Site icon Vistara News

HD Kumaraswamy: ಕಾಸಿಗಾಗಿ ಹುದ್ದೆಯಲ್ಲಿ 500 ಕೋಟಿ ರೂ. ಕೈ ಬದಲು: ಎಚ್.ಡಿ.ಕುಮಾರಸ್ವಾಮಿ

EX CM HD Kumaraswamy

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸತತ ಎರಡು ತಿಂಗಳಿಂದ ವರ್ಗಾವಣೆ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಈ ಅವಧಿಯಲ್ಲಿ ಕಾಸಿಗಾಗಿ ಹುದ್ದೆ ವ್ಯವಹಾರದಲ್ಲಿ 500 ಕೋಟಿ ರೂ.ಗಳಿಗೂ ಮೀರಿ ಕೈ ಬದಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಗಾವಣೆ ದಂಧೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಬಗ್ಗೆ ನನಗೆ ಮಾಹಿತಿ ಇದೆ. ಆ ಬಗ್ಗೆ ಎಲ್ಲಾ ಕಡೆ ಚರ್ಚೆ ಆಗುತ್ತಿದೆ. ಕರ್ನಾಟಕ ಸಮೃದ್ಧವಾಗಿದೆ. ಜನ ಪ್ರಾಮಾಣಿಕವಾಗಿ ತೆರಿಗೆ ಕಟ್ಟಿ ಖಜಾನೆ ತುಂಬಿಸುತ್ತಿದ್ದಾರೆ. ಎಲ್ಲಾ ಮೇವು ಸಮೃದ್ಧವಾಗಿದೆ. ಹೀಗಾಗಿ ಇಲ್ಲಿ ಪೊಗದಸ್ತಾಗಿ ಮೇಯುತ್ತಿದ್ದಾರೆ. ಆ ಮೇವನ್ನು ಇಡೀ ದೇಶಕ್ಕೆಲ್ಲ ಹಂಚಲು ಹೊರಟಿದ್ದಾರೆ. ಇದೇನಾ ಕರ್ನಾಟಕದ ಮಾದರಿ ಎಂದರೆ? ಇದೇನಾ ಹೊಸ ಭರವಸೆ, ಹೊಸ ಕನಸು? ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈಗ ನಡೆಯುತ್ತಿರುವ ಯೋಜನೆಗಳ ಕಾಮಗಾರಿಗಳ ಒಟ್ಟು ಅಂದಾಜು ವೆಚ್ಚವನ್ನು ಶೇ.20-30ಕ್ಕೆ ಹೆಚ್ಚಳ ಮಾಡಿಕೊಳ್ಳಲಾಗುತ್ತಿದೆ. ಕಮಿಷನ್ ಹೊಡೆಯೋದಕ್ಕೆ ಏನು ಬೇಕೋ ಅದನ್ನು ಮಾಡಿಕೊಳ್ಳುತ್ತಿದ್ದಾರೆ. ಸಚಿವರೊಬ್ಬರು ಒಂದು ಪತ್ರಿಕೆಯ ಕಟಿಂಗ್ ಇಟ್ಟುಕೊಂಡು ಎಲ್ಲೆಲ್ಲಿ ರೇಟ್ ಫಿಕ್ಸ್ ಆಗಿದೆ ಅಂತ ಹೇಳಿದರು. ನಾನು ಆ ಕಟಿಂಗ್ ನಲ್ಲಿರುವ ಸುದ್ದಿ ಯಾವುದು ಎಂದು ಪತ್ತೆ ಹಚ್ಚಿದೆ. ತೀರಾ ನೀಡಿದ ಮೇಲೆ ಅದು 2013ರಿಂದ 2018ರವರೆಗೆ ನಡೆದಿರುವ ವರ್ಗಾವಣೆ ದಂಧೆಗೆ ಸಂಬಂಧಿಸಿದ ಸುದ್ದಿ. “ಮುಖ್ಯ ಎಂಜಿನಿಯರ್ ಹುದ್ದೆಗೆ 30 ಕೋಟಿ ಕಪ್ಪ” ಎನ್ನುವ ಸುದ್ದಿಯ ಕಟಿಂಗ್ ಅದು. ಅದು ರೇವಣ್ಣ ಅವರದ್ದಾಗಲಿ, ನನ್ನ ಕಾಲದ್ದಾಗಲಿ ಆಗಿರಲಿಲ್ಲ ಎಂದು ಟಾಂಗ್ ನೀಡಿದರು.

ಇದನ್ನೂ ಓದಿ | Opposition Meet: ದೇಶದಲ್ಲಿ ತ್ರಿಶಂಕು ರಾಜಕಾರಣ ಖತಮ್; JDSಗೆ ದಮ್‌ ಇದ್ದರೆ ಸಭೆಗೆ ಬರುತ್ತದೆ ಎಂದ ಕಾಂಗ್ರೆಸ್‌‌

ಯಾರಪ್ಪಾ ಈ ಸೂರಿ ಪಾಯಲ್?

ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಹುಲುಸಾಗಿ ಮೇಯಲು ಮೇವು ಇದೆ. ಅದನ್ನು ಮೇಯಲು ಯಾರು ಯಾರನ್ನು ಬಿಟ್ಟಿದ್ದಾರೆ ಎಂಬುವುದು ಇವತ್ತಿನ ಪತ್ರಿಕೆಗಳಲ್ಲಿ ಬಂದಿದೆ. ಪರಿಸರ ಇಲಾಖೆಯಲ್ಲಿ ದಂಧೆ ಶುರುವಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಯಾರೋ ಸೂರಿ ಪಾಯಲ್ ಅಂತೆ. ನಾನು ಇದೇ ಮೊದಲಿಗೆ ಈ ಹೆಸರು ಕೇಳಿದ್ದು. ಅವನ್ಯಾರೋ ಫಾರಿನರ್ ತರ ಇದ್ದಾನೆ ಅಂದುಕೊಂಡಿದ್ದೆ. ಅದೂ ಲೋಕಲ್ ಅನ್ನುವುದು ಆಮೇಲೆ ಗೊತ್ತಾಯಿತು. ಮಾತೆತ್ತಿದರೆ ಸರ್ವಜನಾಂಗದ ಶಾಂತಿಯ ತೋಟ ಎಂದರು. ಆದರೆ, ಅದು ಇವರು ಮೇಯುವ ಸಮೃದ್ಧಿಯ ತೋಟವಾಗಿದೆ. ಎಲ್ಲಿ ನೋಡಿದರೂ ಸ್ವಜನ ಪಕ್ಷಪಾತ, ವರ್ಗಾವಣೆ ದಂಧೆ ಜೋರಾಗಿ ನಡೆದಿದೆ ಎಂದು ನೇರ ಆರೋಪ ಮಾಡಿದರು.

ರಾಜಕೀಯ ನಿವೃತ್ತಿ ಸವಾಲು ಹಾಕಿದ ಎಚ್‌ಡಿಕೆ

ನನ್ನ ವಿಚಾರದಲ್ಲಿ ಒಂದೇ ಒಂದು ವರ್ಗಾವಣೆ ಪ್ರಕರಣ ತೋರಿಸಿ ಸಾಬೀತು ಮಾಡಿದರೆ ಸಕ್ರಿಯ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ. ಅಂತಹ ಮಾತು ಹೇಳುವ ಧೈರ್ಯ ಇವರಿಗೆ ಇದೆಯಾ? ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಹೇಗೆಲ್ಲಾ ಮೇಯುತ್ತಿದ್ದಾರೆ ಎಂಬುವುದು ಎಲ್ಲರಿಗೂ ಚೆನ್ನಾಗಿ ಅರ್ಥವಾಗುತ್ತಿದೆ. ಅಧಿಕಾರಿಯೊಬ್ಬರು ನನ್ನನ್ನು ಭೇಟಿಯಾಗಿದ್ದಾಗ ವರ್ಗಾವಣೆ ದಂಧೆಯ ಬಗ್ಗೆ ಹೇಳಿದರು. ಈವರೆಗೂ ಕಡಿಮೆ ಎಂದರೂ 500 ಕೋಟಿ ರೂಪಾಯಿಗೂ ಹೆಚ್ಚಿನ ವ್ಯವಹಾರ ನಡೆದಿದೆ ಎಂದು ಅವರು ಹೇಳಿದರು. ಸರ್ಕಾರದಿಂದ ವರ್ಗಾವಣೆ ಕಿರುಕುಳಕ್ಕೆ ಒಳಗಾಗಿರುವ ಅಧಿಕಾರಿಗಳು ಸುಳ್ಳು ಹೇಳುತ್ತಾರೆಯೇ? ಇದೆಕ್ಕೆಲ್ಲಾ ಸಾಕ್ಷಿ ಸಂಗ್ರಹ ಮಾಡಲು ಸಾಧ್ಯವೇ? ಈ ರೀತಿ ಆದರೆ ರಾಜ್ಯ ಉಳಿಯುತ್ತಾ? ಎಂದು ಎಚ್‌ಡಿಕೆ ತೀಕ್ಷ್ಣವಾಗಿ ಪ್ರಶ್ನಿಸಿದರು.

