Site icon Vistara News

ಎಲೆಕ್ಷನ್‌ ಹವಾ | ಹರಿಹರ | ಜೆಡಿಎಸ್‌ ಅಭ್ಯರ್ಥಿ ಘೋಷಣೆಯಾಗಿದೆ, ಕಾಂಗ್ರೆಸ್‌-ಬಿಜೆಪಿಯಲ್ಲಿ ಪೈಪೋಟಿಯಿದೆ

Election Hawa Political Scenario in Harihara constituency of Davanagere

ಯಶವಂತ್‌, ದಾವಣಗೆರೆ
ದಾವಣಗೆರೆ ಜಿಲ್ಲೆಯಲ್ಲಿ ಹರಿಹರ ವಿಧಾನಸಭಾ ಕ್ಷೇತ್ರ ಮೊದಲಿನಿಂದಲೂ ರಾಜಕೀಯವಾಗಿ ತ್ರಿಕೋನ ಸ್ಪರ್ಧೆ ಇರುವ ಕ್ಷೇತ್ರ. ಇಲ್ಲಿ, ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಮೂರೂ ಪಕ್ಷಗಳು ಪ್ರಬಲ. ಮಾಜಿ ಸಚಿವ ಎಚ್​. ಶಿವಪ್ಪ ಅವರಿಂದ ಈ ಕ್ಷೇತ್ರದಲ್ಲಿ ಜೆಡಿಎಸ್​ ಬೇರು ಬಿಟ್ಟಿದೆ. ಇಡೀ ಜಿಲ್ಲೆಯಲ್ಲಿ ಜೆಡಿಎಸ್​ ಶಕ್ತಿ, ಪ್ರಬಲ ಅಭ್ಯರ್ಥಿ ಇರುವುದು ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ.

ಮಧ್ಯ ಕರ್ನಾಟಕದ ರಾಜಕೀಯ ಮುತ್ಸದಿ ಎಚ್​.ಶಿವಪ್ಪ 1994ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಜಯಶೀಲರಾದರು. ಬಳಿಕ 1999ರಲ್ಲಿ ಎಚ್​. ಶಿವಪ್ಪ ಜನತಾದಳ (ಯು) ಪಕ್ಷದಿಂದ ಸ್ಪರ್ಧಿಸಿ ದ್ವಿತೀಯ ಸ್ಥಾನದಲ್ಲಿದ್ದರು. 2004ರ ಚುನಾವಣೆ ವೇಳೆಗೆ ಜೆಡಿಎಸ್‌ಗೆ ಬಂದು ಹರಿಹರ ಕ್ಷೇತ್ರದಲ್ಲಿ ಜೆಡಿಎಸ್​ಗೆ ಭದ್ರ ಬುನಾದಿ ಹಾಕಿದರು. 2004 ಚುನಾವಣೆಯಲ್ಲಿ ಕಾಂಗ್ರೆಸ್​ನ ಡಾ.ವೈ. ನಾಗಪ್ಪ ವಿರುದ್ಧ ಕೇವಲ 2,942 ಮತಗಳ ಅಂತರದಿಂದ ಸೋಲು ಕಂಡರು. 2008ರಲ್ಲಿ ಬಿಜೆಪಿಯ ಬಿ.ಪಿ.ಹರೀಶ್​ ವಿರುದ್ಧ ಕೇವಲ 11,018 ಮತಗಳ ಅಂತರದಲ್ಲಿ ಪರಾಜಿತಗೊಂಡರು. ಆದರೆ,  ನಿರಂತರವಾಗಿ ಮೂರು ಬಾರಿ ಸೋಲು ಕಂಡರೂ ತಾಲೂಕಿನಲ್ಲಿ ಜೆಡಿಎಸ್​ ಪಕ್ಷಕ್ಕೆ ಶಕ್ತಿ ತುಂಬಿದರು. ಅದರ ಫಲವಾಗಿ 2013ರಲ್ಲಿ ಹರಿಹರ ಕ್ಷೇತ್ರದಲ್ಲಿ ಎಚ್​.ಶಿವಪ್ಪ ಅವರ ಪುತ್ರ ಎಚ್​.ಎಸ್​.ಶಿವಶಂಕರ್​ ಜೆಡಿಎಸ್​ನಿಂದ ಸ್ಪರ್ಧಿಸಿ 19 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸಿದರು. ಅದಕ್ಕೆ ತಂದೆಯ ಅಕಾಲಿಕ ಸಾವಿನ ಅಲೆಯೂ ಕಾರಣವಾಗಿತ್ತು. ಹೀಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್​-ಬಿಜೆಪಿ-ಜೆಡಿಎಸ್​ ನಡುವೆ ಪೈಪೋಟೆ ಇದ್ದೇ ಇದೆ.

