Site icon Vistara News

ಇಂದು ಸಿದ್ದರಾಮೋತ್ಸವ ಸಂಭ್ರಮ, ದಾವಣಗೆರೆಗೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

Multi-Specialty Hospital

ದಾವಣಗೆರೆ: ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಆಚರಿಸುತ್ತಿರುವ ಸಿದ್ದರಾಮೋತ್ಸವ (Siddaramotsava) ಸಮಾವೇಶದ ಸಲುವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾವಣಗೆರೆಗೆ ಆಗಮಿಸಿದ್ದಾರೆ.

ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಮಾಡಿರುವ ಸಿದ್ದರಾಮಯ್ಯ ಅವರು ಇಂದು ಬೆಳಿಗ್ಗೆ 10 ಗಂಟೆಗೆ ಗೆಸ್ಟ್ ಹೌಸ್ ನಿಂದ ಹೊರಡಲಿದ್ದಾರೆ. ದಾವಣಗೆರೆಯ ದುರ್ಗಾಂಬ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ೭೫ನೇ ಹುಟ್ಟುಹಬ್ಬವನ್ನು ಇಂದು ಆಚರಿಸುತ್ತಿದ್ದಾರೆ. ಅಭಿಮಾನಿಗಳು ಸಿದ್ದರಾಮೋತ್ಸವದ ಸಂಭ್ರಮದಲ್ಲಿದ್ದಾರೆ.

ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಸ್ವಾಗತ ಕೋರಲು ತಯಾರಿ ನಡೆದಿದೆ. ಅಮೃತ ಮಹೋತ್ಸವದಲ್ಲಿ ಭಾಗವಹಿಸಿದ ಬಳಿಕ, ಸಂಜೆ‌ 4.30ಕ್ಕೆ ಕಾಗಿನೆಲೆಯ ಶಾಖಾ ಮಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತರಳಬಾಳು ಮಠ, ಮುರುಘಮಠಕ್ಕೂ ಸಿದ್ದರಾಮಯ್ಯ ಅವರು ಭೇಟಿ ನೀಡಲಿದ್ದಾರೆ. ಬಳಿಕ ಅಲ್ಲಿಂದ ರಾತ್ರಿ 8ಕ್ಕೆ ಹೊರಟು, 10 ಗಂಟೆ ಸುಮಾರಿಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಚುನಾವಣೆಗೆ ಸಜ್ಜಾಗಲು ರಾಹುಲ್‌ ಗಾಂಧಿ ಸೂಚನೆ: ಸಿದ್ದರಾಮೋತ್ಸವದಲ್ಲಿ ಭಾಗವಹಿಸಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, ನಿನ್ನೆ ರಾತ್ರಿ ನಡೆಸಿದ ಪಕ್ಷದ ಸಭೆಯಲ್ಲಿ, ಚುನಾವಣೆಗೆ ಸಜ್ಜಾಗಲು ಕರೆ ನೀಡಿದ್ದಾರೆ.
” ರಾಜ್ಯದಲ್ಲಿ ಸಂಘಟನೆ ಚೆನ್ನಾಗಿದೆ. ಆದರೆ ನಾಯಕರು ತಮ್ಮ ಭಿನ್ನಾಭಿಪ್ರಾಯ ಮರೆತು ಚುನಾವಣೆಗೆ ಸಜ್ಜಾಗಬೇಕು. 150 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಇಟ್ಟುಕೊಳ್ಳಬೇಕು. ವೈಯಕ್ತಿಕ ಪ್ರತಿಷ್ಠೆಗೋಸ್ಕರ ಆಂತರಿಕ ಕಚ್ಚಾಟ ಬೇಡ. ಸದ್ಯ ರಾಜ್ಯ ಬಿಜೆಪಿ ಸಂಘಟನೆಯಲ್ಲಿ ದುರ್ಬಲವಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಹಲವು ಗಂಭೀರ ಆರೋಪಗಳಿವೆ. ಅದನ್ನು ಜನರಿಗೆ ಮುಟ್ಟಿಸುವಂತೆ ಪ್ರಚಾರ ಮಾಡಿ ಎಂದು ರಾಹುಲ್‌ ಗಾಂಧಿ ಸೂಚಿಸಿದ್ದಾರೆ.

