Site icon Vistara News

Bangalore Kambala : ಬೆಂಗಳೂರು ಕಂಬಳಕ್ಕೆ ವಿವಾದಿತ ಬ್ರಿಜ್‌ಭೂಷಣ್‌ ಸಿಂಗ್‌ಗೆ ಆಹ್ವಾನ; ತೀವ್ರ ಆಕ್ಷೇಪ

Brij Bhushan singh Bangalore kambala

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ (Bangalore Palace ground) ಸೃಷ್ಟಿಸಿರುವ ಕೃತಕ ಕಂಬಳ ಕರೆಯಲ್ಲಿ (Bangalore Kambala) ನವೆಂಬರ್‌ 25 ಮತ್ತು 26ರಂದು ನಡೆಯಲಿರುವ ಐತಿಹಾಸಿಕ ಬೆಂಗಳೂರು ಕಂಬಳಕ್ಕೆ ಕುಸ್ತಿ ಫೆಡರೇಷನ್‌ (Wrestling Federation) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ (Brijbhushan Singh) ಅವರನ್ನು ಆಹ್ವಾನಿಸಿರುವುದು ವಿವಾದಕ್ಕೆ ಕಾರಣವಾಗಿದೆ. ನವೆಂಬರ್ 26ರಂದು ರವಿವಾರ ಮಧ್ಯಾಹ್ನ 1 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬ್ರಿಜ್ ಭೂಷಣ್‌ ಸಿಂಗ್ ಪ್ರಧಾನ ಅತಿಥಿಯಾಗಿದ್ದು, ಸಾಧಕರಿಗೆ ಸನ್ಮಾನ ಮಾಡಲಿದ್ದಾರೆ ಎಂದು ಕಂಬಳ ಸಮಿತಿಯ ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿದೆ.

ಭಾರತೀಯ ಕುಸ್ತಿ ಫೆಡರೇಷನ್ (WFI) ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಮೇಲೆ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದೆ. ಜೂನ್ 15 ರಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್‌ ಕೂಡಾ ಸಲ್ಲಿಸಲಾಗಿದೆ. ಇಂಥ ಒಬ್ಬ ವ್ಯಕ್ತಿಯನ್ನು ಕಂಬಳಕ್ಕೆ ಆಹ್ವಾನಿಸುವ ಅವಶ್ಯಕತೆಯಾದರೂ ಏನು ಎಂದು ಪ್ರಶ್ನಿಸಲಾಗಿದೆ.

ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿರುವ ಕಾಂಗ್ರೆಸ್‌ ಸರ್ಕಾರದ ಅನುದಾನದೊಂದಿಗೆ ನಡೆಯುತ್ತಿರುವ ಕಂಬಳಕ್ಕೆ ಕಳಂಕಿತ ಬಿಜೆಪಿ ಸಂಸದರನ್ನು ಕರೆಯುತ್ತಿರುವುದರ ಔಚಿತ್ಯವನ್ನು ಪ್ರಶ್ನಿಸಲಾಗಿದೆ.

ಬ್ರಿಜ್‌ ಭೂಷಣ್‌ ಸಿಂಗ್‌ ಜತೆ ಚಿತ್ರ ನಟ ದರ್ಶನ್‌, ಮಾಜಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ, ರಾಷ್ಟ್ರೀಯ ಗ್ರಾಹಕ ಸಹಕಾರ ಒಕ್ಕೂಟದ ಅಧ್ಯಕ್ಷ ವಿಶಾಲ್‌ ಸಿಂಗ್ ಅವರು ಕೂಡಾ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ.

‌ಬ್ರಿಜ್‌ಭೂಷಣ್‌ಗೆ ಆಹ್ವಾನ ಯಾಕೆ?

ಇಲ್ಲಿ ಸನ್ಮಾನ ಮಾಡುತ್ತಿರುವುದು ಗೋವಾದಲ್ಲಿ ನಡೆದ ನ್ಯಾಷನಲ್‌ ಗೇಮ್ಸ್‌ನಲ್ಲಿ ಪದಕಗಳನ್ನು ಗೆದ್ದ ಕರ್ನಾಟಕದ ಕುಸ್ತಿಪಟುಗಳನ್ನು. ಕುಸ್ತಿ ಒಕ್ಕೂಟದ ಸಹಕಾರದಿಂದಲೇ ಅವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಮತ್ತು ಪದಕ ಪಡೆಯಲು ಸಾಧ್ಯವಾಯಿತು. ಹೀಗಾಗಿ ಬ್ರಿಜ್‌ ಭೂಷಣ್‌ ಸಿಂಗ್‌ ಅವರಿಂದಲೇ ಗೌರವಿಸಲ್ಪಡಬೇಕು ಎನ್ನುವುದು ಕುಸ್ತಿ ಸ್ಪರ್ಧೆ ವಿಜೇತರ ಆಶಯವಾಗಿತ್ತು. ಹಾಗಾಗಿ ಅವರನ್ನು ಕರೆಸಿದ್ದೇವೆ ಎಂದು ಸಂಘಟಕರು ತಿಳಿಸಿದ್ದಾರೆ.

ಇದನ್ನೂ ಓದಿ : Kambala Sports : ಬೆಂಗಳೂರು ಕಂಬಳಕ್ಕೆ 1 ಕೋಟಿ ರೂ. ಘೋಷಿಸಿದ ಸಿಎಂ; ಬರಲಿದ್ದಾರೆ ಲಕ್ಷ ಲಕ್ಷ ಜನ!

ಎರಡು ದಿನಗಳ ವಿಶೇಷ ಕಂಬಳ

ಕರಾವಳಿಯಲ್ಲಿ ಜನಪ್ರಿಯವಾಗಿರುವ ಕಂಬಳವನ್ನು ಮೊದಲ ಬಾರಿ ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್‌ 25, 26ರಂದು ಕಂಬಳ ನಡೆಯಲಿದೆ. ನವೆಂಬರ್‌ 25ರಂದು ಬೆಳಗ್ಗೆ 10.30ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ ಮತ್ತು ಡಿ.ವಿ. ಸದಾನಂದ ಗೌಡ ಅವರು ಭಾಗವಹಿಸಲಿದ್ದಾರೆ. ಎರಡು ದಿನದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ, ಸ್ಪೀಕರ್‌ ಯು.ಟಿ. ಖಾದರ್‌, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೊದಲಾದವರು ಭಾಗವಹಿಸಲಿದ್ದಾರೆ.

ಈ ನಡುವೆ, ಕಂಬಳಕ್ಕೆ ಕಾಂಗ್ರೆಸ್‌ ಸರ್ಕಾರ ಪೂರ್ಣ ಸಹಕಾರ ನೀಡಿದ್ದರೂ ಆಹ್ವಾನಿತರಲ್ಲಿ ಬಿಜೆಪಿ ನಾಯಕರೇ ಮೇಲುಗೈ ಸಾಧಿಸಿರುವ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.

Exit mobile version