Site icon Vistara News

Fire Accident: ದೇವರಾಯನದುರ್ಗ ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ; ಅಗ್ನಿಜ್ವಾಲೆಗೆ ಸಿಲುಕಿ ಬಾಲಕಿ ಸಾವು‌, ಮತ್ತಿಬ್ಬರಿಗೆ ಗಾಯ

suicide case

ತುಮಕೂರು: ಜಾತ್ರೆಗೆ ತೆರಳುತ್ತಿದ್ದ ವೇಳೆ ಬೆಟ್ಟದಲ್ಲಿ ಉರಿಯುತ್ತಿದ್ದ ಬೆಂಕಿಯು (Fire Accident) ಆಕಸ್ಮಿಕವಾಗಿ ತಗುಲಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ತುಮಕೂರು ತಾಲೂಕಿನ ದೇವರಾಯನದುರ್ಗ ಬೆಟ್ಟದಲ್ಲಿ ನಡೆದಿದೆ.

ಮಾನಸ (15) ಮೃತ ದುರ್ದೈವಿ. ಈಕೆ ಕೊರಟಗೆರೆ ತಾಲೂಕಿನ ನಾಗೇನಹಳ್ಳಿ ಗ್ರಾಮದ ನಿವಾಸಿಯಾಗಿದ್ದಾಳೆ. ಜಾತ್ರೆ ಹಿನ್ನೆಲೆಯಲ್ಲಿ ಬೆಟ್ಟ ಹತ್ತುತ್ತಿದ್ದ ಮಾನಸಳಿಗೆ ಬೆಂಕಿ ತಗುಲಿದೆ. ಇದೇ ವೇಳೆ ಬೆಟ್ಟದಲ್ಲಿ ಸಾಗಿ ಬರುತ್ತಿದ್ದ ಇನ್ನೂ ಇಬ್ಬರಿಗೆ ಸುಟ್ಟ ಗಾಯವಾಗಿದೆ ಎನ್ನಲಾಗಿದೆ. ಇವರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ತೀವ್ರವಾಗಿ ಗಾಯಗೊಂಡ ಮಾನಸಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಭೇಟಿ ನೀಡಿದ್ದು, ಬೆಟ್ಟದಲ್ಲಿ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸುವಲ್ಲಿ ನಿರತರಾಗಿದ್ದಾರೆ. ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ದೇವರಾಯನದುರ್ಗ ಬೆಟ್ಟದಲ್ಲಿ ಕಿಡಿಗೇಡಿಗಳು ಹಾಕಿರುವ ಬೆಂಕಿ ಎಲ್ಲೆಡೆ ವ್ಯಾಪಿಸಿತ್ತು ಎನ್ನಲಾಗಿದ್ದು, ಈ ವೇಳೆ ಅದೇ ಮಾರ್ಗವಾಗಿ ಹೋಗುತ್ತಿದ್ದ ಬಾಲಕಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Sugar production : ಸಕ್ಕರೆ ದಾಸ್ತಾನಿಗೆ ಯಾವುದೇ ಕೊರತೆ ಇಲ್ಲ: ಕೇಂದ್ರ ಸರ್ಕಾರ

25ಕ್ಕೂ ಹೆಚ್ಚು ಗುಡಿಸಲುಗಳಿಗೆ ಆಕಸ್ಮಿಕ ಬೆಂಕಿ

ರಾಮನಗರ: ಜಿಲ್ಲೆಯ ಕೂಟಗಲ್ ಹೋಬಳಿಯ ರತ್ನಗಿರಿ ಹಾಡಿಯಲ್ಲಿ ವಾಸವಿರುವ ಇರುಳುಗಳ ಸಮುದಾಯದವರ 25ಕ್ಕೂ ಹೆಚ್ಚು ಗುಡಿಸಲುಗಳಿಗೆ ಆಕಸ್ಮಿಕ ಬೆಂಕಿ ತಗುಲಿ (Fire Accident) ಸುಟ್ಟು ಭಸ್ಮವಾಗಿದ್ದು, ಆಕಸ್ಮಿಕ ಬೆಂಕಿಗೆ ಮೇಕೆ ಮರಿಗಳು, ಪಡಿತರ ಹಾಗೂ ದಾಖಲೆಗಳು ಭಸ್ಮವಾಗಿದ್ದರೆ, ಮನೆಯಲ್ಲಿದ್ದ ಹಿರಿಯರು ಮಕ್ಕಳಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ.

ಈ ಸಮುದಾಯದವರು ಸುಮಾರು ಐವತ್ತು ವರ್ಷಗಳಿಂದ ವಾಸ ಮಾಡುತ್ತಿದ್ದರು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸುವಷ್ಟರಲ್ಲಿ ಎಲ್ಲವೂ ಭಸ್ಮವಾಗಿವೆ. ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಗಾಗಿ ಈ ಸಮುದಾಯದವರು ಮನವಿ ಮಾಡುತ್ತಲೇ ಬಂದಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ, ಮನವಿಗೆ ಸ್ಪಂದಿಸದ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಉಳಿದವರು ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮನೆಯಲ್ಲಿ ಹಿರಿಯ ಜೀವಗಳಿಗೆ, ಮಕ್ಕಳಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Lokayukta Raid : ಮಧ್ಯಂತರ ಜಾಮೀನು ಸಿಕ್ಕಿದ ಬೆನ್ನಲ್ಲೇ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಪ್ರತ್ಯಕ್ಷ!

ಬೆಂಕಿ ಬಿದ್ದಿರುವುದು ತಿಳಿಯುತ್ತಿದ್ದಂತೆ ಮನೆಯಲ್ಲಿದ್ದ ವೃದ್ಧರು ಹಾಗೂ ಮಕ್ಕಳು ಎಚ್ಚೆತ್ತುಕೊಂಡು ಹೊರಗೆ ಓಡಿ ಬಂದಿದ್ದಾರೆ. ಆದರೆ, ಮನೆಗಳಲ್ಲಿ ಕಟ್ಟಿಹಾಕಿದ್ದ ಜಾನುವಾರುಗಳ ಸಹಿತ ಪ್ರಾಣಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಪುನಃ ಒಳಗೆ ಹೋಗಿ ಅವುಗಳನ್ನು ಬಿಡಿಸಿಕೊಂಡು ಬರುವ ಪ್ರಯತ್ನವನ್ನೂ ಮಾಡಿದ್ದಾರೆ. ಈ ವೇಳೆ ಕೆಲವು ಜಾನುವಾರುಗಳನ್ನು ಸಣ್ಣ ಪುಟ್ಟ ಗಾಯಗಳ ಹೊರತಾಗಿ ಕಾಪಾಡಲಾಗಿದೆ. ಆದರೆ, ಇದೇ ವೇಳೆ ಕೆಲವು ಮಕ್ಕಳಿಗೆ ಗಾಯಗಳಾಗಿವೆ ಎನ್ನಲಾಗಿದೆ.

Exit mobile version