ಚಿತ್ರದುರ್ಗ: ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಮೇಲೆ ಹಲ್ಲೆ ನಡೆಸಲು ದಲಿತ ಮುಖಂಡರು ಯತ್ನಿಸಿರುವ ಘಟನೆ ಜಿಲ್ಲೆಯ (Chitradurga News) ಹೊಳಲ್ಕೆರೆಯಲ್ಲಿ ಭಾನುವಾರ ನಡೆದಿದೆ. ಇಬ್ಬರು ಬಿಜೆಪಿ ನಾಯಕರ ಒತ್ತಡಕ್ಕೆ ಸಿಲುಕಿ ಎಸ್ಸಿ ಒಳ ಮೀಸಲಾತಿ ಜಾರಿ ಮಾಡಲಾಗಿತ್ತು ಎಂಬ ಹೇಳಿಕೆ ನೀಡಿದ್ದರಿಂದ ದಲಿತ ಮುಖಂಡರು, ಶಾಸಕ ಚಂದ್ರಪ್ಪ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ.
ಬಿಜೆಪಿ ಸೋಲಲು ಮಾಜಿ ಸಚಿವ ಗೋವಿಂದ ಕಾರಜೋಳ, ಸಂಸದ ಎ. ನಾರಾಯಣಸ್ವಾಮಿ ನೇರ ಕಾರಣ. ಚುನಾವಣೆ ಇರುವಾಗ ಒಳ ಮೀಸಲಾತಿ ಘೋಷಣೆ ಮಾಡಿದರು. ಈ ಇಬ್ಬರು ನಾಯಕರ ಒತ್ತಡಕ್ಕೆ ಬಿಜೆಪಿ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಿತ್ತು. ಇದರಿಂದಲೇ ಬಿಜೆಪಿ ಸೋತಿದೆ. ಇಬ್ಬರ ಆಟಕ್ಕೆ ಬಿಜೆಪಿ ಸೋಲು ಅನುಭವಿಸಿತು ಎಂಬ ಹೇಳಿಕೆ ನೀಡಿದ್ದಕ್ಕೆ ಶಾಸಕ ಚಂದ್ರಪ್ಪ ವಿರುದ್ಧ ದಲಿತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
ಹೊಳಲ್ಕೆರೆ ಪ್ರವಾಸಿ ಮಂದಿರದ ಬಳಿ ಶಾಸಕರಿಗೆ ದಲಿತ ಮುಖಂಡರು ಮುತ್ತಿಗೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಈ ವೇಲೆ ಶಾಸಕ ಚಂದ್ರಪ್ಪ ಹಾಗೂ ದಲಿತ ಮುಖಂಡರ ನಡುವೆ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ತಲುಪಿದೆ.
ಇದನ್ನೂ ಓದಿ | ಚಿಕ್ಕಮಗಳೂರಲ್ಲಿ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಮಾರಾಮಾರಿ ಜಗಳ; ಕಾರ್ಯಕ್ರಮದ ಬಳಿಕ ಕೊಲೆ
ನಮ್ಮ ಸಮುದಾಯದ ನಾಯಕರ ಬಗ್ಗೆ ನೀವು ಹೇಗೆ ಮಾತನಾಡುತ್ತೀರಿ? ಅವರ ಬಗ್ಗೆ ಮಾತನಾಡಲು ನೀವು ಯಾರು ಎಂದು ಮುಖಂಡರು ತರಾಟೆಗೆ ತೆಗೆದೊಕೊಂಡಿದ್ದಾರೆ. ಈ ವೇಳೆ ನಮ್ಮ ಪಕ್ಷದ ನಾಯಕರ ಬಗ್ಗೆ ನಾನು ಮಾತಾಡುತ್ತೇನೆ ಎಂದು ಶಾಸಕ ಹೇಳಿದ್ದರಿಂದ ಆಕ್ರೋಶಗೊಂಡು ಕೈ ಮಾಡಲು ಮುಖಂಡರು ಮುಂದಾಗಿದ್ದಾರೆ. ಪೊಲೀಸರು ಧಾವಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿ ಶಾಸಕರನ್ನು ಕರೆದುಕೊಂಡು ಹೋದರು.