Site icon Vistara News

Elephant calf dead: ಕೆರೆಗೆ ಬಿದ್ದ ಬಳಿಕ ತಾಯಿ ಜತೆ ಹೋಗದೆ ದುಬಾರೆ ಸೇರಿದ್ದ ಆನೆ ಮರಿ ಮೃತ್ಯು

Elephant calf

Elephant calf

ಸುಳ್ಯ: ಏಪ್ರಿಲ್‌ 13ರಂದು ಸುಳ್ಯದ ಅಜ್ಜಾವರದಲ್ಲಿ ಸನತ್ ರೈ ಎಂಬವರ ತೋಟದ ಕೆರೆಯಲ್ಲಿ ಸಿಲುಕಿ ಬಳಿಕ ರಕ್ಷಿಸಲ್ಪಟ್ಟು, ನಂತರ ಹಿಂಡಿನ ಜತೆ ಹೋಗಲೊಪ್ಪದೆ ದುಬಾರೆ ಆನೆ ಶಿಬಿರ ಸೇರಿದ್ದ ಆನೆ ಮರಿ ಅಲ್ಲಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಕೆರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಆನೆಗಳು

ಆವತ್ತು ಆಹಾರ ಹುಡುಕುತ್ತಾ ಬಂದ ಎರಡು ದೊಡ್ಡ ಕಾಡಾನೆಗಳು ಮತ್ತು ಎರಡು ಮರಿ ಆನೆಗಳು ಆಕಸ್ಮಿಕವಾಗಿ ತೋಟದ ಕೆರೆಗೆ ಬಿದ್ದಿದ್ದವು. ಇದರಲ್ಲಿ ಎರಡು ದೊಡ್ಡ ಕಾಡಾನೆಗಳು ಮತ್ತು ಒಂದು ಮರಿಯಾನೆ ಕಷ್ಟಪಟ್ಟು ಕೆರೆಯಿಂದ ಮೇಲೆ ಬಂದಿದೆ. ಆದರೆ, ಸಂಪೂರ್ಣ ಸುಸ್ತಾಗಿದ್ದ ಸುಮಾರು ಮೂರು ತಿಂಗಳ ಒಂದು ಗಂಡು ಮರಿಯಾನೆಯೊಂದು ಮೇಲೆ ಬರಲಾಗದೆ ಕುಸಿದು ಬೀಳುತ್ತಿತ್ತು. ಈ ಮರಿಯನ್ನು ಅರಣ್ಯ ಇಲಾಖೆಯವರು ಹಾಗೂ ಸ್ಥಳೀಯರು ಸೇರಿ ಕೆರೆಗಿಳಿದು ಮೇಲಕ್ಕೆ ದೂಡಿ ಹತ್ತಿಸಿದ್ದರು.

ಆನೆ ಮರಿಯನ್ನು ದುಬಾರೆಗೆ ಒಯ್ಯುತ್ತಿರುವುದು.

ಆದರೆ, ಈ ಆನೆಯನ್ನು ಹೇಗೆ ಹೇಗೆ ಹಿಂಡು ಸೇರಿಸಲು ಯತ್ನಿಸಿದರೂ ಅದು ಹಿಂದೆಯೇ ಬರುತ್ತಿತ್ತು. ಎರಡು ದಿನ ನೋಡಿದ ಹಿರಿಯಾನೆಗಳು ಕೂಡಾ ಈಗ ಕೇರಳದ ಕಡೆ ತಮ್ಮ ದಾರಿ ಹಿಡಿದಿವೆ. ಕೆಲವು ದಿನಗಳ ಕಾಲ ಆಹಾರ ನೀಡಿ ರಕ್ಷಣೆ ಮಾಡಿ ತಾಯಿ ಆನೆ ಮರಳಿ ಬರುತ್ತದೆಯಾ ಎಂದು ಕಾದು ನೋಡಲಾಯಿತು. ಆದರೆ, ಬಾರದೆ ಇದ್ದಾಗ ಏಪ್ರಿಲ್‌ 16ರಂದು ದುಬಾರೆ ಆನೆ ಶಿಬಿರಕ್ಕೆ ಒಯ್ಯಲಾಗಿತ್ತು.

