Site icon Vistara News

Crime News : ಅಂಗನವಾಡಿ ‌ಸಹಾಯಕಿಯ ಮೂಗು ಕತ್ತರಿಸಿದ ರಾಕ್ಷಸ; ಹೆಬ್ಬಾಳ್ಕರ್‌ ಕ್ಷೇತ್ರದಲ್ಲಿ ಕೃತ್ಯ

Anganawadi Assistant attacked

ಬೆಳಗಾವಿ: ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ‌ಹೆಬ್ಬಾಳ್ಕರ್ (Lakshhmi Hebbalkar) ಕ್ಷೇತ್ರದಲ್ಲಿ ಅತ್ಯಂತ ಅಮಾನವೀಯ ರಾಕ್ಷಸಿ ಕೃತ್ಯವೊಂದು ನಡೆದಿದೆ. ಧೂರ್ತನೊಬ್ಬ ಅಂಗನವಾಡಿ ಸಹಾಯಕಿಯ (Anganavadi assistant) ಮೂಗನ್ನೇ ಕತ್ತರಿಸಿ ಕ್ರೌರ್ಯ ಮೆರೆದಿದ್ದಾನೆ. ಪುಟ್ಟ ಮಕ್ಕಳು ಹೂವು ಕಿತ್ತರೆಂಬ ಕಾರಣವನ್ನೇ ಮುಂದಿಟ್ಟು ಸಹಾಯಕಿಯ ಮೂಗನ್ನೇ (Nose cut) ಆತ ಕತ್ತರಿಸಿದ್ದಾನೆ (Crime News).

ಬೆಳಗಾವಿ ತಾಲೂಕಿನ (Belagavi News) ‌ಬಸುರ್ತೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಅಂಗನವಾಡಿ ಸಹಾಯಕಿ ಸುಗಂಧಾ ಮೋರೆ (50) ಅವರೇ ದೌರ್ಜನ್ಯಕ್ಕೆ ಒಳಗಾದವರು. ಅಂಗನವಾಡಿ ಪಕ್ಕದ ಮನೆಯ ಕಲ್ಯಾಣಿ ಮೋರೆ ಎಂಬಾತನೇ ಹಲ್ಲೆ ಮಾಡಿದ ದುಷ್ಕರ್ಮಿ.

ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಈ ಊರಿನ ಅಂಗನವಾಡಿಯ ಪಕ್ಕದಲ್ಲಿ ಕಲ್ಯಾಣಿ ಮೋರೆ ಎಂಬಾತನ ಮನೆ ಇದೆ. ಕೆಲವು ದಿನಗಳ ಹಿಂದೆ ಆತನ ಮನೆಯ ಆವರಣದ ಗಿಡದಿಂದ ಪುಟಾಣಿ ಮಕ್ಕಳು ಹೂವು ಕಿತ್ತರೆಂದು ಹೇಳಲಾಗಿದೆ. ಪುಟ್ಟ ಮಕ್ಕಳು ಏನೋ ತಪ್ಪು ಮಾಡಿದ್ದಾರೆ ಎಂಬುದನ್ನೂ ಅರ್ಥ ಮಾಡಿಕೊಳ್ಳದ ಅಸಾಮಿ ಅದೇ ವಿಷಯವನ್ನು ಇಟ್ಟುಕೊಂಡು ಅಂಗನವಾಡಿಗೆ ಬಂದು ಗಲಾಟೆ ಮಾಡಿದ್ದಾನೆ.

ಮಕ್ಕಳನ್ನು ನಿಂದಿಸುವ ಜತೆಗೆ ಸಹಾಯಕಿಯಾಗಿರುವ ಸುಗಂಧಾ ಮೋರೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ. ನಿನಗೆ ಮಕ್ಕಳನ್ನು ನೋಡಿಕೊಳ್ಳಲು ಆಗುವುದಿಲ್ಲವೇ ಎಂದು ಕೇಳಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಆತ ಪಿತ್ತವನ್ನು ಇನ್ನಷ್ಟು ನೆತ್ತಿಗೇರಿಸಿಕೊಂಡ ಮನೆ ಮಾಲೀಕ ಕಲ್ಯಾಣಿ ಮೋರೆ, ಹರಿತವಾದ ಆಯುಧವೊಂದನ್ನು ತಂದು ಆಕೆಯ ಮುಖವನ್ನೇ ಕತ್ತರಿಸಿದ್ದಾನೆ. ಆತನ ಹೊಡೆತಕ್ಕೆ ಸುಗಂಧಾ ಅವರ ಮೂಗೇ ಕತ್ತರಿಸಿ ಹೋಗಿದೆ.

ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಸುಗಂಧಾ ಮೋರೆ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂರು ದಿನಗಳ ಹಿಂದೆ ಘಟನೆ ನಡೆದಿದೆ. ಕಳೆದ ಮೂರು ದಿನದ ಹಿಂದೆ ಅವರು ನಮ್ಮಲ್ಲಿ ಅಡ್ಮಿಟ್‌ ಆಗಿದ್ದಾರೆ. ಅವರಿಗೆ ಈಗಾಗಲೇ ಒಂದು ಸರ್ಜರಿ ನಡೆದಿದೆ. ಅವರ ಪರಿಸ್ಥಿತಿ ಸ್ಥಿರವಾಗಿದೆ. ಮುಂದಿನ ಪರಿಸ್ಥಿತಿ ನೋಡಿಕೊಂಡು ಸರ್ಜರಿ ಮಾಡಬೇಕೇ ಎನ್ನುವುದು ನಿರ್ಧಾರ ಆಗಲಿದೆ ಎಂದು ಸುಗಂಧಾ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯೆ ಡಾ. ಸಿಂಧೂ ಹೇಳಿದ್ದಾರೆ. ಪೊಲೀಸರು ಕಿರಣ್‌ ಮೋರೆ ಅವರನ್ನು ಬಂಧಿಸಿದ್ದಾರೆ.

Exit mobile version