Site icon Vistara News

Deepawali 2022 | ಪಟಾಕಿ ಬಿಡಿ-ಗಿಡ ನೆಡಿ; ಆರ್ಕಿಡ್ಸ್-ದಿ ಇಂಟರ್ನ್ಯಾಷನಲ್ ಶಾಲೆಯಿಂದ ShineYourCity ಅಭಿಯಾನ

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯು (Deepawali 2022) ಸನಿಹದಲ್ಲಿದ್ದು, ನಗರದ ಆರ್ಕಿಡ್ಸ್‌ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು #ShineYourCity (ನಿಮ್ಮ ನಗರವನ್ನು ಬೆಳಗಿಸಿ) ಅಭಿಯಾನವನ್ನು ಕೈಗೊಂಡಿದ್ದಾರೆ.

ಈ ವರ್ಷ ಪರಿಸರಸ್ನೇಹಿ ದೀಪಾವಳಿಯನ್ನು ಆಚರಿಸಲು ನಾಗರಿಕರನ್ನು ಉತ್ತೇಜಿಸಲು, ಆರ್ಕಿಡ್ಸ್‌ ಸಂಸ್ಥೆಯ ಎಲ್ಲ ಶಾಖೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ಬಿಟಿಎಂ ಲೇಔಟ್‌ನ ನಂದಿನಿ ಮೈದಾನದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಪರಿಸರವಾದಿ, ಹಿರಿಯ ನಟ ಹಾಗೂ ಇಕೋ ವಾಚ್‌ ಸಂಸ್ಥಾಪಕ ಸುರೇಶ ಹಬ್ಳೀಕರ್‌ ಚಾಲನೆ ನೀಡಿದರು.

ವಿದ್ಯಾರ್ಥಿಗಳು ಹೊಂಗೆ, ದಾಸವಾಳ, ಅಶೋಕ, ಬೇವು, ಬಿಲ್ವಪತ್ರೆ ಸೇರಿದಂತೆ ವಿವಿಧ ಸಸಿಗಳನ್ನು ತಂದಿದ್ದರು. ಮೈದಾನದವನ್ನು ಸ್ವಚ್ಛಗೊಳಿಸಿ ತದನಂತರ ಸಸಿಗಳನ್ನು ನೆಟ್ಟು ನೀರುಣಿಸಿದರು. ನೆಟ್ಟಿರುವ ಸಸಿಗಳನ್ನು ಮುತುವರ್ಜಿಯಿಂದ ನೋಡಿಕೊಂಡು, ಇನ್ನೂ ಹೆಚ್ಚಿನ ಸಸಿಗಳನ್ನು ನೆಡುವುದಾಗಿ ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಿದರು.

ವಿದ್ಯಾರ್ಥಿಗಳಿಗೆ ಜೀವವೈವಿಧ್ಯದ ಮಹತ್ವ ಮತ್ತು ಪರಿಸರ ಉಳಿಸುವ ಅಗತ್ಯತೆಯ ಕುರಿತು ಮಾತನಾಡಿದ ಸುರೇಶ ಹೆಬ್ಳೀಕರ್, ನಗರೀಕರಣಕ್ಕೆ ಆದ್ಯತೆ ನೀಡುವ ಮೂಲಕ ಮನುಜ ಸಮೂಹ ಪ್ರಕೃತಿಯ ವಿನಾಶಕ್ಕೆ ಕಾರಣರಾಗಿದ್ದಾರೆ. ಆದ್ದರಿಂದ ಪರಿಸರ ಉಳಿಸುವುದು ನಮಗೆ ಬಹುಮುಖ್ಯವಾಗಿದ್ದು, ಯುವ ಮನಸ್ಸುಗಳು ಪ್ರಾಥಮಿಕವಾಗಿ ಇದರ ಕಡೆ ಗಮನಹರಿಸಬೇಕು. ಅಳಿದಿರುವ ಪ್ರಕೃತಿಯನ್ನು ಪೋಷಿಸಿ ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಆರ್ಕಿಡ್ಸ್‌ ಶಾಲೆಯ ಪ್ರಾಂಶುಪಾಲರಾದ ಜಾಸ್ಮಿನ್ ಕೆ. ಜೆ ಮಾತನಾಡಿ, ವಿದ್ಯಾರ್ಥಿಗಳಿಗೆ ಪರಿಸರ ಶಿಕ್ಷಣವು ಅಗತ್ಯವಾಗಿದ್ದು, ಸಂಕೀರ್ಣ ಪರಿಸರ ಸಮಸ್ಯೆಗಳನ್ನು ಪರಿಹರಿಸಿ, ಪರಿಸರದ ಕುರಿತು ಜ್ಞಾನ ಮತ್ತು ಕೌಶಲ್ಯವನ್ನು ಬೆಳೆಸಲು ಇದು ಸಹಾಯ ಮಾಡುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ, ಎಳವೆಯಲ್ಲಿಯೇ ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದರೆ ಅವರು ಮುಂದಕ್ಕೆ ಜವಾಬ್ದಾರಿಯುತ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದರು.

ಪರಿಸರವನ್ನು ಸ್ವಚ್ಛವಾಗಿರಿಸಿ, ಪಟಾಕಿ ಮುಕ್ತ ದೀಪಾವಳಿಯನ್ನು ಆಚರಿಸುವಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಭಾ ಕಾರ್ಯಕ್ರಮದ ನಂತರ ಸುರೇಶ್‌ ಹೆಬ್ಳೀಕರ್‌ ಅವರೊಂದಿಗೆ ಸಂವಾದ ನಡೆಯಿತು.

ಇದನ್ನೂ ಓದಿ | Deepawali Mens Royal Fashion | ದೀಪಾವಳಿ ಸಂಭ್ರಮಕ್ಕೆ ಎಂಟ್ರಿ ಕೊಟ್ಟ ಮೆನ್ಸ್‌ ರಾಯಲ್‌ ಡಿಸೈನರ್‌ವೇರ್ಸ್

Exit mobile version