Site icon Vistara News

DK Shivakumar : ಕಂಬಳದಲ್ಲಿ ಡಿಕೆಶಿ ದರ್ಬಾರ್‌, ಜೋಡಿ ಕೋಣಗಳ ಮೈದಡವಿದ ನಾಯಕ

DK Shivakumar Kambala Mangalore

ಮಂಗಳೂರು: ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಶನಿವಾರ ಮಂಗಳೂರಿನ (Mangalore News) ವಾಮಂಜೂರಿನಲ್ಲಿ ನಡೆದ ಕಂಬಳದಲ್ಲಿ (Kambala Sports) ಭಾಗವಹಿಸಿದರು. ಜೋಡಿ ಕೋಣಗಳ ಮೈದಡವಿದರು.

ವಾವಂಜೂರಿನ ತಿರುವೈಲುಗುತ್ತು ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ 12ನೇ ವರ್ಷದ ತಿರುವೈಲೋತ್ಸವ ಹಾಗೂ ಜೋಡುಕರೆ ಕಂಬಳ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

ಕಂಬಳ ಅನ್ನೋದು ಕೇವಲ ಕ್ರೀಡೆಯಾಗಿ ಮಾತ್ರ ಇರದೇ, ತುಳುನಾಡಿನ ಕೃಷಿ ಬದುಕು ಮತ್ತು ಐತಿಹಾಸಿಕ ಪರಂಪರೆಯ ಹಿನ್ನೆಲೆಯನ್ನು ಹೊಂದಿದೆ. ಸರ್ವ ಜನಾಂಗದ ಶಾಂತಿಯ ತೋಟದಂತಿರುವ ತುಳುನಾಡು ಕರ್ನಾಟಕದ ಹೆಗ್ಗಳಿಕೆ ಎಂದು ಕಂಬಳದಲ್ಲಿ ಭಾಗವಹಿಸಿದ ವೇಳೆ ಅವರು ಹೇಳಿದರು.

ಕಂಬಳದಲ್ಲಿ ಭಾಗವಹಿಸಿದ ಡಿ.ಕೆ. ಶಿವಕುಮಾರ್‌ ಅವರಿಗೆ ಬೆತ್ತ ನೋಡಿ ಗೌರವಿಸಲಾಯಿತು.

ನಮ್ಮ ಸಂಸ್ಕೃತಿ ನಮ್ಮ ಆಸ್ತಿ. ಕಂಬಳವೂ ನಮ್ಮ ಸಂಸ್ಕೃತಿಯ ಭಾಗ. ಅದನ್ನು ಕಾಪಾಡಿಕೊಂಡು ಬಂದಿರುವ ನಿಮಗೆ ಈಶ್ವರ ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಕಂಬಳ ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭ ಕೋರುತ್ತಾ, ನಮ್ಮ ಸರ್ಕಾರ ಕಂಬಳಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು ಬದ್ಧವಾಗಿದೆ ಎಂದು ತಿಳಿಸಿದರು.

ಈ ವರ್ಷ ನಾನು ಉಪಮುಖ್ಯಮಂತ್ರಿಯಾಗಿ ಬೆಂಗಳೂರಿನ ಜವಾಬ್ದಾರಿಯನ್ನು ವಹಿಸಿಕೊಂಡ ಬಳಿಕ ಬೆಂಗಳೂರಿನಲ್ಲೂ ಕಂಬಳವನ್ನು ಆಯೋಜನೆ ಮಾಡಲಾಯಿತು. ಪ್ರತಿ ವರ್ಷವೂ ಬೆಂಗಳೂರಿನಲ್ಲಿ ಕಂಬಳ ನಡೆಯಬೇಕು. ನಮ್ಮ ಪ್ರೋತ್ಸಾಹ ಸದಾ ಇರುತ್ತದೆ. ಕಂಬಳ ಕ್ರೀಡೆ ದೇಶದ ಹಿರಿಮೆ. ಇದು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು. ಇದಕ್ಕೆ ಬೇಕಾದ ಎಲ್ಲ ಪ್ರೋತ್ಸಾಹವನ್ನು ನೀಡಲು ನಾನು ಬದ್ಧ ಎಂದು ಡಿ.ಕೆ. ಶಿವಕುಮಾರ್‌ ಘೋಷಿಸಿದರು. ಕಂಬಳ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಳುಗಳಿಗೂ ಅವರು ಶುಭ ಕೋರಿದರು.

ಕಂಬಳದಲ್ಲಿ ಭಾಗವಹಿಸಿದ ಅವರನ್ನು ತಿರುವೈಲು ಗುತ್ತು ನವೀನ್‌ಚಂದ್ರ ಆಳ್ವ ಅವರು ಸ್ವಾಗತಿಸಿದರು. ಕಾಂಗ್ರೆಸ್‌ ನಾಯಕ ಮಿಥುನ್‌ ರೈ ಸೇರಿದಂತೆ ಹಲವು ನಾಯಕರು ಜತೆಗಿದ್ದರು.

ಬೆಂಗಳೂರಿನಲ್ಲಿ ನಡೆದ ಕಂಬಳದ ಕರೆ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ನಿರ್ವಹಿಸಿದ್ದ ಡಿ.ಕೆ. ಶಿವಕುಮಾರ್‌ ಅವರು ಎಲ್ಲ ರೀತಿಯ ಸಹಕಾರವನ್ನು ನೀಡಿದ್ದಾರೆ.‌

ಇದನ್ನೂ ಓದಿ : DK Shivakumar : ನಮ್ಮ ಸುದ್ದಿಗೆ ಬಂದವರ ಸೆಟ್ಲ್‌ ಮೆಂಟ್‌ ಮಾಡಿದ್ದೇವೆ, ಈಶ್ವರಪ್ಪಗೆ ಡಿಕೆಶಿ ಎಚ್ಚರಿಕೆ

ಕಾಂಗ್ರೆಸ್‌ ಸಮಾವೇಶದಲ್ಲಿ ಭಾಗಿಯಾದ ಡಿ.ಕೆ. ಶಿವಕುಮಾರ್‌

ಡಿ.ಕೆ. ಶಿವಕುಮಾರ್‌ ಅವರು ಮಂಗಳೂರಿಗೆ ಪ್ರಮುಖವಾಗಿ ಬಂದಿದ್ದು ಇಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲು. ಅಡ್ಯಾರ್‌ ಗಾರ್ಡನ್ಸ್‌ನಲ್ಲಿ ನಡೆದ ಸಮಾವೇಶ ಇದಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮಾತನಾಡಿದ ಅವರು ಕಲೆ ಮತ್ತು ಸಂಸ್ಕೃತಿಯ ನೆಲೆವೀಡಾಗಿರುವ ಕರಾವಳಿ ಭಯಮುಕ್ತವಾಗಿ ಬೆಳೆಯಬೇಕು ಎಂದು ಹೇಳಿದರು.

Exit mobile version