Site icon Vistara News

CM Siddaramaiah : ಇ-ಪ್ರೊಕ್ಯೂರ್‌ಮೆಂಟ್‌ 2.0 ಪೋರ್ಟಲ್‌ – ಡಿಐಎಸ್‌ ತಂತ್ರಾಂಶ ಲೋಕಾರ್ಪಣೆ

CM SIddaramaiah Launched E Procurement 20 Portal and DIS Software

ಬೆಂಗಳೂರು: ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್‌ 2.೦ ಹಾಗೂ ಜಿಲ್ಲೆಗಳ ಪ್ರಗತಿ ಪರಿಶೀಲನೆ ಕುರಿತಂತೆ ಡಿ.ಐ.ಎಸ್. ತಂತ್ರಾಂಶವನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಸೋಮವಾರ (ನ. 27) ಲೋಕಾರ್ಪಣೆಗೊಳಿಸಿದ್ದಾರೆ. ಈ ಮೂಲಕ ಪಾರದರ್ಶಕ ಆಡಳಿತದತ್ತ (Transparent Governance) ಪ್ರಮುಖ ನಿರ್ಣಯವೊಂದನ್ನು ಕೈಗೊಂಡಂತೆ ಆಗಿದೆ. ಇಲ್ಲಿ ಎಲ್ಲ ಇಲಾಖೆಗಳಲ್ಲಿ 1 ಕೋಟಿ ರೂಪಾಯಿಗೂ ಮೇಲ್ಪಟ್ಟು ಇರುವ ಕಾಮಗಾರಿಗಳ ಸ್ಥಿತಿಗತಿಗಳನ್ನು ಪರಿವೀಕ್ಷಣೆ ಮಾಡಬಹುದಾಗಿದ್ದು, ಸೂಕ್ತ ಸಮಯಕ್ಕೆ ಮೇಲ್ವಿಚಾರಣೆಯನ್ನು ಸಹ ಮಾಡಬಹುದಾಗಿದೆ.

ಸಾರ್ವಜನಿಕ ಸಂಗ್ರಹಣೆ ಪೋರ್ಟಲ್‌ 2.0

ರಾಜ್ಯದ ಆಯವ್ಯಯದಲ್ಲಿ ಕೈಗೊಂಡ ಎಲ್ಲ ಇಲಾಖೆಗಳ ರೂ 1 ಕೋಟಿಗಿಂತ ಹೆಚ್ಚಿನ ಕಾಮಗಾರಿಗಳ ಪ್ರಗತಿಯನ್ನು ಸಮಯಬದ್ಧವಾಗಿ ಮೇಲ್ವಿಚಾರಣೆ ಮಾಡಲು ಕಾಂಟ್ರಾಕ್ಟ್ ಮ್ಯಾನೇಜ್‌ಮೆಂಟ್ ಮಾಡ್ಯೂಲ್‌ನಲ್ಲಿ ಡ್ಯಾಷ್‌ಬೋರ್ಡ್‌ ಅನ್ನು ಇ-ಆಡಳಿತ ಇಲಾಖೆಯ ವತಿಯಿಂದ ಸಿದ್ಧಪಡಿಸಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಲಸಂಪನ್ಮೂಲ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ಅದರ ವ್ಯಾಪ್ತಿಯಲ್ಲಿರುವ ಎಲ್ಲ ಮಂಡಳಿಗಳು ಮತ್ತು ನಿಗಮಗಳಡಿ ನೀಡಲಾದ ರೂ.50 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಎಲ್ಲ ಟೆಂಡರ್‌ಗಳಿಗೆ ಮೂರು ತಿಂಗಳ ಅವಧಿಗೆ ಪ್ರಾಯೋಗಿಕ ಆಧಾರದ ( Pilot Basis) ಮೇಲೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್‌ನಲ್ಲಿ ಗುತ್ತಿಗೆ ನಿರ್ವಹಣಾ ಮಾಡ್ಯೂಲ್‌ನ್ನು ಹೆಚ್ಚಿನ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಅದರಂತೆ ಇ-ಪ್ರೊಕ್ಯೂರ್‌ಮೆಂಟ್‌ (E Procurement Portal) ವೇದಿಕೆಯಲ್ಲಿ ಒಟ್ಟು 40,000 ಟೆಂಡರ್‌ಗಳು ಪ್ರಕಟಿಸಲಾಗಿದ್ದು ಈ ಪೈಕಿ ಆಯ್ಕೆಯಾದ 3 ಇಲಾಖೆಗಳ ರೂ 50 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಕೇವಲ 3165 ಟೆಂಡರ್‌ಗಳನ್ನು ಈ ಯೋಜನೆಗಾಗಿ ಗುರುತಿಸಲಾಗಿದೆ. ಸದರಿ ಇಲಾಖೆಗಳಿಂದ ಕಾಂಟ್ರಾಕ್ಟ್ ಮ್ಯಾನೇಜ್ಮೆಂಟ್ ಸಿಸ್ಟಮ್‌ನಲ್ಲಿ ಕಡ್ಡಾಯವಾಗಿ ತಂತ್ರಾಂಶದ ಮೂಲಕ ಮಾಹಿತಿಯನ್ನು ಡ್ಯಾಶ್ ಬೋರ್ಡ್‌ನಲ್ಲಿ ಅಳವಡಿಸಲಾಗುವುದು.

