Site icon Vistara News

CM Siddaramaiah: ತೈಲ, ಹಾಲು ಆಯ್ತು; ಮುಂದಿನ ಸರದಿಯಲ್ಲಿ ನೀರು, ಆಟೋ, ಬಸ್‌ ಟಿಕೆಟ್‌ ದರ ಏರಿಕೆ ಗ್ಯಾರಂಟಿ

cm siddaramaiah water price hike

ಬೆಂಗಳೂರು: ʼಗ್ಯಾರಂಟಿʼ ಯೋಜನೆಗಳಿಗೆ (Guarantee Schemes) ಹಣ ಹೊಂಚಲು ಎಲ್ಲ ಕಡೆಗಳಿಂದಲೂ ದರ ಏರಿಕೆ ಮಾಡಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಸರಕಾರ, ಕುಡಿಯುವ ನೀರಿಗೂ (Drinking Water) ದರ ಏರಿಸಲು ಚಿಂತನೆ ನಡೆಸಿದೆ. ಈಗಾಗಲೇ ಹಾಲು (Milk Price), ತೈಲ ದರ (Petrol price) ಏರಿಸಿದ್ದು, ಮುಂದಿನ ದಿನಗಳಲ್ಲಿ ಮೆಡಿಕಲ್ ಸೀಟ್ (Medical Seat Fee) ಶುಲ್ಕ , ಬಸ್ ಟಿಕೆಟ್ ದರ (Bus Ticket Price), ‌ಕಾವೇರಿ ನೀರಿನ (Kaveri Water Price) ದರ ಏರಿಕೆಗೆ ಪ್ಲಾನ್ ಮಾಡಿಕೊಂಡಿದೆ.

ಜನರ ಜೇಬಿಗೆ ಕತ್ತರಿ ಹಾಕಲು ಸಿದ್ಧವಾಗಿರುವ ರಾಜ್ಯ ಸರಕಾರದಿಂದ ಜನಸಾಮಾನ್ಯರ ಹೆಗಲಿಗೆ ದರದ ಹೊರೆ ಬೀಳಲಿದೆ. ಮುಂದಿನ ದಿನಗಳಲ್ಲಿ ಯಾವ್ಯಾವುದರ ಬೆಲೆ ಹೆಚ್ಚಳದ ಸಾಧ್ಯತೆ ಇದೆ ಎಂಬ ಲೆಕ್ಕಾಚಾರ ಇಲ್ಲಿದೆ.

ನೀರಿನ ದರ ಏರಿಕೆ

ಬೆಂಗಳೂರಿನಲ್ಲಿ ಕಾವೇರಿ ನೀರು ದರ ಪರಿಷ್ಕರಣೆಗೆ ಜಲಮಂಡಳಿ ಸಿದ್ಧತೆ ನಡೆಸಿದ್ದು, ನೀರಿನ ದರ ಪರಿಷ್ಕರಣೆಗೆ ಅಧಿಕಾರಿಗಳು ಪ್ರಸ್ತಾವನೆ ರೆಡಿ ಮಾಡಿದ್ದಾರೆ. ಈ ಬಾರಿ ಕಾವೇರಿ ನೀರಿನ ದರ ಪರಿಷ್ಕರಣೆ ಬಹುತೇಕ ಕನ್ಫರ್ಮ್ ಆಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ. 10 ವರ್ಷದ ಬಳಿಕ ಕಾವೇರಿ ನೀರಿನ ದರ ಪರಿಷ್ಕರಣೆ ಆಗುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ನೀರಿನ ದರ ಕೂಡ ಹೆಚ್ಚಾಗಲಿದೆ.

ಬಸ್ ಟಿಕೆಟ್ ದರ ಹೆಚ್ಚಳ

ಟಿಕೆಟ್‌ ದರ ಹೆಚ್ಚಳ ಬಗ್ಗೆ ರಾಜ್ಯ ಸರ್ಕಾರಕ್ಕೆ 4 ಸಾರಿಗೆ ಬಸ್‌ ನಿಗಮಗಳು ಮನವಿ ಮಾಡಿಕೊಂಡಿವೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ವಾಯವ್ಯ ಸಾರಿಗೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳು ಕಳೆದ 4-5 ವರ್ಷಗಳಿಂದ ಟಿಕೆಟ್‌ ದರ ಹೆಚ್ಚಳ ಮಾಡಿಲ್ಲ. ಮಾಹಿತಿ ಪ್ರಕಾರ, ಬರೋಬ್ಬರಿ ಶೇ.25ರಷ್ಟು ದರ ಹೆಚ್ಚಳ‌ಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ಮುಂದಿನ‌ ದಿನಗಳಲ್ಲಿ ಬಸ್ ಟಿಕೆಟ್ ದರ ಹೆಚ್ಚುವ ಸಾಧ್ಯತೆ ಇದೆ.

ಮೆಡಿಕಲ್ ಸೀಟ್ ಶುಲ್ಕ ದುಬಾರಿ

ಮೆಡಿಕಲ್ ವಿದ್ಯಾರ್ಥಿಗಳಿಗೂ ಶೀಘ್ರದಲ್ಲಿಯೇ ಶಾಕ್ ಕೊಡಲು ಸರಕಾರ ಮುಂದಾಗಿದ್ದು, ಸೀಟ್ ಶುಲ್ಕ ಹೆಚ್ಚಳಕ್ಕೆ ಮನಮಾಡಿದೆ. ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್‌ರಿಂದ‌ ಈ ಮಾಹಿತಿ ದೊರೆತಿದ್ದು, ಮೆಡಿಕಲ್ ಸೀಟ್ ಶುಲ್ಕ ಹೆಚ್ಚಳದ ಬಗ್ಗೆ ಈಗಾಗಲೇ ಮೀಟಿಂಗ್ ಮಾಡಲಾಗಿದೆ. ಮೀಟಿಂಗ್‌ನಲ್ಲೂ ಕೂಡ ಶುಲ್ಕ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಶೇ.10ರಷ್ಟು ಶುಲ್ಕ ಹೆಚ್ಚಾಗುವ ಸಾಧ್ಯತೆ ಇದೆ.

