Site icon Vistara News

Elephant attack : ಹೆದ್ದಾರಿ ದಾಟುತ್ತಿದ್ದಾಗ ಕಾರಿಗೆ ಡಿಕ್ಕಿ ಹೊಡೆದ ಆನೆ ಹಿಂಡು, ಫೋಟೊ ತೆಗೆಯಲು ಮುಂದಾದ ಯುವಕ ಸಾವು

Elephant attack

#image_title

ಆನೇಕಲ್: ಕೆಲವೊಮ್ಮೆ ಮನುಷ್ಯನ ಅತಿಯಾದ ಉತ್ಸಾಹವೇ ಮೃತ್ಯುವಿಗೆ ಆಹ್ವಾನ ನೀಡುತ್ತದೆ ಎಂಬ ಮಾತು ಸುಳ್ಳಲ್ಲ. ರಾಜ್ಯದ ತಮಿಳುನಾಡು ಗಡಿ ಭಾಗದಲ್ಲಿ ಕಾಡಾನೆ ಹಿಂಡಿನ (Elephant attack) ಫೋಟೊ ತೆಗೆಯಲು ಹೋಗಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ತಮಿಳುನಾಡು-ಕರ್ನಾಟಕ ಗಡಿ ಭಾಗದಲ್ಲಿ ಕಾಡಾನೆಗಳ ಉಪಟಳ ಜೋರಾಗಿದೆ. ಕೃಷ್ಣಗಿರಿ ಸಮೀಪದ ಸಪ್ಪನಿಪಟ್ಟಿ ಹೆದ್ದಾರಿ ಬಳಿ ಕಾರೊಂದು ಸಾಗಿ ಹೋಗುತ್ತಿದ್ದಾಗ ಆನೆಗಳ ಹಿಂಡೊಂದು ಏಕಾಏಕಿಯಾಗಿ ಹೆದ್ದಾರಿಗೆ ನುಗ್ಗಿ ಕಾರಿನ ಮೇಲೆ ದಾಳಿ ನಡೆಸಿದೆ. ಕಾಡಾನೆಗಳ ದಾಳಿಗೆ ಕಾರು ಸಂಪೂರ್ಣ ಜಖಂ ಆಗಿದೆ. ಆದರೆ, ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಳೆದೆರಡು ದಿನಗಳಿಂದ ಸುತ್ತಮುತ್ತಲಿನ ಗ್ರಾಮಗಳ ಬಳಿ ಕಾಡಾನೆಗಳು ಬೀಡುಬಿಟ್ಟಿವೆ. ಇವುಗಳು ಆಗಾಗ ಹೆದ್ದಾರಿಗೆ ಬಂದು ದಾಂಧಲೆ ಎಬ್ಬಿಸುತ್ತಿವೆ. ಈ ನಡುವೆ ಅಪಘಾತದ ಬಳಿಕ ಆನೆಗಳು ಪಕ್ಕದ ತೋಟಕ್ಕೆ ನುಗ್ಗಿದ್ದವು. ಆಗ ಅಲ್ಲಿನ ಯುವಕನೊಬ್ಬ ಅವುಗಳ ಫೋಟೊ ತೆಗೆಯಲು ಮುಂದಾಗಿದ್ದಾನೆ. ಈ ವೇಳೆ ಆನೆಗಳು ತಿರುಗಿಬಿದ್ದಿದ್ದು, ಆತನ ಮೇಲೆ ದಾಳಿ ಮಾಡಿವೆ. ರಾಮ್‌ ಕುಮಾರ್‌ ಎಂಬ ಯುವಕನ ಮೇಲೆ ದಾಳಿ ಮಾಡಿದಾಗ ಆತ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.

ಈ ಭಾಗದಲ್ಲಿ ಆನೆಗಳ ಓಡಾಟ ಜೋರಾಗಿದ್ದು, ಜನರು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಅನಿವಾರ್ಯತೆ ಇದೆ. ಆದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Elephant Attack: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರ

Exit mobile version