Site icon Vistara News

Attempt to murder: ಕುಡಿತಕ್ಕೆ ಕೊಡಲಿಲ್ಲ ಹಣ; ಪತ್ನಿ ತಲೆಗೆ ಕಲ್ಲು ಎತ್ತಿಹಾಕಿ ಕೋಮಾಗೆ ಕಳಿಸಿದ ಕುಡುಕ ಪತಿ

Man assaults wife for not giving Money for alcohol

ದಾವಣಗೆರೆ: ಮದ್ಯಪಾನಕ್ಕೆ ಹಣ ನೀಡಿಲ್ಲವೆಂದು ಪತ್ನಿ ಮೇಲೆ ಕುಡುಕ ಪತಿ ಮಾರಣಾಂತಿಕ ಹಲ್ಲೆ (Attempt to murder) ನಡೆಸಿದ್ದಾನೆ. ದಾವಣಗೆರೆಯ ಚನ್ನಗಿರಿ ತಾಲೂಕಿನ ಗುಡ್ಡದ ಕೊಮರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಕದರಪ್ಪ (60) ಎಂಬಾತ ಪತ್ನಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಸಾಕಮ್ಮ (55) ಹಲ್ಲೆಗೊಳಗಾದ ದುರ್ದೈವಿ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಇದ್ದಲ ನಾಗೇನಹಳ್ಳಿ ಗ್ರಾಮದ ಕದರಪ್ಪ ಮತ್ತು ಸಾಕಮ್ಮ ದಂಪತಿ, ಕುರಿ ಮೇಯಿಸುತ್ತ ಗುಡ್ಡದ ಕೊಮರನಹಳ್ಳಿಗೆ ಬಂದಿದ್ದಾರೆ. ಈ ವೇಳೆ ಕುಡಿತಕ್ಕಾಗಿ ಹಣ ನೀಡುವಂತೆ ಪತ್ನಿಗೆ ಕದರಪ್ಪ ಪೀಡಿಸಿದ್ದಾನೆ. ಸಾಕಮ್ಮ ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕಲ್ಲು ಎತ್ತಿಹಾಕಿ ಹಲ್ಲೆ ನಡೆಸಿದ್ದಾನೆ.

ತೀವ್ರಗಾಯಗೊಂಡು ನರಳಾಡುತ್ತಿದ್ದ ಸಾಕಮ್ಮನನ್ನು ಅಲ್ಲಿದ್ದ ಸಹ ಕುರಿಗಾಯಿಗಳು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಾರಣಾಂತಿಕ ಹಲ್ಲೆಯಿಂದಾಗಿ ಸಾಕಮ್ಮ ಕೋಮಾಗೆ ಹೋಗಿದ್ದಾಳೆ. ಸದ್ಯ ದಾವಣಗೆರೆ ಎಸ್‌ಎಸ್ ಹೈಟೆಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಕುಡುಕ ಕದರಪ್ಪ ಘಟನೆ ಬಳಿಕ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಬಸವಾಪಟ್ಟಣ ಠಾಣೆ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Murder case : ಸೈಟ್‌ ವಿಷ್ಯಕ್ಕೆ ಕಿತ್ತಾಟ, ಕೊಲೆಯಲ್ಲಿ ಅಂತ್ಯ; ಬರ್ತ್‌ಡೇ ಪಾರ್ಟಿಯಲ್ಲಿ ಹೆಣವಾದ ಯುವಕ

Family Missing : ಸಾಲಗಾರರ ಕಾಟಕ್ಕೆ ಹೆದರಿ ಇಡೀ ಕುಟುಂಬವೇ ನಾಪತ್ತೆ; ಎಲ್ಲಿದ್ದಾರೆ ಐವರು?‌

ಮೈಸೂರು: ಸಾಲಗಾರರ ಕಾಟಕ್ಕೆ (Loan Lenders torture) ಹೆದರಿ ಕುಟುಂಬವೊಂದು ನಾಪತ್ತೆಯಾಗಿದೆ. (Family Missing) ಮೈಸೂರಿನ ಕೆ.ಜಿ.ಕೊಪ್ಪಲು ಬಡಾವಣೆಯ (Mysore News) ನಿವಾಸಿಗಳಾದ ಐವರು ಕಳೆದ ಎಂಟು ದಿನಗಳಿಂದ ನಾಪತ್ತೆಯಾಗಿದ್ದು, ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಇದರ ಜತೆಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ನೇಹಿತರೊಬ್ಬರ ಮೊಬೈಲ್​ಗೆ ವಾಟ್ಸಾಪ್ ಮೆಸೇಜ್ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ.

