Site icon Vistara News

CM Siddaramaiah: ಪತ್ರಕರ್ತರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಿಎಂ ಸಿದ್ದರಾಮಯ್ಯ ಭರವಸೆ

Journalists organisations submit memorandum to CM Siddaramaiah

ಬೆಂಗಳೂರು: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ, ಜಾಹಿರಾತು ನೀತಿ, ಜಾಹೀರಾತು ತಾರತಮ್ಯ, ದರ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪತ್ರಕರ್ತರ ಸಂಘಟನೆಗಳ ಪದಾಧಿಕಾರಿಗಳು, ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಪತ್ರಕರ್ತರ ಸಂಘಟನೆಗಳ ಪದಾಧಿಕಾರಿಗಳ ಸಮಸ್ಯೆಗಳನ್ನು ಆಲಿಸಿದ ಸಿಎಂ ಸಿದ್ದರಾಮಯ್ಯ, ಪತ್ರಕರ್ತರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಬೇಡಿಕೆಗಳ ಈಡೇರಿಕೆಗೆ ಸೂಕ್ತ ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಈ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ)ದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರನ್ನು ಯಶಸ್ವಿನಿ ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು. ಪತ್ರಕರ್ತರ ಪಿಂಚಣಿಗೆ ಕಠಿಣ ಷರತ್ತು ವಿಧಿಸಿರುವುದನ್ನು ಸಡಿಲಿಸಿ, ಸರಳೀಕರಣ ಮಾಡಬೇಕು. ಈ ಮೊದಲಿದ್ದಂತೆ ಖಜಾನೆ ಮೂಲಕವೇ ಮಾಸಾಶನ ಪಾವತಿಯಾಗಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ | Laptop Distribution: ವಿವಿಗಳ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್; 230 ಕೋಟಿ ರೂ. ಒದಗಿಸಲು ಸಿಎಂ ಸೂಚನೆ

ತಾಲೂಕು ಮಟ್ಟದಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಅನುದಾನ‌ ನೀಡಬೇಕು. ಸ್ಥಳೀಯ ಸಂಸ್ಥೆಗಳು, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪತ್ರಕರ್ತರಿಗೆ ನಿವೇಶನ, ಮನೆಗಳನ್ನು ಶೇ.50 ರಿಯಾಯಿತಿ ದರದಲ್ಲಿ ಕೊಡಬೇಕು ಎಂದು ಮನವಿ ಮಾಡಿದರು.

ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 100 ಕೋಟಿ ರೂ ಮೀಸಲಿಡಬೇಕು. ಜಿಲ್ಲಾ, ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಿಗೆ ಮತ್ತು ಮಾಧ್ಯಮಗಳಿಗೆ ಕ್ರಮಬದ್ದವಾಗಿ ಜಾಹೀರಾತು ನೀಡಬೇಕು ಎಂದು ಶಿವಾನಂದ ತಗಡೂರು ಒತ್ತಾಯಿಸಿದರು.

ಜಾಹೀರಾತುಗಳನ್ನು ಈ ಮೊದಲಿದ್ದಂತೆ ವಾರ್ತಾ ಇಲಾಖೆ ಮತ್ತು ಸರ್ಕಾರಿ ಏಜೆನ್ಸಿ ಮೂಲಕವೇ ನಿಭಾಯಿಸಬೇಕು. ಪತ್ರಿಕಾ ವಿತರಕರಿಗಾಗಿ ಹಿಂದೆ ಬಜೆಟ್‌ನಲ್ಲಿ ಮೀಸಲಿಟ್ಟ 2 ಕೋಟಿ ರೂ.ಗಳಲ್ಲಿ ನಯಾ ಪೈಸೆ ಬಳಕೆಯಾಗಿಲ್ಲ. ಅದನ್ನು ಕಾರ್ಮಿಕ ಇಲಾಖೆ ಮೂಲಕ ನಿರ್ವಹಣೆ ಮಾಡಬೇಕು ಮತ್ತು ಪತ್ರಿಕಾ ವಿತರಕರ ಕ್ಷೇಮ ನಿಧಿ ಹೆಚ್ಚಿಸಬೇಕು ಎಂದು ಕೆಯುಡಬ್ಲ್ಯೂಜೆ ವಿನಂತಿಸಿತು.

ಇದನ್ನೂ ಓದಿ | Education Policy : ರಾಜ್ಯದಲ್ಲಿ NEP ರದ್ದು; ಹೊಸ ರಾಜ್ಯ ಶಿಕ್ಷಣ ನೀತಿ CBSE, ICSEಗೆ ಅನ್ವಯ ಆಗುತ್ತಾ?

ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ವಾರ್ತಾ ಮತ್ತು ಪ್ರಚಾರ ಇಲಾಖೆ ಕಾರ್ಯದರ್ಶಿ ಎನ್.ಜಯರಾಮ್, ಆಯುಕ್ತ ಹೇಮಂತ ನಿಂಬಾಳ್ಕರ್, ಪತ್ರಕರ್ತರ ಸಂಘಟನೆಗಳ ಪದಾಧಿಕಾರಿಗಳಾದ ಮತ್ತಿಕೆರೆ ಜಯರಾಂ, ಸೋಮಶೇಖರ ಕೆರಗೋಡು, ರವಿಕುಮಾರ್ ಟೆಲೆಕ್ಸ್, ಪದ್ಮ ಶಿವಮೊಗ್ಗ, ಮಂಜುಶ್ರೀ ಕಡಕೊಳ, ರಶ್ಮಿಪಾಟೀಲ್, ರೇಖಾ, ಜೆ.ಆರ್.ಕೆಂಚೇಗೌಡ, ನಾಗತಿಹಳ್ಳಿ ನಾಗರಾಜ್, ಮಂಜುನಾಥ್, ಮಲ್ಲಿಕಾರ್ಜುನ ಕಬ್ಬೂರು, ಚಲುವರಾಜು, ಮುರುಳೀಧರ್, ವೆಂಕಟಸಿಂಗ್, ರಾಜ್ಯ ಪತ್ರಿಕಾ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ ಮತ್ತಿತರರು ಇದ್ದರು.

Exit mobile version