತಹ ಉತ್ತಮ ಯೋಜನೆಗಳನ್ನು ಪ್ರತಿ ವರ್ಷ ಹಮ್ಮಿಕೊಳ್ಳಬೇಕು, ಇದಕ್ಕೆ ಸರ್ಕಾರದ ಸಂಪೂರ್ಣ ಸಹಕಾರ ದೊರೆಯಲಿದೆ. ರಾಜ್ಯದ ಹಲವು ಹಳ್ಳಿಗಳಲ್ಲಿ ಇತಿಹಾಸದ ಕುರುಹುಗಳಿರುತ್ತವೆ, ಅವುಗಳನ್ನು ಹುಡುಕುವ ಕೆಲಸವಾಗಬೇಕಿದೆ ಎಂದರು.

ನಿಸರ್ಗದ ವೈಭವವನ್ನು ಉಳಿಸುವುದು ನಮ್ಮ ಕರ್ತವ್ಯ

ಸೃಷ್ಟಿ ಬಹಳ ಅದ್ಭುತ. ಮನುಷ್ಯನ ಕಲ್ಪನೆ ಬಹಳ ದೊಡ್ಡದು. ಅದನ್ನು ಮೀರಿರುವುದು ಸೃಷ್ಟಿ, ಪಂಚಭೂತಗಳಿಂದ ಆರಂಭವಾಗಿ, ಬಂಡೆಗಳ ಮೇಲೆ, ಬೆಟ್ಟ ಗುಡ್ಡ, ಸಮುದ್ರದ ಆಳದಲ್ಲಿ ಅದ್ಭುತಗಳಿವೆ‌. ಶ್ರವಣಬೆಳಗೊಳದ ಬೆಟ್ಟದ ದೊಡ್ಡ‌ಮೂರ್ತಿ ನಿರ್ಮಿಸುವ ರೀತಿಯನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಗೋಲಗುಂಬಜ್‌ನ ವಾಸ್ತುಶಿಲ್ಪ , ವಿಸ್ಪರಿಂಗ್ ಗ್ಯಾಲರಿ ಆಗಿನ ಕಾಲದಲ್ಲಿಯೇ ವೈರ್ ಲೆಸ್ ಕಲ್ಪನೆ ಮಾಡಿರುವುದು ಅದ್ಭುತ. ನಿಸರ್ಗದ ವೈಭವವನ್ನು ನಾವು ಅನುಭವಿಸಬೇಕು ಮತ್ತು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಶ್ರೇಷ್ಠ ಕನ್ನಡಿಗ ಹುಡುಕಿದ ರೀತಿಯಲ್ಲಿಯೇ ನಿಸರ್ಗದತ್ತವಾದ ಏಳು ಅದ್ಭುತಗಳನ್ನು ಹುಡುಕಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.