ಡಿಐಎಸ್ ತಂತ್ರಾಂಶ

ಸೆಪ್ಟೆಂಬರ್ 12 ಮತ್ತು 13 ರಂದು ನಡೆದ ‘ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನ’ದಲ್ಲಿ ಜಿಲ್ಲೆಗಳಿಗೆ ಸಂಬಂಧಪಟ್ಟಂತೆ, 28 ವಿಷಯಗಳ ಬಗ್ಗೆ ಪರಿಶೀಲನೆ ನಡೆಸಿ ಪ್ರತಿ ತಿಂಗಳೂ ವರದಿಯನ್ನು ಸಲ್ಲಿಸಲು ಎಲ್ಲ ‘ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ’ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸೂಚಿಸಿದ್ದಾರೆ. ಜತೆಗೆ ಅಭಿವೃದ್ಧಿ ಆಯುಕ್ತರಿಗೆ ಸದರಿ ವರದಿಗಳನ್ನು ವಿಶ್ಲೇಷಿಸಿ ಮಂಡಿಸುವಂತೆ ಸೂಚಿಸಲಾಗಿದೆ. ಅದರಂತೆ, ಕ್ರಮ ವಹಿಸಿ, ಇ-ಆಡಳಿತ ಇಲಾಖೆಯಿಂದ ‘ಡಿಐಎಸ್ ತಂತ್ರಾಂಶ’ವನ್ನು ಅಭಿವೃದ್ಧಿಪಡಿಸಲಾಗಿದೆ. ಅಧಿಕಾರಿಗಳು ಈ ಪೋರ್ಟಲ್‌ಗೆ ಹೋಗಿ ವರದಿಯನ್ನು ಅಪ್ಡೇಟ್‌ ಮಾಡಬೇಕು.

ತಂತ್ರಾಂಶ ಹೇಗೆ ಕಾರ್ಯನಿರ್ವಹಿಸಲಿದೆ?

(1) ಈ ತಂತ್ರಾಂಶದ ಮೂಲಕ ಎಲ್ಲ ಜಿಲ್ಲಾ ಉಸ್ತುವಾರಿ ಅಧಿಕಾರಿಗಳು ‘online’ ವರದಿಯನ್ನು ಸಲ್ಲಿಸಲು ಅನುವು ಮಾಡಿಕೊಡಲಾಗಿದೆ.
(2) ಈ ತಂತ್ರಾಂಶದ ಮೂಲಕ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಇತರೆ ಇಲಾಖಾ ಕಾರ್ಯದರ್ಶಿಗಳಿಗೆ ಹಾಗೂ ಜಿಲ್ಲಾಧಿಕಾರಿ /ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಲ್ಲೆಯಲ್ಲಿರುವ ಸಮಸ್ಯೆ (issues) ಗಳ ಕುರಿತು ಮಾಹಿತಿ ದಾಖಲಿಸಬಹುದು.
(3) ಸದರಿ ಸಮಸ್ಯೆಗಳಿಗೆ (To Issues) ಇಲಾಖಾ ಕಾರ್ಯದರ್ಶಿ/ ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ತಂತ್ರಾಂಶದ ಮೂಲಕವೇ ತೆಗೆದುಕೊಂಡ ಕ್ರಮದ ಕುರಿತು ವರದಿ ಸಲ್ಲಿಸಬಹುದಾಗಿರುತ್ತದೆ.
(4) ಸಲ್ಲಿಸಲಾಗಿರುವ ಜಿಲ್ಲಾ ವರದಿಗಳ ಕುರಿತ ಎಮ್ಐಎಸ್ ವರದಿಗಳನ್ನು ಮುಂತ್ರಿಗಳು ಈ ತಂತ್ರಾಂಶದಲ್ಲಿ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: Janatha Darshan : ಸಿಎಂ ತಲೆಗೆ ಕೈ ಇಟ್ಟು ಆಶೀರ್ವದಿಸಿದ ಅಜ್ಜಿ; ಹೆಗಲುಮುಟ್ಟಿ ಸಿಎಂ ಸಾಂತ್ವನ

(5) ತಂತ್ರಾಂಶದ ಬಳಕೆ ಬಗ್ಗೆ ಎಲ್ಲ ಇಲಾಖಾ/ಜಿಲ್ಲಾ ಸಮಾಲೋಚಕರಿಗೆ ತರಬೇತಿಯನ್ನು ಸಹ ನೀಡಲಾಗಿದೆ.
(6) ತಂತ್ರಾಂಶದ ಲಿಂಕ್ ಅನ್ನು ಇ-ಕಚೇರಿ ಮುಖಪುಟದಲ್ಲಿ ನೀಡಲಾಗಿದ್ದು, ಅಲ್ಲಿಂದಲೇ ಬಳಕೆದಾರರು ತಂತ್ರಾಂಶ ಪ್ರವೇಶಿಸಬಹುದಾಗಿದೆ.

Exit mobile version