Site icon Vistara News

National Doctors day | ವೈದ್ಯರ ಮೇಲೆ ಒತ್ತಡ ಹೆಚ್ಚಿಸಿದ ಈಡಿಯಟ್‌ ಸಿಂಡ್ರೋಮ್‌: ಡಾ. ಸಿ. ಎನ್‌. ಮಂಜುನಾಥ್‌ ಕಳವಳ

ಪದ್ಮಶ್ರೀ ‌ಡಾ.ಸಿ.ಎನ್.ಮಂಜುನಾಥ್

ಬೆಂಗಳೂರು: ಜನರಲ್ಲಿ ಈಡಿಯಟ್‌ ಸಿಂಡ್ರೋಮ್‌ (IDIOT SYNDROME- Internet Derived Information Obstruction Treatment)ನಿಂದಾಗಿ ವಿದ್ಯಾವಂತರಿಗೆ ಚಿಕಿತ್ಸೆ ನೀಡುವುದು ಬಹಳ ಕ್ಲಿಷ್ಟಕರವಾಗುತ್ತಿದೆ. ತಂತ್ರಜ್ಞಾನದಲ್ಲಿ ಆಗುತ್ತಿರುವ ಆವಿಷ್ಕಾರಗಳಿಂದಾಗಿ ಜನ ಹಾಗೂ ರೋಗಿಗಳಲ್ಲಿ ವೈದ್ಯರ ಮೇಲಿನ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಇದರಿಂದ ವೈದ್ಯರು ಒತ್ತಡಕ್ಕೆ ಒಳಗಾಗಿ ಅನಾರೋಗ್ಯಕ್ಕೂ ತುತ್ತಾಗುತ್ತಿದ್ದಾರೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಪದ್ಮಶ್ರೀ ಡಾ. ಸಿ.ಎನ್‌ ಮಂಜುನಾಥ್‌ ಕಳವಳ ವ್ಯಕ್ತಪಡಿಸಿದರು.

ಜಯನಗರದ ಯುನೈಟೆಡ್‌ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಹಿರಿಯ ವೈದ್ಯರು ಹಾಗೂ ಕುಟುಂಬ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

“”ಜನರು ತಮ್ಮ ಅಂಗೈಯಲ್ಲಿ ಸಿಗುತ್ತಿರುವ ತಂತ್ರಜ್ಞಾನದ ಸಹಾಯದಿಂದ ತಮಗಿರುವ ಅನಾರೋಗ್ಯ ಹಾಗೂ ಕಾಯಿಲೆಗಳ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತಿದ್ದಾರೆ. ಅಂತರ್ಜಾಲದಲ್ಲಿ ಒಂದು ಕಾಯಿಲೆಯ ಬಗ್ಗೆ ನಾಲ್ಕಾರು ವಿಧದ ಚಿಕಿತ್ಸೆಯ ಮಾಹಿತಿ ಪಡೆದುಕೊಳ್ಳುತ್ತಾರೆ. ತಂತ್ರಜ್ಞಾನದಲ್ಲಿ ಆಗುತ್ತಿರುವ ಸ್ಫೋಟ (Explosion of Technology) ಹಾಗೂ ಇದರಿಂದ ರೋಗಿಗಳು, ಅವರ ಸಹಾಯಕರ ವೈದ್ಯರ ಮೇಲಿನ ಅತಿಯಾದ ನಿರೀಕ್ಷೆಯ ಮಧ್ಯದಲ್ಲಿ ವೈದ್ಯರು ನಲುಗಿ ಹೋಗುತ್ತಿದ್ದಾರೆ. ವೈದ್ಯರ ಮೇಲೆ ಅವಾಸ್ತವಿಕ ನಿರೀಕ್ಷೆಯನ್ನು ಇಟ್ಟುಕೊಂಡು ಆಸ್ಪತ್ರೆಗೆ ಧಾವಿಸುತ್ತಿದ್ದಾರೆʼʼ ಎಂದು ಡಾ. ಮುಂಜುನಾಥ್‌ ನುಡಿದರು.