ಮುಂದಿನ ಜನಾಂಗಕ್ಕೆ ಇತಿಹಾಸ ಪರಿಚಯ

ನಮ್ಮ ನಾಗರೀಕತೆ ದೊಡ್ಡದಿದೆ. ಆದರೆ ನಾಗರಿಕತೆಯೇ ಸಂಸ್ಕೃತಿಯಲ್ಲ. ನಾವೇನು ಇದ್ದೇವೆ ಅದು ನಾಗರಿಕತೆ, ನಾವೇನಾಗಿದ್ದೇವೆ ಅದು ನಮ್ಮ ಸಂಸ್ಕೃತಿ. ಇಂದಿನ ಈ ಕಾರ್ಯಕ್ರಮ ನಾಗರಿಕತೆಯಿಂದ ಸಂಸ್ಕೃತಿಯ ಕಡೆಗಿನ ನಡಿಗೆ ಆಗಿದೆ. ನಮ್ಮ ಶಿಲ್ಪ ಕಲೆಯ ಮುಖಾಂತರ ನಮ್ಮ ಇತಿಹಾಸ, ಸಂಸ್ಕೃತಿಯ ಕಡೆಗೆ ಕರೆದೊಯ್ಯುವ ಕೆಲಸವನ್ನು ಇಂದು ಮಾಡಲಾಗಿದೆ. ಮನುಷ್ಯ ಇತಿಹಾಸದ ಭಾಗವಾಗಬೇಕು ಇಲ್ಲವೇ ಇತಿಹಾಸ ಸೃಷ್ಟಿಸಬೇಕು. ಅನೇಕ ಅದ್ಭುತಗಳಿವೆ ಅವುಗಳನ್ನು ಹುಡುಕುವ ಕೆಲಸ‌‌ಮಾಡಬೇಕಿದೆ. ಮುಂದಿನ ಜನಾಂಗಕ್ಕೆ ನಮ್ಮ ಇತಿಹಾಸವನ್ನು ತೋರಿಸುವ ಕೆಲಸ ಮಾಡಬೇಕಿದೆ. ಸೃಷ್ಟಿಕರ್ತನ ಮುಂದೆ ನಾವೆಲ್ಲ ತೃಣ, ಅವನ ಸೃಷ್ಟಿಯನ್ನು ಜನರಿಗೆ ಪರಿಚಯಿಸುವ ಕೆಲಸವನ್ನು ಮಾಡಬೇಕಿದೆ. ಬೇಲೂರು ಚನ್ನಕೇಶವ ದೇವಾಲಯ ನಿರ್ಮಾಣ ನೂರು ವರ್ಷ ಮಾಡಿದ್ದಾರೆ ಎಂದರು.

ಹಸಿರು ಆಯವ್ಯಯ

ಪ್ರಯಾಣ ಮಾಡುವುದು ಮನುಷ್ಯನ ಸಹಜ ಗುಣವೇ ಅಭಿವೃದ್ಧಿಗೆ ನಾಂದಿಯಾಗಿದೆ. ಕರ್ನಾಟಕ ನಿಸರ್ಗದತ್ತವಾದ ರಾಜ್ಯವಾಗಿದ್ದು, 350 ಕಿ.ಮೀ. ಕರಾವಳಿ ಸೇರಿದಂತೆ 10 ಮಾದರಿಯ ಹವಾಮಾನವುಳ್ಳ ಪ್ರದೇಶಗಳಿವೆ. 400 ಕಿ.ಮೀ. ಪಶ್ಚಿಮ ಘಟ್ಟವಿದ್ದು, ವೈವಿಧ್ಯಮಯ ಜೀವರಾಶಿಗಳಿವೆ. 300 ದಿನ ಸೂರ್ಯನ ಶಾಖ ಬೀಳುತ್ತದೆ. ನದಿಗಳೂ ಹರಿದಿದ್ದು, ನಿಸರ್ಗ ನಮ್ಮ ಪರವಾಗಿದೆ. ನಿಸರ್ಗವನ್ನು ಮೀರಿ ನಾವು ನಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾನು ಹಸಿರು ಆಯವ್ಯಯವನ್ನು ಮಾಡಿದ್ದೇನೆ‌‌. ಈ ವರ್ಷ ಆಗಿರುವ ಪರಿಸರ ‌ನಾಶವನ್ನು ನಾವು ತುಂಬಿಕೊಳ್ಳಬೇಕು. ಪ್ರವಾಸೋದ್ಯಮ ನೀತಿಯನ್ನು ರೂಪಿಸಲಾಗಿದೆ ಎಂದರು.

ಕರ್ನಾಟಕದ ಏಳು ಅದ್ಭುತಗಳು

  1. ಹಿರೇಬೆಣಕಲ್‌ ಶಿಲಾಸಮಾಧಿಗಳು
  2. ಹಂಪಿ
  3. ಗೊಮ್ಮಟೇಶ್ವರ
  4. ಗೋಲಗುಮ್ಮಟ
  5. ಮೈಸೂರು ಅರಮನೆ
  6. ಜೋಗ ಜಲಪಾತ
  7. ನೇತ್ರಾಣಿ ಗುಡ್ಡ
Exit mobile version