Site icon Vistara News

Crocodile Found | ಮೈಸೂರಲ್ಲಿ ಅರಣ್ಯ ಸಿಬ್ಬಂದಿ ಕೈಯಿಂದ ಜಸ್ಟ್‌ ಮಿಸ್‌ ಆದ ಮೊಸಳೆ, ಬೆಳಗಾವಿಯಲ್ಲಿ ಯುವಕರ ಕೈಲಿ ಲಾಕ್‌

Crocodile Found

ಮೈಸೂರು/ಬೆಳಗಾವಿ: ಅರಮನೆ ನಗರಿ ಮೈಸೂರಿನಲ್ಲಿ ಸತತ ಮಳೆಯಿಂದಾಗಿ ಇಲ್ಲಿನ ಎಲೆತೋಟ ಏರಿಯಾದ ರಾಜಕಾಲುವೆಯಲ್ಲಿ ಮೊಸಳೆಯೊಂದು ಕಾಣಿಸಿಕೊಂಡು ಸ್ಥಳೀಯರ ಆತಂಕ ಹೆಚ್ಚಿಸಿತ್ತು. ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಹಾಗೂ ಚಾಮರಾಜೇಂದ್ರ ಮೃಗಾಲಯದ ಸಿಬ್ಬಂದಿ ಮೊಸಳೆ ಸೆರೆ (Crocodile Found) ಹಿಡಿಯಲು ಮುಂದಾದರು.

ಸತತ ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆಯಲ್ಲಿ ಒಮ್ಮೆ ಹಗ್ಗದ ಕುಣಿಕೆಗೆ ಸಿಲುಕಿದ್ದ ಮೊಸಳೆ, ಇನ್ನೇನು ಸೆರೆ ಸಿಕ್ಕಿತು ಎನ್ನುವಷ್ಟರಲ್ಲೇ ಪ್ರತಿರೋಧವೊಡ್ಡಿ ಕುಣಿಕೆಯಿಂದ ಹೊರಬಂದು ತಪ್ಪಿಸಿಕೊಂಡಿದೆ. ಕತ್ತಲು ಆವರಿಸಿದ್ದರಿಂದ ಸಿಬ್ಬಂದಿ ಕಾರ್ಯಾಚರಣೆ ಸ್ಥಗಿತಗೊಳಿಸಿದರು.

ಬೆಳಗಾವಿಯಲ್ಲಿ ನಾಯಿಯನ್ನು ಬೇಟೆಯಾಡಿದ ಮೊಸಳೆ

ಮೈಸೂರಿನಲ್ಲಿ ತಪ್ಪಿಸಿಕೊಂಡ ಮೊಸಳೆ ಕತೆ ಇದಾದರೆ ಬೆಳಗಾವಿಯಲ್ಲಿ ರೈತರೊಬ್ಬರ ಜಮೀನಿನಲ್ಲಿ ಪ್ರತ್ಯಕ್ಷವಾಗಿದ್ದ ಮೊಸಳೆಯನ್ನು ಯುವಕರು ಹಿಡಿದು ಹಗ್ಗದಿಂದ ಕಟ್ಟಿ ಹಾಕಿರುವ ಘಟನೆ ನಡೆದಿದೆ. ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಸೂರ ಗ್ರಾಮದಲ್ಲಿ ಮೊಸಳೆ ಪತ್ತೆಯಾಗಿತ್ತು. ಕಾರ್ಯಾಚರಣೆಗಿಳಿದ ಗ್ರಾಮದ ಯುವಕರು ಮೊಸಳೆಯನ್ನು ಹಿಡಿದು ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದರು. ಆದರೆ ಆರು ಗಂಟೆ ಕಳೆದರೂ ಸ್ಥಳಕ್ಕೆ ಭೇಟಿ ನೀಡದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಅಸಮಾಧಾನ ಹೊರಹಾಕಿದರು.

ಮಳೆಯ ಆರ್ಭಟಕ್ಕೆ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಬೈಲಹೊಂಗಲ ತಾಲೂಕಿನಲ್ಲಿ ಹೊಸೂರು ಸೇತುವೆ ಮುಳುಗಡೆ ಆಗಿತ್ತು. ಸೇತುವೆ ಮೇಲಿದ್ದ ನೀರು ಕಡಿಮೆ ಆದ ತಕ್ಷಣವೇ ಜಮೀನಿನಲ್ಲಿ ಮೊಸಳೆ ಉಳಿದುಕೊಂಡಿದೆ. ಹೊಲದಲ್ಲಿ ಕಟ್ಟಿದ್ದ ನಾಯಿಯನ್ನು ಬೇಟೆಯಾಡಲು ಮುಂದಾಗಿದ್ದು, ಈ ವೇಳೆ ನಾಯಿ ಬೊಗಳಲು ಶುರು ಮಾಡಿದೆ. ರೈತ ಹೋಗಿ ನೋಡುವಷ್ಟರಲ್ಲಿ ನಾಯಿ ಮೊಸಳೆಗೆ ಆಹಾರವಾಗಿತ್ತು. ಕೂಡಲೇ ರೈತ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗ್ರಾಮದ ಯುವಕರು, ಕಬ್ಬು ಗದ್ದೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಜನರನ್ನು ಕಂಡು ಗಲಿಬಿಲಿಗೊಂಡ ಮೊಸಳೆ ಕಬ್ಬು ಗದ್ದೆಗೆ ನುಗ್ಗಲು ಯತ್ನಿಸಿದ್ದು, ಈ ವೇಳೆ ಯುವಕರು ಹಗ್ಗದಿಂದ ಮೊಸಳೆಯನ್ನು ಕಟ್ಟಿಹಾಕಿದ್ದಾರೆ.

ಇದನ್ನೂ ಓದಿ | ಮೊಸಳೆ ಜಂಪ್​ ಮಾಡಿ, ಓಡೋದನ್ನು ಎಂದಾದರೂ ನೋಡಿದ್ದೀರಾ? ಅಚ್ಚರಿ ಹುಟ್ಟಿಸುವ ವಿಡಿಯೋ ಇಲ್ಲಿದೆ !

Exit mobile version