ಶಿಬಿರದಲ್ಲಿ ಈ ಆನೆ ಮರಿ ಆರಾಮವಾಗಿಯೇ ಇತ್ತು ಎನ್ನಲಾಗಿದೆ. ಇತರ ಆನೆ ಮರಿಗಳ ಜತೆ ಆಟವಾಡುತ್ತಿತ್ತು ಎನ್ನಲಾಗಿದೆ. ಆದರೆ, ವಾರದ ಹಿಂದೆ ಏಕಾಕಿಯಾಗಿ ಮರಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ; ಬೆಂಗಳೂರಿಗೆ ಬರುತ್ತಿದ್ದ ಇಬ್ಬರು ಬಲಿ

ಕೋಲಾರ: ಬೆಳ್ಳಂಬೆಳಿಗ್ಗೆ ಕಾಡಾನೆಗಳು ನಡೆಸಿದ ದಾಳಿಗೆ ಇಬ್ಬರು ಬಲಿಯಾಗಿದ್ದು, (Elephant attack) ನಾಲ್ವರಿಗೆ ಗಾಯಗಳಾಗಿವೆ. ಆಂಧ್ರಪ್ರದೇಶದ ಕುಪ್ಪಂ ಮಂಡಲಂನ ಮಲ್ಲನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಬೆಂಗಳೂರಿಗೆ ಕೆಲಸಕ್ಕೆಂದು ಬರುತ್ತಿದ್ದವರ ಮೇಲೆ ಈ ದಾಳಿ ನಡೆದಿದೆ. ಮೃತರನ್ನು ಉಷಾ (36) ಮತ್ತು ಶಿವಲಿಂಗಂ ಎಂದು ಗುರುತಿಸಲಾಗಿದೆ.

ಕುಪ್ಪಂ ಮಂಡಲಂನ ಮಲ್ಲನೂರು ಗ್ರಾಮದಿಂದ (Mallanur village) ಬೆಂಗಳೂರಿಗೆ ಕೆಲಸಕ್ಕೆ ಬರುತ್ತಿದ್ದ ಆರು ಮಂದಿ ರೈಲು ಹಿಡಿಯಲೆಂದು ಗ್ರಾಮದಿಂದ ಮಲ್ಲನೂರು ರೈಲ್ವೆ ನಿಲ್ದಾಣದ ಕಡೆಗೆ ಸಾಗಿ ಬರುತ್ತಿದ್ದರು. ಇವರು ಬೆಂಗಳೂರಿಗೆ ನಿತ್ಯ ಬಂದು ಹೋಗುವ ಕಾರ್ಮಿಕರಾಗಿದ್ದಾರೆ.

ದಾಳಿ ಮಾಡಿದ ಆನೆಗಳು

ಎಂದಿನಂತೆ ಶುಕ್ರವಾರ ಬೆಳಗ್ಗೆ ಗ್ರಾಮದಿಂದ ಕಾಲು ನಡಿಗೆಯಲ್ಲಿ ಸಾಗುತ್ತಿದ್ದಾಗ ಕಾಡಾನೆಗಳು ದಿಢೀರ್‌ ದಾಳಿ ಮಾಡಿವೆ. ಒಮ್ಮಿಂದೊಮ್ಮೆಗೆ ಇವರ ಕಡೆ ಧಾವಿಸಿ ದಾಳಿ ಮಾಡಿದವು. ದಾಳಿಯಿಂದ ಒಬ್ಬ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟರೆ ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟರು. ಮೃತ ಮಹಿಳೆ ಉಷಾ ಅವರು ಮಲ್ಲನೂರು ಪರಿಸರದವರೇ ಆಗಿದ್ದು, ಶಿವಲಿಂಗಂ ಕೂಡಾ ಅಲ್ಲೇ ಸಮೀಪದ ಸಪ್ಪನಿಕುಂಟಾದವರು.

ಇನ್ನೂ ಇಬ್ಬರಿಗೆ ಗಂಭೀರವಾದ ಗಾಯವಾಗಿದ್ದು, ಕುಪ್ಪಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಡಾನೆಗಳ ದಾಳಿಯಿಂದ ಮಲ್ಲನೂರು, ಸುತ್ತಮುತ್ತಲಿನ ಜನರಲ್ಲಿ ಭಯ ಭೀತಿ ಆವರಿಸಿದೆ.

ಇದನ್ನೂ ಓದಿ: Elephant attack: ಸಕಲೇಶಪುರದಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳ ಲಗ್ಗೆ; ಕಾಫಿ ತೋಟದ ಗೇಟ್‌ ಮುರಿದು, ಬೆಳೆ ಹಾನಿ

Exit mobile version