Site icon Vistara News

ಪರೇಶ್‌ ಮೇಸ್ತ ಸಾವು | ಬಿಜೆಪಿ ಬಣ್ಣ ಬಯಲು ಮಾಡಲು ನ. 24ರಂದು ಕಾಂಗ್ರೆಸ್‌ನಿಂದ ಬೃಹತ್‌ ಸಮಾವೇಶ

Paresh mesta case Congress protest

ಕಾರವಾರ: ಪರೇಶ್ ಮೇಸ್ತಾನ ಸಾವಿನ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಂಡು ಬರೀ ಸುಳ್ಳುಗಳನ್ನೆ ಹೇಳಿ ಜನರ ಭಾವನೆಗಳ ಜೊತೆಗೆ ಆಟವಾಡಿದ ಬಿಜೆಪಿಗರ ಬಣ್ಣ ಬಯಲು ಮಾಡುವ ಉದ್ದೇಶದಿಂದಲೇ ನ. 24ರಂದು ಕುಮಟಾದ ಮಣಕಿ ಮೈದಾನದಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ಐವನ್ ಡಿಸೋಜಾ ತಿಳಿಸಿದರು.

ಕುಮಟಾದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹೊನ್ನಾವರದ ಪರೇಶ ಮೇಸ್ತಾ ಸಾವಿನ ಪ್ರಕರಣವನ್ನು ಬಿಜೆಪಿ ರಾಜಕೀಯ ಅಸ್ತ್ರವನ್ನಾಗಿಸಿಕೊಂಡು ಅಧಿಕಾರ ಅನುಭವಿಸುತ್ತಿದೆ. ಪರೇಶ ಮೇಸ್ತಾ ಸಾವಿನ ನಂತರ ಜಿಲ್ಲೆಯಾದ್ಯಂತ 67 ವಿವಿಧ ಸೆಕ್ಷನ್‌ಗಳಲ್ಲಿ 2988 ಜನರ ವಿರುದ್ಧ ಪ್ರಕರಣ ದಾಖಲಾಗಿ, 361 ಜನರನ್ನು ಪೊಲೀಸರು ಬಂಧಿಸಿದ್ದರು. 272 ಜನರ ಮೇಲೆ ರೌಡಿ ಶೀಟರ್ ಪ್ರಕರಣ ದಾಖಲಾಗಿ, 1699 ಜನರ ವಿರುದ್ಧ ಪೊಲೀಸರು ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಇದರಿಂದ ಅನೇಕ ಯುವಕರ ಕುಟುಂಬಗಳು ಬೀದಿ ಪಾಲಾಗಿತ್ತು ಎನ್ನುವುದನ್ನು ನೆನಪಿಸಿದರು.

ಪರೇಶ್‌ ಮೇಸ್ತ ಸಾವಿನ ಸಂದರ್ಭದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಹಾಕಿದ್ದ ಫ್ಲೆಕ್ಸ್‌

ʻʻಈ ಪ್ರಕರಣವನ್ನು ರಾಜಕೀಯ ದುರುದ್ದೇಶದ ಕೃತ್ಯಕ್ಕೆ ಬಳಸಿದ ಬಿಜೆಪಿ, ಇದು ಸಹಜ ಸಾವಲ್ಲ. ಅನ್ಯಕೋಮಿನವರು ಹೊಡೆದು ಕೊಲೆ ಮಾಡಿದ್ದಾರೆ ಎಂದು ಬಿಂಬಿಸಿ, ರಾಜ್ಯಾದ್ಯಂತ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು. ಸುಳ್ಳಿನ ಕಂತೆ ಸೃಷ್ಟಿಸಿದ್ದರಿಂದ ಕರಾವಳಿ ಭಾಗದಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದರು. ಪರೇಶ ಮೇಸ್ತ ಸಾವಿನ ಫಲಾನುಭವಿಗಳಾದ ಬಿಜೆಪಿ ಶಾಸಕರು ತಕ್ಷಣ ರಾಜೀನಾಮೆ ನೀಡಬೇಕುʼʼ ಎಂದು ಆಗ್ರಹಿಸಿದರು.

ʻʻಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಪ್ರಕರಣವನ್ನು ಸಿ.ಐ.ಡಿ ತನಿಖೆ ಒಪ್ಪಿಸಿದಾಗ ಬಿಜೆಪಿ ಮುಖಂಡರು ಪ್ರತಿಭಟಿಸಿ, ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಆ ನಂತರ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಸುದೀರ್ಘ 4 ವರ್ಷ ತನಿಖೆ ನಡೆಸಿದ ಸಿಬಿಐ ಪರೇಶ ಮೇಸ್ತನದ್ದು, ಕೊಲೆಯಲ್ಲ, ಸಹಜ ಸಾವು ಎಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದೆ. ಇದರಿಂದ ಬಿಜೆಪಿಯ ಮುಖವಾಡ ಕಳಚಿಂತಾಗಿದೆʼʼ ಎಂದು ಡಿಸೋಜಾ ಅವರು ವಾಗ್ದಾಳಿ ನಡೆಸಿದರು.

ಸಮಾನತೆ ಮತ್ತು ಸೌಹಾರ್ದತೆ ಧ್ಯೇಯವಾಕ್ಯ
ʻʻಬಿಜೆಪಿ ಮುಖವಾಡವನ್ನು ಜನರ ಮುಂದೆ ತೆರೆದಿಡಲು ಸಮಾನತೆ ಮತ್ತು ಸೌಹಾರ್ದತೆ ಎಂಬ ಧ್ಯೇಯ ವಾಕ್ಯದೊಂದಿಗೆ ಕುಮಟಾದ ಮಣಕಿ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಂಡಿದ್ದೇವೆ. ಪರೇಶ ಮೇಸ್ತನ ಪ್ರಕರಣದ ಲಾಭ ಪಡೆದ ಬಿಜೆಪಿ, ಬೆಲೆ ಏರಿಕೆ, ಬಡವರಿಗೆ ಅನ್ಯಾಯ ಮಾಡುತ್ತಿರುವುದು ಸೇರಿದಂತೆ ವಿವಿಧ ಲೋಪ-ದೋಷಗಳನ್ನು ಜನರ ಮುಂದಿಡಲು ನ.24 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನದ ವರೆಗೆ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆʼʼ ಎಂದರು.

ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ರಾಜ್ಯ ಉಸ್ತುವಾರಿ ಸುರ್ಜೇವಾಲ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ, ಮಾಜಿ ಸಚಿವ ಹಾಗೂ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ, ಮಾಜಿ ಸಚಿವರು, ಹಾಲಿ ಶಾಸಕರು ಸೇರಿದಂತೆ ಸುಮಾರು 67 ರಾಜ್ಯದ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಿಂದ ಸುಮಾರು 50 ಸಾವಿರ ಕಾರ್ಯಕರ್ತರು ಭಾಗವಹಿಸುವ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸಲಿದ್ದಾರೆ ಎಂದರು.

ಮಾಧ್ಯಮ ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯಕ, ಮಾಜಿ ಶಾಸಕರಾದ ಶಾರದಾ ಶೆಟ್ಟಿ, ಮಂಕಾಳು ವೈದ್ಯ, ಸತೀಶ ಸೈಲ್, ಪ್ರಮುಖರಾದ ರಮಾನಂದ ನಾಯಕ, ಎಸ್.ಕೆ.ಭಾಗ್ವತ, ಸಾಯಿ ಗಾಂವಕರ, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ, ಯುವ ಮುಖಂಡ ರವಿಕುಮಾರ ಶೆಟ್ಟಿ, ನಾಗೇಶ ನಾಯ್ಕ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ | ಪರೇಶ್‌ ಮೇಸ್ತಾ ಸಾವು ಪ್ರಕರಣ | ಸಿಬಿಐ ಬಿ ರಿಪೋರ್ಟ್‌ ಒಪ್ಪದ ಕುಟುಂಬ; ಡಿ. 21ಕ್ಕೆ ಆಕ್ಷೇಪಣೆ ಸಲ್ಲಿಕೆಗೆ ಕೋರ್ಟ್‌ ಸೂಚನೆ

Exit mobile version