ವರ್ಗಾವಣೆ ದಂಧೆಯ ಬಗ್ಗೆ ನಾನೊಬ್ಬನೇ ಹೇಳುತ್ತಿಲ್ಲ. ಎಲ್ಲರೂ ಮಾತನಾಡುತ್ತಿದ್ದಾರೆ. ಅಧಿಕಾರಿಗಳು ಸೇರಿ ಪ್ರತಿಯೊಬ್ಬರೂ ಹಾದಿಬೀದಿಯಲ್ಲಿ ಮಾತನಾಡುತ್ತಿದ್ದಾರೆ ಎಂದ ಎಚ್‌.ಡಿ. ಕುಮಾರಸ್ವಾಮಿ ಅವರು, ವಿಧಾನಸಭೆಯಲ್ಲಿ ಮಾತನಾಡಿದ್ದ ಸಿಎಂ, ವರ್ಗಾವಣೆ ದಂಧೆಯಲ್ಲಿ ನಾನು ತೊಡಗಿಲ್ಲ, ಯಾರಾದರೂ ತೊಡಗಿದ್ದರೆ ನನಗೆ ಗೊತ್ತಿಲ್ಲ. ಗೊತ್ತಿಲ್ಲದೆ ಯಾರಾದರೂ ತೊಡಗಿದ್ದರೆ ಮಾಹಿತಿ ಇಲ್ಲ. ಹೀಗೆ ಮುಖ್ಯಮಂತ್ರಿಗಳು ಮಾತನಾಡಿದರೆ ಅರ್ಥವೇನು? ಎಂದು ಕಿಡಿಕಾರಿದರು.

ಇದಾದ ಮೇಲೆ ರೇಟ್ ಕಾರ್ಡ್ ರಿಲೀಸ್ ಆಯಿತು. ಎಕ್ಸ್‌ಎಲ್‌ ಶೀಟ್‌ನಲ್ಲಿ ಇವರ ಭ್ರಷ್ಟಾಚಾರದ ವಿಶ್ವರೂಪ ಬಯಲಾಯಿತು. ಇವರ ಹಣೆಬರಹ ಏನೆಂದು ಇಡೀ ಜಗತ್ತಿಗೆ ಗೊತ್ತಾಯಿತು. ನನ್ನ ಕಾಲದಲ್ಲಿ ಏನೂ ಇಲ್ಲ. 2008 ರಿಂದ 2013ರ ಅವಧಿಯಲ್ಲಿ ಮಾಗಡಿ ವಿಧಾನಸಭೆಯಲ್ಲಿ ನಡೆದ ರಸ್ತೆ ಕಾಮಗಾರಿ ಹೇಳಲಿ ನೋಡೋಣ. ಇದು ಸಿದ್ದರಾಮಯ್ಯ, ಮಹದೇವಪ್ಪ ಅವರ ಕಾಲದ್ದು ಎಂದು ಕುಮಾರಸ್ವಾಮಿ ಅವರು ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಕಥೆ ಬಿಚ್ಚಿಟ್ಟ ಮಾಜಿ ಸಿಎಂ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅರುಣ್ ಕುಮಾರ್ ಎಂಬ ಅಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಅವರನ್ನು ಅಕ್ರಮವಾಗಿ ತೆಗೆದು ರಾಜಶೇಖರ್ ಎನ್ನುವ ಅಧಿಕಾರಿಯನ್ನು ನೇಮಕ ಮಾಡಿತ್ತು ಈ ಸರ್ಕಾರ. ಅಲ್ಲಿ ವ್ಯವಹಾರ ನಡೆದಿದೆ ಎಂದು ಯಾರೋ ನ್ಯಾಯಾಲಯಕ್ಕೆ ಹೋದರು. ಕೋರ್ಟ್ ಛೀಮಾರಿ ಹಾಕಿದ ಮೇಲೆ ಮತ್ತೆ ರಾಜಶೇಖರ್ ಅವರನ್ನೇ ಮರು ನೇಮಕ ಮಾಡಲಾಯಿತು. ಇದು ಈ ಸರ್ಕಾರದ ದಂಧೆಯ ಒಂದು ಸ್ಯಾಂಪಲ್ ಅಷ್ಟೇ ಎಂದು ಹೇಳಿದರು.

ಇದನ್ನೂ ಓದಿ | Co-op Bank Fraud: ಗುರು ರಾಘವೇಂದ್ರ ಬ್ಯಾಂಕ್‌ ಅವ್ಯವಹಾರ ತನಿಖೆಗೆ ಭಾಷೆ ಸಮಸ್ಯೆ?: ದಾಖಲೆ ಭಾಷಾಂತರ ಅಸಾಧ್ಯ ಎಂದ ಇಲಾಖೆ

ಈ ಹಿಂದೆ 1,500 ಕೋಟಿ ರೂಪಾಯಿ ಹಗರಣ ನಡೆದಿತ್ತು. ಕಮಿಷನ್ ಪಡೆದು ವರ್ಕ್ ಆರ್ಡರ್ ಕೊಟ್ಟ ಕಥೆ ಗೊತ್ತಿದೆ. ಸಂಬಂಧಪಟ್ಟ ಇಲಾಖೆಯ ಅನುಮತಿ ಇಲ್ಲದೆ 1,500 ಕೋಟಿ ರೂಪಾಯಿ ವರ್ಕ್ ಆರ್ಡರ್ ನೀಡಿದರು. ಆಗ ಎಚ್.ಸಿ.ಮಹದೇವಪ್ಪ ಅವರು ಆ ಇಲಾಖೆಯ ಮಂತ್ರಿ ಆಗಿದ್ದರು. ಉಳಿದದ್ದು ಎಲ್ಲರಿಗೂ ತಿಳಿದಿದೆ. ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

Exit mobile version