ಆಟೋ ದರ ಆಘಾತ

ಶೀಘ್ರದಲ್ಲಿಯೇ ಆಟೋ ಗ್ರಾಹಕರಿಗೆ ಮತ್ತೊಂದು ದರ ಏರಿಕೆ ಶಾಕ್ ಆಗಬಹುದು. ಆಟೋ ಪ್ರಯಾಣ ದರ ಏರಿಕೆಗೆ ಚಾಲಕರ ಸಂಘ ಒತ್ತಾಯಿಸಿದೆ. ಬೆಲೆ ಏರಿಕೆ ಬಿಸಿಯಿಂದ ಆಟೋ ಚಾಲಕರು ಆರ್ಥಿಕ ಸಂಕಷ್ಟದಲ್ಲಿದ್ದು, ಪ್ರಯಾಣ ದರ ಹೆಚ್ಚಿಸುವಂತೆ ಬೆಂಗಳೂರು ಆಟೋ ಚಾಲಕರ ಸಂಘ ಒತ್ತಾಯಿಸಿದೆ. ಮೂರು ವರ್ಷಗಳಿಂದ ಪ್ರಯಾಣ ದರ ಏರಿಕೆಯಾಗಿಲ್ಲ. ಕನಿಷ್ಠ ಆಟೋ ದರವನ್ನು 30 ರೂಪಾಯಿಯಿಂದ 40 ರೂಪಾಯಿಗೆ ಏರಿಸಬೇಕು. ಈಗಾಗಲೇ ಓಲಾ, ಊಬರ್‌ಗಳಲ್ಲಿ ಮಿನಿಮಮ್ ಚಾರ್ಚ್ 50 ರೂಪಾಯಿ ಇದೆ. ಆಟೋ ದರ ಪರಿಷ್ಕರಣೆಯಾಗಿ ಎರಡುವರೆ ವರ್ಷ ಕಳೆದಿದೆ. 2021ರ ಡಿಸೆಂಬರ್ 20ರಂದು ಆಟೋ ದರ ಪರಿಷ್ಕರಿಸಲಾಗಿತ್ತು. ನಂತರ ಪರಿಷ್ಕರಣೆ ಮಾಡಿಲ್ಲ. ಆರಂಭದ 2 ಕಿ.ಮೀ.ಗೆ 30 ರೂ. ನಂತರ ಪ್ರತಿ ಹೆಚ್ಚುವರಿ ಕಿ.ಮೀ.ಗೆ 15 ರೂ. ದರ ನಿಗದಿಯಾಗಿದೆ. ಇದೀಗ ಆರಂಭದ ದರ 40 ರೂಪಾಯಿ ಇದೆ. ಪ್ರತಿ ಕಿಲೋಮೀಟರ್‌ಗೆ 20 ರೂಪಾಯಿಗೆ ಹೆಚ್ಚಿಸುವಂತೆ, ಮಿನಿಮಮ್ ಆಟೋ ದರ 50 ರೂಪಾಯಿ ಮಾಡುವಂತೆ ಮನವಿ ಮಾಡಲಾಗಿದೆ.

ಈ ಬಗ್ಗೆ ಆಟೋ ಚಾಲಕರ ಸಂಘದಿಂದ ಬೆಂಗಳೂರು ನಗರ ಜಿಲ್ಲಾ ಉಪ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಬೆಂಗಳೂರಿನಲ್ಲಿ ಆಟೋ ರಿಕ್ಷಾ ದರವನ್ನು ಸಗಟು ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಪರಿಷ್ಕರಿಸಬೇಕು. ಪ್ರತಿ ವರ್ಷ ದರ ಪರಿಷ್ಕರಿಸಿದರೆ ಪ್ರಯಾಣಿಕರಿಗೆ ಸೇವೆ ನಿರಾಕರಿಸುವುದನ್ನು ತಪ್ಪಿಸಬಹುದು. ಅಧಿಕ ಶುಲ್ಕ ವಿಧಿಸುವ ದೂರುಗಳನ್ನು ಕಡಿಮೆ ಮಾಡಬಹುದು. ಇಂಧನ ಮತ್ತು ಬಿಡಿಭಾಗಗಳ ಬೆಲೆಗಳು ಮತ್ತು ವಾಹನ ಬೆಲೆ ಹೆಚ್ಚಳ‌ ಹಿನ್ನೆಲೆಯಲ್ಲಿ ಆಟೋ ಚಾಲಕರಿಗೆ ಆರ್ಥಿಕ ಹೊರೆಯಾಗುತ್ತಿದ್ದು ದರ ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿದೆ.

ಇದನ್ನು ಓದಿ: ವಿಸ್ತಾರ ಸಂಪಾದಕೀಯ: ಹಾಲು ದರ ಏರಿಕೆ ಬಳಕೆದಾರನಿಗೆ ಹೊರೆಯಾಗದಿರಲಿ

Exit mobile version