Family Missing : ಏನಿದು ನಾಪತ್ತೆ ಪ್ರಕರಣದ ಹಿನ್ನೆಲೆ

ಮಹೇಶ್(35), ಪತ್ನಿ ಭವಾನಿ(28), ಪುತ್ರಿ ಪ್ರೇಕ್ಷಾ(3), ಮಹೇಶ್​​ ತಂದೆ ಮಹದೇವಪ್ಪ(65), ತಾಯಿ ಸುಮಿತ್ರಾ(55) ನಾಪತ್ತೆಯಾದವರು. ಮಹೇಶ್‌ ಅವರು ಮಾರ್ಕೆಟಿಂಗ್ ಬಿಸಿನೆಸ್ ನಡೆಸುತ್ತಿದ್ದರು. ಇವರ ಈ ವ್ಯವಹಾರಕ್ಕೆ ಮಹೇಶ್​ ಎಂಬವರು ಸಾಥ್‌ ನೀಡಿದ್ದರು.

ಈ ನಡುವೆ, ಮಹೇಶ್‌ನ ಪರಿಚಯ ಹೇಳಿಕೊಂಡು ವೀರೇಶ್ ಯಾರಿಂದಲೋ 30ರಿಂದ 35 ಲಕ್ಷ ರೂ. ಸಾಲ ಪಡೆದು ಪರಾರಿಯಾಗಿದ್ದರು. ವೀರೇಶ್‌ ಪರಾರಿಯಾಗುತ್ತಿದ್ದಂತೆಯೇ ಸಾಲಗಾರರು ಮಹೇಶ್‌ನನ್ನು ಹಿಡಿದುಕೊಂಡಿದ್ದಾರೆ. ನೀನೇ ಸಾಲ ಮರುಪಾವತಿ ಮಾಡಬೇಕು ಎಂದು ಒತ್ತಡ ಹೇರಿದ್ದಾರೆ. ಪ್ರತಿ ದಿನವೂ ಕಾಟ ಕೊಡಲು ಶುರು ಮಾಡಿದ್ದರು. ನಾನು ಸಾಲ ತೆಗೆದುಕೊಂಡಿಲ್ಲ. ಯಾರಿಗೆ ಸಾಲ ಕೊಟ್ಟಿದ್ದೀರೋ ಅವರನ್ನೇ ಕೇಳಿ ಎಂದು ಎಷ್ಟು ಹೇಳಿದರೂ ಕೇಳದೆ ಅವರನ್ನೇ ಕಾಡುವುದನ್ನು ಮುಂದುವರಿಸಿದ್ದರು. ಹೀಗಾಗಿ ಮಹೇಶ್‌ ಆತಂಕಕ್ಕೆ ಒಳಗಾಗಿದೆ ಎನ್ನಲಾಗಿದೆ.

ಸಾಲಗಾರರ ನಿರಂತರ ಒತ್ತಡಕ್ಕೆ ಹೆದರಿದ ಮಹೇಶ್ ಅವರು ತಮ್ಮ ಪತ್ನಿ ಭವಾನಿ, ಪುತ್ರಿ ಪ್ರೇಕ್ಷಾ ಜತೆಗೆ ನಾಪತ್ತೆಯಾಗಿದೆ. ಸಾಲಗಾರರು ತಮ್ಮ ಹೆತ್ತವರಿಗೆ ತೊಂದರೆ ಕೊಡಬಹುದು ಎಂಬ ಭಯದಿಂದ ತಂದೆ ಮಹದೇವಪ್ಪ ಮತ್ತು ತಾಯಿ ಸುಮಿತ್ತಾ ಅವರನ್ನು ಕೂಡಾ ಕರೆದುಕೊಂಡು ಹೋಗಿದ್ದಾರೆ.

