Site icon Vistara News

7th Pay commission : ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌; ಮಧ್ಯಂತರ ವರದಿ ಶಿಫಾರಸು ಜಾರಿಗೆ ಕ್ರಮ ಎಂದು ಘೋಷಿಸಿದ ಸಿಎಂ

bommai 7th pay commission

#image_title

ವಿಧಾನಸಭೆ (ಬೆಂಗಳೂರು): ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಸೌಲಭ್ಯಗಳ ಪರಿಷ್ಕರಣೆಗಾಗಿ ರಚಿಸಲ್ಪಟ್ಟಿರುವ 7ನೇ ವೇತನ ಆಯೋಗದ (7th Pay Commission) ಮಧ್ಯಂತರ ವರದಿ ಬಂದ ಕೂಡಲೇ ಅದರ ಶಿಫಾರಸುಗಳ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡಿದ ಬೊಮ್ಮಾಯಿ ಅವರು, ಮಾರ್ಚ್ ಒಳಗಾಗಿ ಮಧ್ಯಂತರ ವರದಿ ಕೊಡಲು ಹೇಳುತ್ತೇವೆ. ಮಧ್ಯಂತರ ವರದಿಯಲ್ಲಿ ಬಂದ ಶಿಫಾರಸು ಜಾರಿ‌ ಮಾಡಲು ಕ್ರಮ ಕೈಗೊಳುತ್ತೇವೆ‌. ಇದಕ್ಕೆ ಸರ್ಕಾರದ ಬದ್ದವಾಗಿದೆ ಎಂದು ಘೋಷಿಸಿದರು. ಇದರೊಂದಿಗೆ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ.

ಏಳನೇ ವೇತನ ಆಯೋಗದ ವರದಿಯಲ್ಲಿ ಏನೇನು ಅಂಶಗಳಿರಬೇಕು ಎಂಬುದನ್ನು ನಿರ್ಧರಿಸುವುದಕ್ಕಾಗಿ ಸುಧಾಕರ ರಾವ್‌ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಅದು ಈಗಾಗಲೇ ಸರ್ಕಾರಿ ನೌಕರರ ನಾನಾ ಸಂಘಟನೆಗಳಿಂದ ಮಾಹಿತಿಯನ್ನು ತರಿಸಿಕೊಂಡಿದೆ, ಬೇಡಿಕೆಗಳ ಬಗ್ಗೆ ಪ್ರಶ್ನಾವಳಿ ಮೂಲಕ ವಿವರ ಪಡೆದಿದೆ. ಅದರ ಮಧ್ಯಂತರ ವರದಿಯನ್ನು ಮಾರ್ಚ್‌ ಒಳಗೆ ಕೊಡಲು ಹೇಳುತ್ತೇನೆ ಮತ್ತು ಮಧ್ಯಂತರ ವರದಿಯ ಶಿಫಾರಸುಗಳ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು. ಈ ವಿಚಾರವನ್ನು ಸರ್ಕಾರಿ ನೌಕರರ ಸಂಘಗಳಿಗೂ ತಿಳಿಸಲಾಗಿದೆ ಎಂದು ಅವರು ಹೇಳಿದರು.

ಪ್ರತಿಭಟನೆಗೆ ಮುಂದಾಗಿದ್ದ ಸರ್ಕಾರಿ ನೌಕರರು

ಸರ್ಕಾರ ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿ ಕುರಿತು ಬದ್ಧತೆ ಪ್ರಕಟಿಸಬೇಕು ಮತ್ತು ಹಳೆ ಪಿಂಚಣಿ ಯೋಜನೆ (ಓಪಿಎಸ್‌) ಜಾರಿಗೆ ತರಬೇಕು ಎಂದು ಒತ್ತಾಯಿಸಿ ಮಾರ್ಚ್‌ 1 ರಿಂದ ಕರ್ತವ್ಯಕ್ಕೆ ಗೈರಾಗುವ ಮೂಲಕ ಹೋರಾಟ ನಡೆಸಲು ರಾಜ್ಯ ಸರ್ಕಾರಿ ನೌಕರರ ಸಂಘವು ಈಗಾಗಲೇ ತೀರ್ಮಾನಿಸಿದೆ. ಈ ನಡುವೆ, ಸರ್ಕಾರಿ ನೌಕರರ ಬೇಡಿಕೆಗಳ ಬಗ್ಗೆ ಅವರೊಂದಿಗೆ ಚರ್ಚಿಸುತ್ತೇನೆ, ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಲಾಗುವುದು, ಪ್ರತಿಭಟನೆಗೆ ಅವಕಾಶವಿಲ್ಲದಂತೆ ಸಮಸ್ಯೆ ಪರಿಹಾರವಾಗಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದರು. ಇದೀಗ ವಿಧಾನಸಭೆಯಲ್ಲೇ ಆಶ್ವಾಸನೆ ಕೊಡುವ ಮೂಲಕ ಸಿಎಂ ಅವರು ಸರ್ಕಾರಿ ನೌಕರರ ಬೇಡಿಕೆಗೆ ಸ್ಪಂದಿಸಿದ್ದಾರೆ. ಸಿಎಂ ಆಶ್ವಾಸನೆ ಮೇರೆಗೆ ಸರ್ಕಾರಿ ನೌಕರರು ತಮ್ಮ ನಿಗದಿತ ಪ್ರತಿಭಟನೆಯನ್ನು ಹಿಂಪಡೆಯುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ : 7th Pay commission : ಮಾ. 1ರಿಂದ ಸರ್ಕಾರಿ ನೌಕರರ ಪ್ರತಿಭಟನೆ, ಮಾತುಕತೆ ಸಂದೇಶ ರವಾನಿಸಿದ ಸಿಎಂ ಬೊಮ್ಮಾಯಿ

Exit mobile version