Site icon Vistara News

ICC World Cup 2023: ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳಿಂದ ಪೂಜೆ; ಶುಭ ಕೋರಿದ ಸಿಎಂ

Siddaramaiah

ಬೆಂಗಳೂರು: ಅಹಮದಾಬಾದ್‌ನಲ್ಲಿ ಭಾನುವಾರ ನಡೆಯಲಿರುವ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ (ICC World Cup 2023) ಆಸ್ಟ್ರೇಲಿಯಾ ತಂಡದ ವಿರುದ್ಧ ಟೀಂ ಇಂಡಿಯಾ ಜಯಭೇರಿ ಬಾರಿಸಲಿ ಎಂದು ಪ್ರಾರ್ಥಿಸಿ ದೇವಾಲಯಗಳಲ್ಲಿ ಅಭಿಮಾನಿಗಳು ವಿಶೇಷ ಪೂಜೆ, ಹೋಮಗಳನ್ನು ನೆರವೇರಿಸುತ್ತಿದ್ದಾರೆ. ಅದೇ ರೀತಿ ರೋಹಿತ್‌ ಶರ್ಮಾ ಬಳಗ ಚಾಂಪಿಯನ್‌ ಆಗಲಿ ಎಂದು ಕ್ರೀಡಾಪಟುಗಳು, ರಾಜಕೀಯ ನಾಯಕರು ಸೇರಿ ಗಣ್ಯರು ಶುಭ ಕೋರುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರು ಕೂಡ ಶುಭ ಹಾರೈಸಿದ್ದಾರೆ.

ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ನಾಳಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾಕೂಟದ ಫೈನಲ್ ಪಂದ್ಯದಲ್ಲಿ ಭಾರತೀಯರ ಗೆಲುವನ್ನು ಸಂಭ್ರಮಿಸಲು ನಾನು ಎಲ್ಲರಂತೆ ಕಾತುರನಾಗಿದ್ದೇನೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ನಮ್ಮದು ಒಂದು ಪರಿಪೂರ್ಣ ತಂಡವಾಗಿರುವುದರಿಂದ ಈ ಬಾರಿಯ ವಿಶ್ವಕಪ್ ಭಾರತದ ಮಡಿಲು ಸೇರುವುದು ನಿಶ್ಚಿತ.

ವಿಶ್ವಕಪ್‌-2023 ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುತ್ತಿರುವ ಭಾರತೀಯ ಕ್ರಿಕೆಟ್‌ ತಂಡಕ್ಕೆ ಶುಭಹಾರೈಕೆಗಳು. ನನ್ನಂತಹ 140 ಕೋಟಿ ಭಾರತೀಯರ ಹರಕೆ, ಹಾರೈಕೆ ನಿಮ್ಮೊಂದಿಗಿದೆ. ಗೆಲುವಿನ ಅಭಿಯಾನ ಮುಂದುವರಿಯಲಿ ಎಂದು ಟೀಂ ಇಂಡಿಯಾಗೆ ಶುಭ ಕೋರಿದ್ದಾರೆ.

