Site icon Vistara News

Farmer Dasara | ಶಿವಮೊಗ್ಗದಲ್ಲಿ ಸುಧಾರಿತ ಕೃಷಿ ಮೇಲೆ ಬೆಳಕು ಚೆಲ್ಲಿದ ರೈತ ದಸರಾ

Raita Dasara

ಶಿವಮೊಗ್ಗ: ಪರಸ್ಪರ ಪೂರಕವಾಗಿರುವ ಸಮಗ್ರ ಬೆಳೆ ಬೆಳೆಯುವುದರಿಂದ ಸಾಕಷ್ಟು ಲಾಭವಿದ್ದು, ಅದಕ್ಕೆ ತಕ್ಕಂತೆ ಮಾರುಕಟ್ಟೆ ವಿಸ್ತರಣೆಯ ಜಾಣತನ ಇರಬೇಕು ಎಂದು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಕವಿತಾ ಮಿಶ್ರಾ ಹೇಳಿದರು. ಅವರು ಗುರುವಾರ ಕುವೆಂಪು ರಂಗಮಂದಿರದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿದ್ದ ರೈತ ದಸರಾ (Farmer Dasara) ಶಿವಮೊಗ್ಗದಲ್ಲಿ ಸುಧಾರಿತ ಕೃಷಿ ಮೇಲೆ ಬೆಳಕು ಚೆಲ್ಲಿದ ರೈತ ದಸರಾ ಉದ್ಘಾಟಿಸಿ ಮಾತನಾಡಿದರು.

ಹವಾಮಾನ ಆಧಾರಿತ ಬೆಳೆಯಿಂದ ರೈತರಿಗೆ ಲಾಭ ಹೆಚ್ಚು, ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಕೃಷಿಯಲ್ಲಿ ಕಷ್ಟವಿದೆ. ಆದರೆ ಸುಖವೂ ಇದೆ. ಇದನ್ನು ತಿಳಿದು ಮುಂದುವರಿಯಬೇಕು ಎಂದು ಹೇಳಿದರು. ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಮಾತನಾಡಿದರು. ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರೈತ ದಸರಾ ಸಮಿತಿ ಅಧ್ಯಕ್ಷ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಡಾ. ಡಿ. ನಾಗೇಂದ್ರ, ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ, ರೈತ ಮುಖಂಡ ಕೆ.ಟಿ. ಗಂಗಾಧರ್, ಪಾಲಿಕೆ ಸದಸ್ಯರಾದ ಎಚ್.ಸಿ. ಯೋಗೀಶ್, ಮಂಜುಳಾ ಶಿವಣ್ಣ, ಸತ್ಯನಾರಾಯಣ ರಾಜು, ಸುವರ್ಣ ಶಂಕರ್, ವಿಶ್ವನಾಥ್, ಸುರೇಖ ಮುರಳೀಧರ್ ಮೊದಲಾದವರು ಇದ್ದರು.

ರೈತ ದಸರಾ ಸಮಿತಿ ಅಧ್ಯಕ್ಷ ಡಿ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಡಾ. ಡಿ.ನಾಗೇಂದ್ರ, ರೈತ ಮುಖಂಡ ಕೆ.ಟಿ.ಗಂಗಾಧರ್, ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೀಶ್, ವಿಶ್ವನಾಥ್, ಸತ್ಯನಾರಾಯಣ ರಾಜು, ಮಂಜುಳಾ ಶಿವಣ್ಣ, ಸುವರ್ಣಾ ಶಂಕರ್, ಸುರೇಖಾ ಮುರಳೀಧರ್ ಮತ್ತಿತರರು ಉಪಸ್ಥಿತರಿದ್ದರು.