ಹಾಗಂತ ವೀರೇಶ್‌ಗೆ ಸಾಲ ಕೊಡಿಸುವುದರಲ್ಲಿ ಮಹೇಶ್‌ ಪಾತ್ರ ಇಲ್ಲವೇ ಇಲ್ಲ ಎಂದಲ್ಲ. ಮಹೇಶ್‌ ಮಧ್ಯಸ್ಥಿಕೆ ವಹಿಸಿಯೇ ವೀರೇಶ್‌ಗೆ ಸಾಲ ಕೊಡಿಸಿದ್ದರು. ಆದರೆ, ವೀರೇಶ್‌ ವಂಚನೆ ಮಾಡಿದ್ದರಿಂದ ಮಹೇಶ್‌ ಗೂ ತೊಂದರೆಯಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : Attempt To Murder : ಸಾಲ ವಾಪಸ್‌ ಕೊಡುವುದಾಗಿ ಹೇಳಿ ಕಾರು ಚಾಲಕನ ತಲೆ ಸೀಳಿದ ಸ್ನೇಹಿತರು

ಮಧ್ಯಸ್ಥಿಕೆ ವಹಿಸಿ ವೀರೇಶ್‌ಗೆ ಸಾಲ ಕೊಡಿಸಿದ್ದೆ. ಸಾಲಗಾರರು ನನಗೆ ತೊಂದರೆ ಕೊಡುತ್ತಿದ್ದಾರೆ. ಸಾಲಗಾರರು ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ಅವರನ್ನು ಎದುರಿಸಿ ಬದುಕುವುದು ನಮ್ಮಿಂದ ಸಾಧ್ಯವಿಲ್ಲ ಎಂಬ ವಾತಾವರಣ ಇದೆ. ಹೀಗಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ನಾವು ಕೆರೆ ಅಥವಾ ಬಾವಿಗೆ ಬೀಳುತ್ತೇವೆ ಎಂದು ಗೆಳೆಯರೊಬ್ಬರಿಗೆ ಮಾಡಿದ ವಾಟ್ಸ್‌ ಆಪ್‌ ಮೆಸೇಜ್‌ನಲ್ಲಿ ತಿಳಿಸಿದ್ದಾರೆ.

ಒಂದು ವೇಳೆ ಮೃತದೇಹ ದೊರೆತರೆ ಅಂತ್ಯಕ್ರಿಯೆ ಮಾಡಿ ಎಂದು ಮನವಿ ಮಾಡಿರುವ ಅವರು, ಸಾಲ ವಸೂಲಿಗೆ ಜೀವ ತೆಗೆಯಲು ಮುಂದಾದ ಅವರನ್ನಂತೂ ಬಿಡಬೇಡಿ ಎಂದು ಮಹೇಶ್ ಮೆಸೇಜ್ ಕಳುಹಿಸಿ ನಾಪತ್ತೆಯಾಗಿದ್ದಾರೆ. ರಂಜಿತಾ, ದಿನೇಶ್, ಚಂದ್ರು ಹಾಗೂ ನೇತ್ರ ಎಂಬುವವರ ಹೆಸರು ವಾಯ್ಸ್ ಮೆಸೇಜ್ ನಲ್ಲಿ ಉಲ್ಲೇಖ ಮಾಡಲಾಗಿದೆ.

ಈ ನಡುವೆ, ನಾಪತ್ತೆಯಾಗಿರುವ ಕುಟುಂಬವನ್ನು ಪತ್ತೆ ಹಚ್ಚುವಂತೆ ಭವಾನಿ ಸಹೋದರ ಜಗದೀಶ್ ದೂರು ನೀಡಿದ್ದಾರೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಸಾಲ ನೀಡಿದವರನ್ನೂ ಪೊಲೀಸರು ವಿಚಾರಣೆ ನಡೆಸಲು ಮುಂದಾಗಿದ್ದಾರೆ.

Exit mobile version