ತ್ರಿಕೋನ ಸ್ಪರ್ಧೆ

ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಜೆಡಿಎಸ್​ನಿಂದ ಮಾಜಿ ಶಾಸಕ ಎಚ್.ಎಸ್​. ಶಿವಶಂಕರ್​ ಸ್ಪರ್ಧೆ ಖಚಿತವಾಗಿದ್ದು, ಸೋಮವಾರವಷ್ಟೇ ಘೋಷಣೆಯಾದ 93 ಅಭ್ಯರ್ಥಿಗಳ ಪಟ್ಟಿಯಲ್ಲೂ ಹೆಸರಿದೆ. ಹಾಲಿ ಶಾಸಕ ಕಾಂಗ್ರೆಸ್​ನ ಎಸ್​. ರಾಮಪ್ಪ ಕೂಡ ಕಾಂಗ್ರೆಸ್​ನಿಂದ ಮತ್ತೊಮ್ಮೆ ಪ್ರಬಲ ಆಕಾಂಕ್ಷಿ. ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಎಸ್. ರಾಮಪ್ಪ, ಸಿದ್ದರಾಮಯ್ಯ ಬಂದರೆ ಕ್ಷೇತ್ರ ಬಿಟ್ಟು ಕೊಡುವೆ ಎಂದಿದ್ದಾರೆ. ಅದರೆ, ರಾಜಕೀಯ ನಿವೃತ್ತಿ ಘೋಷಿಸಿಲ್ಲ. ಹಾಗಾಗಿ ರಾಮಪ್ಪನ ಜತೆ ಎಂ.ನಾಗೇಂದ್ರಪ್ಪ, ಎಚ್.ಶ್ರೀನಿವಾಸ್​, ವಿಟಿಯು ವಿಶ್ರಾಂತ ಕುಲಪತಿ ದೀಟೂರು ಮಹೇಶ್ವರಪ್ಪ ಪ್ರಮುಖವಾಗಿ ರೇಸ್‌ನಲ್ಲಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್​ ಸಿಗುವುದು ಕಷ್ಟ ಎಂದು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್​ ಸೇರ್ಪಡೆಗೊಂಡ ಮಾಜಿ ಪೊಲೀಸ್​ ಅಧಿಕಾರಿ ಕುಣಿಬೆಳಕೆರೆ ದೇವೇಂದ್ರಪ್ಪ ಕೂಡ ಪ್ರಬಲ ಆಕಾಂಕ್ಷಿ. ಬಿಜೆಪಿಯಲ್ಲಿ ಮಾಜಿ ಶಾಸಕ ಬಿ.ಪಿ.ಹರೀಶ್​ ಪ್ರಬಲ ಆಕಾಂಕ್ಷಿ. ಬಿಜೆಪಿ ಜಿಲ್ಲಾಧ್ಯಕ್ಷ ಎಸ್​.ಎಂ. ವೀರೇಶ್​ ಹನಗವಾಡಿ, ಮುಖಂಡ ಚಂದ್ರಶೇಖರ್​ ಪೂಜಾರ್​ ಕೂಡ ರೇಸ್ ನಲ್ಲಿದ್ದಾರೆ. ಕಾಂಗ್ರೆಸ್​ ಹಾಗೂ ಬಿಜೆಪಿಯಲ್ಲಿ ಯಾರು ಅಭ್ಯರ್ಥಿ ಆಗುತ್ತಾರೆ ಎನ್ನುವುದರ ಆಧಾರದಲ್ಲಿ ಸ್ಪರ್ಧೆ ಏರ್ಪಡಲಿದೆ.

ಜಾತಿ ಲೆಕ್ಕಾಚಾರ

ಇಲ್ಲಿ ಪಂಚಮಸಾಲಿ ಹಾಗೂ ಹಿಂದುಳಿದ  ಮತಗಳೇ ನಿರ್ಣಾಯಕ. ಜೆಡಿಎಸ್​ ಅಭ್ಯರ್ಥಿ ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದಾರೆ. ಕಾಂಗ್ರೆಸ್​ ಹಾಗೂ ಬಿಜೆಪಿಯಲ್ಲಿ ಯಾರಿಗೆ ಟಿಕೆಟ್​ ಕೊಟ್ಟರೆ ಏನು ಲಾಭ ಆಗತ್ತದೆ ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ಕಳೆದ ಬಾರಿ ಕಾಂಗ್ರೆಸ್​ ಕುರುಬ ಸಮುದಾಯಕ್ಕೆ ಟಿಕೆಟ್​ ನೀಡಿ ಹಿಂದುಳಿದ ಮತಗಳನ್ನು ಬುಟ್ಟಿಗೆ ಹಾಕಿಕೊಂಡಿತ್ತು. ಆದರೆ, ಈ ಬಾರಿಗೂ ಅದೇ ಲೆಕ್ಕಾಚಾರ ವರ್ಕೌಟ್ ಆಗತ್ತದೆಯೇ ಎನ್ನುವುದು ಅನುಮಾನ. ಸದ್ಯ  ಬಿಜೆಪಿಯಲ್ಲಿರುವ ಪ್ರಬಲ ಅಭ್ಯರ್ಥಿಗಳು ಕೂಡ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಾಗಿದ್ದು, ಕಾಂಗ್ರೆಸ್​ ಜಾತಿ ಲೆಕ್ಕಾಚಾರ ಹಾಕುತ್ತಿದೆ.

2023ಕ್ಕೆ ಸಂಭಾವ್ಯ ಸ್ಪರ್ಧಿಗಳು

1. ಎಚ್.ಎಸ್​. ಶಿವಶಂಕರ್ (ಜೆಡಿಎಸ್‌)
2. ಎಸ್​. ರಾಮಪ್ಪ , ಎಂ.ನಾಗೇಂದ್ರಪ್ಪ, ಎಚ್.ಶ್ರೀನಿವಾಸ್​, ದೀಟೂರು ಮಹೇಶ್ವರಪ್ಪ (ಕಾಂಗ್ರೆಸ್‌)
೩. ಬಿ.ಪಿ.ಹರೀಶ್, ಎಸ್​.ಎಂ. ವೀರೇಶ್​ ಹನಗವಾಡಿ, ಚಂದ್ರಶೇಖರ್​ ಪೂಜಾರ್ (ಬಿಜೆಪಿ)

ಚುನಾವಣಾ ಇತಿಹಾಸ

ಮತದಾರರ ವಿವರ

ಇದನ್ನೂ ಓದಿ | ಎಲೆಕ್ಷನ್‌ ಹವಾ | ಹೊನ್ನಾಳಿ | ಸದಾ ಸುದ್ದಿಯಲ್ಲಿರುವ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಯಾರು?

Exit mobile version