ಎತ್ತಿನಗಾಡಿ, ಟಿಲ್ಲರ್, ಟ್ರಾಕ್ಟರ್ ಆಕರ್ಷಣೆ…
ರೈತ ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೂ ಮುನ್ನ ಸೈನ್ಸ್ ಮೈದಾನದಿಂದ ಎತ್ತಿನ ಹಾಡಿ, ಟಿಲ್ಲರ್, ಟ್ರ್ಯಾಕ್ಟರ್ಗಳೊಂದಿಗೆ ರೈತರಿಂದ ಅಕರ್ಷಕ ಜಾಥಾ ಹಮ್ಮಿಕೊಳ್ಳಲಾಗಿತ್ತು. ರೈತರು ಸಿಂಗಾರಗೊಂಡಿದ್ದ ಎತ್ತಿನಗಾಡಿ, ಟಿಲ್ಲರ್ ಮತ್ತು ಟ್ರ್ಯಾಕ್ಟರ್ ಗಳ ಮೂಲಕ ಮೆರವಣಿಗೆ ನಡೆಸಿದರು. ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಸೇರಿದಂತೆ ಗಣ್ಯರು ಜಾಥಾದಲ್ಲಿ ಪಾಲ್ಗೊಂಡಿದ್ದರು. ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಮೂಲಕ ರೈತರನ್ನು ಸ್ವಾಗತಿಸಲಾಯಿತು. ಸೈನ್ಸ್ ಮೈದಾನದಿಂದ ಕರ್ನಾಟಕ ಸಂಘ, ಅಮೀರ್ ಅಹಮ್ಮದ್ ವೃತ್ತ, ಗೋಪಿ ವೃತ್ತ, ಮಹಾವೀರ ವೃತ್ತದ ಮೂಲಕ ಕುವೆಂಪು ರಂಗಮಂದಿರಕ್ಕೆ ತೆರಳಿತು.

ರೈತರಿಗೆ ಉಚಿತ ಆರೋಗ್ಯ ತಪಾಸಣೆ
ರೈತ ದಸರಾ ಅಂಗವಾಗಿ ಕುವೆಂಪು ರಂಗಮಂದಿರದಲ್ಲಿ ಗುರುವಾರ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ ಕೂಡ ನಡೆಯಿತು. ಜಾಥಾದಲ್ಲಿ ಪಾಲ್ಗೊಂಡಿದ್ದ ನೂರಾರು ರೈತರು, ಜನರಿಗೆ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು. ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ತಪಾಸಣೆ ನಡೆಸಿ ಸಲಹೆ-ಸೂಚನೆಗಳನ್ನು ನೀಡಿದರು.

ಗಮನ ಸೆಳೆದ ಕಲಾ ದಸರಾ ಜಾಥಾ
ಕಲಾ ದಸರಾ ಅಂಗವಾಗಿ ಗುರುವಾರ ಸಂಜೆ ವಿನೋಬನಗರ ಕರಿಯಣ್ಣ ಬಿಲ್ಡಿಂಗ್ನಿಂದ ಫ್ರೀಡಂಪಾರ್ಕ್ವರೆಗೆ ಹಮ್ಮಿಕೊಂಡಿದ್ದ ಜಾಥಾದಲ್ಲಿ 10ಕ್ಕೂ ಅಧಿಕ ಕಲಾ ತಂಡಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.ಧರ್ಮಸ್ಥಳ ಸಂಘ, ಮಹಿಳಾ ಸಂಘ ಸೇರಿದಂತೆ ವಿವಿಧ ವಾದ್ಯ ಮೇಳ, ಡೊಳ್ಳು ಕುಣಿತ, ವೀರಗಾಸೆ, ನಗಾರಿ, ತಮಟೆ ದೇವಿ ವೇಷಧಾರಿಗಳು ಕಲಾ ದಸರಾ ಜಾಥಾಕ್ಕೆ ಮೆರಗು ನೀಡಿದರು. ಸಂಜೆ ನಗರದ ವಿವಿಧ ಕಲಾವಿದರಿಂದ ಜಾನಪದ ನೃತ್ಯ ಗೀತೆಗಳ ಸಂಗಮಕ್ಕೆ ಫ್ರೀಡಂಪಾರ್ಕ್ ಸಾಕ್ಷಿಯಾಯಿತು.

ಇದನ್ನೂ ಓದಿ | Mysuru Dasara | ಮೈಸೂರು ದಸರಾ ಉತ್ಸವಕ್ಕೆ ರಾಷ್ಟ್ರಪತಿ ಮುರ್ಮು ಚಾಲನೆ

Exit mobile version