Site icon Vistara News

Lok Sabha Election 2024 : ದಾವಣಗೆರೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹12.50 ಕೋಟಿ ಮೌಲ್ಯದ ಚಿನ್ನಾಭರಣ ವಶ

lok sabha election 2024

ದಾವಣಗೆರೆ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಜಾಗೃತವಾಗಿರುವ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ದಾವಣಗೆರೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಭಾರೀ ಮೊತ್ತದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ನಗರದ ಲೋಕಿಕೆರೆ ಚೆಕ್ ಪೋಸ್ಟ್ ಬಳಿ ಪರಿಶೀಲನೆ ನಡೆಸುವಾಗ ಸುಮಾರು 12.50 ಕೋಟಿ ರೂ. ಮೌಲ್ಯದ ಗೋಲ್ಡ್ & ಡೈಮಂಡ್ ವಶಕ್ಕೆ ಪಡೆಯಲಾಗಿದೆ.

ಚುನಾವಣಾ ಅಧಿಕಾರಿ ಲೋಕೇಶ್ ನೇತೃತ್ವದಲ್ಲಿ ಸ್ವತ್ತು ವಶಕ್ಕೆ ಪಡೆಯಲಾಗಿದೆ. ವಿವಿಧ ಆಭರಣ ಅಂಗಡಿಗಳಿಗೆ ಸರಿಯಾದ ದಾಖಲೆ ಇಲ್ಲದೆ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಕಳೆದ ಏ. 6, 9 ದಿನಾಂಕದ ಹಳೆಯ ಬಿಲ್‌ಗಳು ಲಭ್ಯವಾಗಿವೆ. ಆಭರಣ ಸಾಗಾಟಕ್ಕೆ ಸರಿಯಾದ ಮಾಹಿತಿ ನೀಡದ ಕಾರಣಕ್ಕೆ 12.50 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಚುನಾವಣಾ ಅಧಿಕಾರಿ ರೇಣುಕಾ, ಕಮರ್ಷಿಯಲ್ ಟ್ಯಾಕ್ಸ್‌ ಇಲಾಖೆಯ ಉಪ ಆಯುಕ್ತ ಮಂಜುನಾಥ್ ನೇತೃತ್ವದಲ್ಲಿ ವಶಕ್ಕೆ ಪಡೆಯಲಾಗಿದೆ.

ಬಾಗಲಕೋಟೆಯಲ್ಲೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ

ಬಾಗಲಕೋಟೆಯ ನರಗುಂದ ಮತಕ್ಷೇತ್ರ ವ್ಯಾಪ್ತಿಯ ಕೊಣ್ಣೂರ ಚೆಕ್ ಪೋಸ್ಟ್‌ನಲ್ಲಿ ದಾಖಲೆ‌‌ ಇಲ್ಲದೆ ಸಾಗಿಸುತ್ತಿದ್ದ 6 ಲಕ್ಷ ರೂ. ನಗದು ಹಣ ಜಪ್ತಿ ಮಾಡಲಾಗಿದೆ. ಸುನೀಲ ಕುಮಾರ ನೇತೃತ್ವದ ತಂಡ ವಾಹನಗಳ ತಪಾಸಣಾ ವೇಳೆಯಲ್ಲಿ ಹಣ ತೊರೆದಿದೆ. ಬಾಗಲಕೋಟೆ- ಗದಗ ಜಿಲ್ಲೆಗಳ ನಡುವಿನ ಚೆಕ್ ಪೋಸ್ಟ್‌ನಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Lok Sabha Election 2024: ಚಲುವರಾಯಸ್ವಾಮಿ – ಎಚ್‌ಡಿಕೆ ಮಧ್ಯೆ ಪೋನ್ ಟ್ಯಾಪಿಂಗ್ ಸಮರ; ಡಿಕೆಶಿ ವಿರುದ್ಧ ಕಿಡಿ