ಇದನ್ನೂ ಓದಿ | IND vs AUS Final: ಇಂಡೋ-ಆಸೀಸ್​ ಫೈನಲ್​ ಪಂದ್ಯಕ್ಕೆ ಪ್ರಧಾನಿ ಮೋದಿ ಹಾಜರ್​

ಗೆದ್ದು ಬಾ ಅಂತಾ ಟೀಂ ಇಂಡಿಯಾ

ಇಡೀ ವಿಶ್ವದ ಜನರ ಚಿತ್ತ ಅಹಮದಾಬಾದ್‌ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ನಡೆಯಲಿರೋ ಹೈವೋಲ್ಟೇಜ್‌ ಮ್ಯಾಚ್‌ನತ್ತ ನೆಟ್ಟಿದೆ. ಭಾನುವಾರ ನಡೆಯಲಿರುವ ಆಸ್ಟ್ರೇಲಿಯಾ ವರ್ಸಸ್‌ ಇಂಡಿಯಾ ವರ್ಲ್ಡ್‌ಕಪ್‌ ಫೈನಲ್‌ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಡೀ ದೇಶದ ಜನರು ಕಾದು ಕುಳಿತಿದ್ದರೆ, ಇತ್ತ ಸಿಲಿಕಾನ್‌ ಸಿಟಿ ಬೆಂಗಳೂರಲ್ಲೂ ಭಾರತ ತಂಡಕ್ಕೆ ಶುಭಾಶಯಗಳ ಹೊಳೆ ಹರಿದುಬಂದಿದೆ. ಹೋಮ-ಹವನಗಳ ಮೂಲಕ ಗೆದ್ದು ಬಾ ಟೀಂ ಇಂಡಿಯಾ ಅಂತ ಸಿಲಿಕಾನ್‌ ಸಿಟಿ ಜನರು ಶುಭ ಕೋರುತ್ತಿದ್ದಾರೆ.

ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್‌ ಫೈನಲ್‌ ಪಂದ್ಯಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಕಾಂಗರೂ ಪಡೆ ವಿರುದ್ಧ ಟೀಂ ಇಂಡಿಯಾ ರಣಕಲಿಗಳು ಅಖಾಡಕ್ಕಿಳಿಯಲು ಸಜ್ಜಾಗಿದ್ದು, ಟೀಂ ಇಂಡಿಯಾ ಆಟಗಾರರು ಈ ಬಾರೀ ಕಪ್‌ ಗೆಲ್ಲಲಿ ಅಂತ ಕ್ರಿಕೆಟ್‌ ಪ್ರೇಮಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಆರ್‌ಆರ್‌ ನಗರದ ನಿಮಿಷಾಂಬ ದೇಗುಲದಲ್ಲಿ ಚಂಡಿಕಾ ಹೋಮ ನಡೆಸೋ ಮೂಲಕ ಟೀಂ ಇಂಡಿಯಾಗೆ ಶುಭ ಹಾರೈಸಿದ್ದಾರೆ. 11 ಜನ ಆಟಗಾರರಿಗೆ 11 ಕಪ್‌ಗಳನ್ನು ಇಟ್ಟು ಪೂಜೆ ನಡೆಸಿದ 11 ಜನ ಅರ್ಚಕರು, ಕ್ರಿಕೆಟ್‌ ಅಖಾಡದಲ್ಲಿ ಜಯಶೀಲರಾಗಿ ಬರಲಿ ಎಂದು ಟೀಂ ಇಂಡಿಯಾಗೆ ಶುಭಕೋರಿದ್ದಾರೆ.

ಇದನ್ನೂ ಓದಿ | ICC World Cup 2023 : ಪಂದ್ಯ ಟೈ ಆದರೆ, ಮಳೆ ಬಂದರೆ ಫಲಿತಾಂಶ ಪ್ರಕಟಿಸುವುದು ಹೇಗೆ?

ಮತ್ತೊಂದೆಡೆ ಬೆಂಗಳೂರಿನ ಬಹುತೇಕ ಕ್ಲಬ್‌ಗಳು, ಬಾರ್‌ಗಳಲ್ಲಿ ವಿಶ್ವಕಪ್‌ ವೀಕ್ಷಣೆಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೊಡ್ಡ ದೊಡ್ಡ ಸ್ಕ್ರೀನ್‌ಗಳ ಜತೆಗೆ ಸಾವಿರಾರು ಜನರು ಕುಳಿತು ಮ್ಯಾಚ್‌ ಕಣ್ತುಂಬಿಕೊಳ್ಳಲು ತಯಾರಿ ನಡೆಸಲಾಗಿದ್ದು, ಟೀಂ ಇಂಡಿಯಾ ಆಟಗಾರರ ಫೋಟೊಗಳ ಜತೆಗೆ ಭಾರತದ ಬಾವುಟ ಪ್ರದರ್ಶಿಸೋ ಮೂಲಕ ವಿಶ್ವಕಪ್‌ ಫೈನಲ್‌ ಪಂದ್ಯ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ನಾಳೆ ಕೂಡ ಬೆಂಗಳೂರಿನ ಪ್ರಮುಖ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಲಿವೆ.

Exit mobile version