“”ಈ ಬದಲಾದ ಸಂದರ್ಭದಲ್ಲಿ ಒಬ್ಬ ತಜ್ಞ ವೈದ್ಯನಿಗೆ ಕೇವಲ ತಾಂತ್ರಿಕ ಮತ್ತು ವೃತ್ತಿಪರ ಕೌಶಲದ ಜತೆಗೆ ಸಂವಹನದ ಕೌಶಲವನ್ನು ಹೊಂದುವ ಅವಶ್ಯಕತೆ ಬಹಳಷ್ಟು ಹೆಚ್ಚಾಗಿದೆ. ವೈದ್ಯರ ದಿನಾಚರಣೆ ನಮ್ಮ ಮಧ್ಯೆ ಬಿಡುವಿಲ್ಲದೆ ಒತ್ತಡದಿಂದ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಪ್ರೋತ್ಸಾಹ ನೀಡುವ ದಿನವಾಗಿದೆ. ಬೆಳಗ್ಗೆಯಿಂದ ಮಧ್ಯರಾತ್ರಿಯವರೆಗೆ ದುಡಿಯುವ ವೈದ್ಯರ ಮೇಲೆ ದಿನೇದಿನೆ ಒತ್ತಡ ಹೆಚ್ಚಾಗುತ್ತಿದೆ. ಯುವ ವೈದ್ಯರು ಸೇರಿಕೊಂಡು ಪ್ರಾರಂಭಿಸಿರುವ ಯುನೈಟೆಡ್‌ ಆಸ್ಪತ್ರೆ ಒತ್ತಡದ ಮಧ್ಯೆಯೇ ಹಿರಿಯ ವೈದ್ಯರನ್ನು ಹಾಗೂ ಅವರ ಅವಿರತ ಸೇವೆಗೆ ಕಾರಣೀಭೂತರಾದ ಕುಟುಂಬದವರನ್ನು ಸನ್ಮಾನಿಸುತ್ತಿರುವುದು ಸಂತಸದ ವಿಷಯವಾಗಿದೆʼʼ ಎಂದರು.

ಇದನ್ನೂ ಓದಿ | knee pain : ನಾಟಿ ವೈದ್ಯರಿಂದ ಚಿಕಿತ್ಸೆ ಪಡೆದ ಧೋನಿ

ಯುನೈಟೆಡ್‌ ಆಸ್ಪತ್ರೆಯ ನಿರ್ದೇಶಕ ಡಾ. ವೀಣಾ ಸಿದ್ದಾರೆಡ್ಡಿ ಮಾತನಾಡಿ “”ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರ ಮೇಲಿನ ಒತ್ತಡದ ಬಗ್ಗೆ ನಮಗೆ ಅರಿವಿದೆ. ಸ್ವತಃ ವೈದ್ಯರಾಗಿ ಅವರ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಲವಾರು ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕೋವಿಡ್‌ ಹಾಗೂ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹಿರಿಯ, ಕಿರಿಯ ವೈದ್ಯರು ಸಲ್ಲಿಸಿದ ಸೇವೆ ಶ್ಲಾಘನೀಯʼʼ ಎಂದರು.

ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಶಾಂತಕುಮಾರ್‌ ಮುರುಡಾ ಮಾತನಾಡಿ “”ಕುಟುಂಬ ಸದಸ್ಯರ ಜತೆ ಸಮಯ ಕಳೆಯುವುದಕ್ಕಿಂತ ಹೆಚ್ಚಿನ ಸಮಯ ರೋಗಿಗಳ ಸೇವೆಯಲ್ಲಿ ವೈದ್ಯರು ಕಳೆದಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ವೈದ್ಯರ ಜತೆ ಅವರ ಕುಟುಂಬದವರೂ ಕಷ್ಟ ಅನುಭವಿಸಿದ್ದಾರೆ. ಇಂತಹ ವೈದ್ಯರ ಹಾಗೂ ಕುಟುಂಬ ಸದಸ್ಯರಿಗೆ ಪ್ರೋತ್ಸಾಹ ನೀಡುವುದು ನಮ್ಮ ಉದ್ದೇಶವಾಗಿದೆʼʼ ಎಂದರು.

ಇದನ್ನೂ ಓದಿ | ಖಾಸಗಿ ಆಸ್ಪತ್ರೆಗಳ ತಂತ್ರಕ್ಕೆ ಆರೋಗ್ಯ ಇಲಾಖೆ ತಿರುಮಂತ್ರ: ಕೋವಿಡ್‌ ಹಣ ವಸೂಲಿ

Exit mobile version