ಬಸ್​ನಲ್ಲಿ ಸಾಗಿಸುತ್ತಿದ್ದ 16 ಲಕ್ಷ ರೂಪಾಯಿ ನಗದ ಜಪ್ತಿ

ಚಿಕ್ಕೋಡಿ : ಅಕ್ರಮವಾಗಿ ಹಾಗೂ ಯಾವುದೇ ದಾಖಲೆ ಇಲ್ಲದೆ ಬಸ್​ನಲ್ಲಿ ಸಾಗಿಸುತ್ತಿದ್ದ 16. 31 ಲಕ್ಷ ರೂಪಾಯಿ ಹಣವನ್ನು ಚಿಕ್ಕೋಡಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಜಾಗೃತವಾಗಿರುವ ಪೊಲೀಸರು ಹಣದ ಸಮೇತ ಮಹಾರಾಷ್ಟ್ರದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಚಿಕ್ಕೋಡಿ ಬಸ್ ನಿಲ್ದಾಣದಲ್ಲಿ ಪೊಲೀಸರ ತಪಾಸಣೆ ನಡೆಸುತ್ತಿದ್ದ ವೇಳೆ ದೊಡ್ಡ ಮೊತ್ತದ ನಗದು ಪತ್ತೆಯಾಗಿದೆ. ಚಿಕ್ಕೋಡಿ ಯಿಂದ ಮಹಾರಾಷ್ಟ್ರದ ಇಚಲಕರಂಜಿ ನಗರಕ್ಕೆ ತೆರಳುತ್ತಿದ್ದ ಬಸ್​ನಲ್ಲಿ ಈ ಮೊತ್ತ ಪತ್ತೆಯಾಗಿದೆ. ಬಸ್ ತಪಾಸಣೆ ವೇಳೆ ದಾಖಲೆ ಇಲ್ಲದ ಹಣ ಪತ್ತೆಯಾಗಿದ್ದು, ಅಕ್ರಮ ಹಣದ ಜೊತೆಗೆ ಇಬ್ಬರನ್ನ ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ ನಡೆಸುತ್ತಿದ್ದಾರೆ.

ಬಳ್ಳಾರಿ ಪೊಲೀಸರ ಭರ್ಜರಿ ಬೇಟೆ; 5.6 ಕೋಟಿ ರೂ. ನಗದು, 3 ಕೆಜಿ ಬಂಗಾರ, 68 ಕೆಜಿ ಬೆಳ್ಳಿ ವಶ!

ಬಳ್ಳಾರಿ: ಲೋಕಸಭಾ ಚುನಾವಣೆ (Lok Sabha Election 2024) ಹೊತ್ತಿನಲ್ಲಿ ಬಳ್ಳಾರಿಯಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಹೇಮಾ ಜ್ಯುವೆಲರ್ಸ್ ಮಾಲೀಕರಾದ ನರೇಶ್ ಸೋನಿ ಎಂಬುವವರ ಬ್ರೂಸ್‌ಪೇಟೆ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು, ದಾಖಲೆಗಳಿಲ್ಲದ 5.6 ಕೋಟಿ ರೂಪಾಯಿ ನಗದು ಹಾಗೂ 3 ಕೆಜಿ ಬಂಗಾರ, 68 ಕೆಜಿ ಬೆಳ್ಳಿ ಗಟ್ಟಿ, 103 ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ದಾಳಿ ನಡೆಸಿದ್ದು, ಈ ಎಲ್ಲ ವಸ್ತುಗಳನ್ನು ಮಹಜರು ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. 98 ಕೆಪಿ ಆ್ಯಕ್ಟ್ ಅಡಿ ಪ್ರಕರಣವನ್ನು ದಾಖಲಿಸಿ ಆದಾಯ ತೆರಿಗೆ ಇಲಾಖೆಗೆ ಇದನ್ನು ಹಸ್ತಾಂತರ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.

ಅಲ್ಲದೆ, ನರೇಶ್ ಸೋನಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಹಣದ ಮೂಲ ಪತ್ತೆಗೆ ವಿಚಾರಣೆ ನಡೆಸಲಾಗುತ್ತದೆ. ವಿಚಾರಣೆ ನಂತರ ಖಚಿತ ಮಾಹಿತಿ ಲಭ್ಯವಾಗಬೇಕಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಬಳ್ಳಾರಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಿದ್ದ ಪೊಲೀಸರಿಗೆ ಈ ವಿಷಯ ತಿಳಿದುಬಂದಿದೆ ಎಂದು ಗೊತ್ತಾಗಿದೆ.

ಇದನ್ನೂ ಓದಿ: Lok Sabha Election 2024: ಬೆಂಗಳೂರಲ್ಲಿ ಅಬ್ಬರದ ರೋಡ್‌ ಶೋ ನಡೆಸಿದ ಸಿಎಂ ಸಿದ್ದರಾಮಯ್ಯ!

ಇಷ್ಟೊಂದು ಪ್ರಮಾಣದ ಹಣ ಸಂಗ್ರಹ ಏಕೆ?

ಹಾಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ. ಈ ಸಮಯದಲ್ಲಿ ಮನೆಯಲ್ಲಿ ದಾಖಲೆ ಇಲ್ಲದೆ ಕೋಟಿಗಟ್ಟಲೆ ಹಣವನ್ನು ಇಟ್ಟುಕೊಂಡಿದ್ದು ಏಕೆ? ಇವುಗಳಿಗೆ ದಾಖಲೆ ಏಕಿಲ್ಲ? ಇದನ್ನು ಚುನಾವಣೆಯಲ್ಲಿ ಹಂಚಿಕೆ ಮಾಡಲು ಇಟ್ಟುಕೊಳ್ಳಲಾಗಿದೆಯೇ? ಎಂಬಿತ್ಯಾದಿ ಪ್ರಶ್ನೆಗಳು ಮೂಡಿವೆ. ಈಗ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ನರೇಶ್‌ ಅವರ ಹೇಳಿಕೆ ಮೇಲೆ ಎಲ್ಲವೂ ಗೊತ್ತಾಗಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version