Site icon Vistara News

Murder Case: ಪತಿ ಜತೆ ಸಂಸಾರ ಮಾಡಲೊಪ್ಪದ ಮಗಳನ್ನೇ ಸುಟ್ಟುಹಾಕಿದ ಪಾಪಿ ತಂದೆ!

Murder Case

ಕೋಲಾರ: ಮದುವೆಯಾದ ಮೇಲೆ ಗಂಡನೊಂದಿಗೆ ಸಂಸಾರ ಮಾಡಲೊಪ್ಪದ ಮಗಳನ್ನು ತಂದೆಯೇ ಬೆಂಕಿ ಹಚ್ಚಿ ಸುಟ್ಟುಹಾಕಿರುವ ಘಟನೆ ಮುಳಬಾಗಿಲು ತಾಲೂಕು ಮುಸ್ಟೂರು ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಿದ ನಂತರ ಮಗಳು ಕಾಣೆಯಾಗಿದ್ದಾಳೆಂದು ಆತನೇ ಪೊಲೀಸರಿಗೆ ದೂರು ನೀಡಿದ್ದಾನೆ. ಆದರೆ, ತನಿಖೆ ವೇಳೆ ತಂದೆಯಿಂದಲೇ ಕೃತ್ಯ ನಡೆದಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಅರ್ಚಿತಾ ಕೊಲೆಯಾದ ಯುವತಿ. ರವಿ ಕೊಲೆ ಮಾಡಿದ ಆರೋಪಿ ತಂದೆ. ಅರ್ಚಿತಾ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ತಂದೆ, ಬೇರೊಬ್ಬ ವ್ಯಕ್ತಿಯ ಜತೆ ಮದುವೆ ಮಾಡಿದ್ದಾನೆ. ಆದರೆ, ಪತಿಯೊಂದಿಗೆ ಸಂಸಾರ ಮಾಡಲು ಮಗಳು ನಿರಾಕರಿಸಿದ್ದರಿಂದ ಆಕೆಯನ್ನು ಮೇ 21ರಂದು ಕೊಂದು ಸುಟ್ಟುಹಾಕಿದ್ದಾನೆ. ಬಳಿಕ ಆತನೇ ಅಕ್ಟೋಬರ್‌ 17 ರಂದು ನಂಗಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಪೊಲೀಸರು ತನಿಖೆ ನಡೆಸಿದಾಗ ತಂದೆಯೇ ಅಮಾನವೀಯ ಕೃತ್ಯ ಎಸಗಿರುವುದು ಬಯಲಾಗಿದೆ.

ದುಡ್ಡಿನ ಆಸೆಗಾಗಿ 40 ವರ್ಷದ ವ್ಯಕ್ತಿ ಜತೆ ಮದುವೆ

ಅರ್ಚಿತಾ ಅಪ್ರಾಪ್ತ ವಯಸ್ಸಿನ ಬಾಲಕಿಯಾಗಿದ್ದರೂ ಆಕೆಯ ತಂದೆ ದುಡ್ಡಿನ ಆಸೆಗೆ ಬಿದ್ದು 40 ವರ್ಷದ ವ್ಯಕ್ತಿ ಜತೆ ಮದುವೆ ಮಾಡಿದ್ದ ಎನ್ನಲಾಗಿದೆ. ವರನಿಂದ ಸುಮಾರು 13 ಲಕ್ಷ ಹಣ ಪಡೆದು ಮಗಳಿಗೆ ವಿವಾಹ ಮಾಡಿದ್ದ. ಆದರೆ, ಇನ್ನೂ ಚಿಕ್ಕ ವಯಸ್ಸು ಆಗಿದ್ದರಿಂದ ಮಗಳು ಇನ್ನೂ ಓದಬೇಕು, ಗಂಡನ ಜತೆ ಸಂಸಾರ ಮಾಡಲಾರೆ ಎಂದು ಖಡಾಖಂಡಿತವಾಗಿ ಹೇಳಿದ್ದಾಳೆ. ಇದರಿಂದ ಕೋಪಗೊಂಡ ತಂದೆ ರವಿ, ಆಕೆಯನ್ನು ಗಂಡನ ಮನೆಯಿಂದ ಕರೆದುಕೊಂಡು ಬಂದು ಆತ ಕೆಲಸ ಮಾಡುತ್ತಿದ್ದ ಶೆಡ್‌ನಲ್ಲಿ ಕೂಡಿಹಾಕಿದ್ದ. ನಂತರ ಅಳಿಯ ಮಣಿ ಜತೆ ಸೇರಿ ಬಾಲಕಿಗೆ ಬೆಂಕಿ ಹಚ್ಚಿ ಕೊಂದಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ | ವಾಮಾಚಾರದ ಶಂಕೆ; 30 ವರ್ಷದ ಆದಿವಾಸಿ ಮಹಿಳೆಯನ್ನು ಜೀವಂತವಾಗಿ ಸುಟ್ಟ ನೀಚರು

ಆರೋಪಿ ರವಿ ಈ ಹಿಂದೆ ಮಹಿಳೆ ಕೊಲೆ ಪ್ರಕರಣದಲ್ಲಿ ತಂದೆ ಜತೆ 14 ವರ್ಷ ಜೈಲಿಗೆ ಹೋಗಿ ಬಂದಿದ್ದ. ನಂತರ ಆತನ ವಿರುದ್ಧ ಮತ್ತೊಂದು ಕೊಲೆ ಆರೋಪ ಕೂಡ ಕೇಳಿಬಂದಿದೆ. ಇದೀಗ ಮಗಳನ್ನು ಕೂಡ ಕೊಂದಿರುವ ರವಿ, ಆತನ ಮೊದಲ ಹೆಂಡತಿ ಕೃಷ್ಣಮ್ಮ, 2ನೇ ಹೆಂಡತಿ ರಾಜಮ್ಮ, ಅಳಿಯ ಮಣಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version