ಸಿದ್ದರಾಮೋತ್ಸವಕ್ಕೆ ಕ್ಷಣಗಣನೆ ಶುರು: ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿರುವ, ಕಾಂಗ್ರೆಸ್‌ ಪಾಳೆಯದಲ್ಲಿ ಸಂಚಲನಕ್ಕೆ ಕಾರಣವಾಗಿರುವ ಸಿದ್ದರಾಮೋತ್ಸವಕ್ಕೆ (Siddaramotsava) ಇನ್ನು ಗಂಟೆಗಳ ಲೆಕ್ಕಾಚಾರವಷ್ಟೇ ಬಾಕಿ ಇದೆ. ಅದ್ಧೂರಿ ವೇದಿಕೆ ಸಿದ್ಧಗೊಂಡಿದೆ. ರಾಜ್ಯಾದ್ಯಂತ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರಾದಿಯಾಗಿ ಅಭಿಮಾನಿಗಳು ಇಲ್ಲಿಗೆ ದೌಡಾಯಿಸುತ್ತಿದ್ದಾರೆ. ರಾಜಕೀಯ ತಂತ್ರಗಾರಿಕೆಯಲ್ಲಿ ನಿಪುಣರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಲಪ್ರದರ್ಶನದ ವೇದಿಕೆ ಎಂದೇ ಹಿಂಬಾಲಕರು ಬಿಂಬಿಸುತ್ತಿರುವ ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಹ ಆಗಮಿಸುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕಳೆದ ಒಂದು ತಿಂಗಳಿನಿಂದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಸಿದ್ದರಾಮೋತ್ಸವ ಕಾರ್ಯಕ್ರಮವು ಕಾಂಗ್ರೆಸ್‌ ಪಕ್ಷದೊಳಗೆ ಒಂದು ಮಟ್ಟಿನ ಅಸಮಾಧಾನಕ್ಕೂ ಕಾರಣವಾಗಿತ್ತು. ಈ ಬಗ್ಗೆ ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸಹ ಪರೋಕ್ಷ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಪಕ್ಷದ ಕಾರ್ಯಕ್ರಮ ಇದಲ್ಲ ಎಂಬ ಹೇಳಿಕೆ ಸಹ ಒಂದು ಸಮಯದಲ್ಲಿ ವ್ಯಕ್ತವಾಗಿತ್ತು. ಆದರೆ, ಇದೆಲ್ಲವನ್ನೂ ಮೀರಿ, ಈಗ ಪಕ್ಷದ ಎಲ್ಲ ಮುಖಂಡರೂ ಆಗಮಿಸಿ ಒಟ್ಟಿಗೇ “ಸಿದ್ದರಾಮೋತ್ಸವ”ವನ್ನು ಒಗ್ಗಟ್ಟಾಗಿ ಹಾಗೂ ಅದ್ಧೂರಿಯಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ವೇದಿಕೆ ಸಿದ್ಧವಾಗಿದೆ.

೫ ಲಕ್ಷ ಜನರ ನಿರೀಕ್ಷೆ, ವಾಟರ್‌ ಪ್ರೂಫ್‌ ಪೆಂಡಾಲ್‌

ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದ್ದು, ಎರಡು ಲಕ್ಷ ಜನ‌ ಕೂರಲು ಬೃಹತ್ ಪೆಂಡಾಲ್‌ ವ್ಯವಸ್ಥೆ ಮಾಡಲಾಗಿದೆ. 8 ಲಕ್ಷ ಚದರ ಅಡಿ ವಾಟರ್ ಪ್ರೂಫ್ ಶಾಮಿಯಾನ ಹಾಕಲಾಗಿದೆ. ಹೀಗಾಗಿ ಒಂದು ವೇಳೆ ಮಳೆ ಬಂದರೂ ನಿರಾಂತಕವಾಗಿ ಕಾರ್ಯಕ್ರಮ ಸಾಗಲಿದೆ.

೨.೫ ಲಕ್ಷ ಜನಕ್ಕೆ ಆಸನ ವ್ಯವಸ್ಥೆ

ಸುಮಾರು ಎರಡೂವರೆ ಲಕ್ಷ ಜನ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದ್ದು, ಇನ್ನೂ ಎರಡೂವರೆ ಲಕ್ಷ ಜನ ಹೊರಗೆ ನಿಂತು ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. 42X200 ಅಡಿಯ ಪ್ರಮುಖ ಬೃಹದಾಕಾರದ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ.

ವೇದಿಕೆ ಮೇಲೆ ನೂರಾರು ಗಣ್ಯರಿಗೆ ಆಸನ!

8 ಅಡಿ ಎತ್ತರವಿರುವ ಪ್ರಮುಖ ವೇದಿಕೆ ಮೇಲೆ 200 ಮಂದಿ ಗಣ್ಯರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಪ್ರಮುಖ ವೇದಿಕೆಯ ಎರಡು ಬದಿಯಲ್ಲಿ 48*30 ಅಡಿಯ ಸಣ್ಣ ವೇದಿಕೆಗಳ ನಿರ್ಮಾಣ ಮಾಡಲಾಗಿದೆ. ಈ ಎರಡು ವೇದಿಕೆಗಳು ನಾಲ್ಕು ಅಡಿ ಎತ್ತರ ಇವೆ. ವೇದಿಕೆಗಳಲ್ಲಿ ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು ಹಾಗೂ ಪ್ರಮುಖ ನಾಯಕರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಒಟ್ಟು ನಾಲ್ಕು ನೂರಕ್ಕೂ ಹೆಚ್ಚು ಮಂದಿ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.

ಸಿದ್ದರಾಮೋತ್ಸವ ವೀಕ್ಷಣೆಗೆ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದ್ದು, 16X30 ಅಡಿಯ 12 ಎಲ್‌ಇಡಿ ಸ್ಕ್ರೀನ್, 8X12 ಅಡಿಯ 12 ಎಲ್‌ಇಡಿ ಸ್ಕ್ರೀನ್ ಅಳವಡಿಕೆ ಮಾಡಲಾಗಿದೆ. ವೇದಿಕೆಯ ಹಿಂಭಾಗದ ಮಧ್ಯಭಾಗದಲ್ಲಿ 16X38 ಅಡಿಯ ಎಲ್‌ಇಡಿ ಸ್ಕ್ರೀನ್ ಅನ್ನು ಅಳವಡಿಕೆ ಮಾಡಲಾಗಿದೆ.

ಮೈಸೂರ್‌ ಪಾಕ್‌ ಸಹಿತ ಭರ್ಜರಿ ಊಟ

ಸಿದ್ದರಾಮೋತ್ಸವಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಊಟದ ಮೆನುವಿನಲ್ಲಿ ಮೈಸೂರ್ ಪಾಕ್, ಬಿಸಿಬೇಳೆಬಾತ್, ಪಲಾವ್, ಮೊಸರನ್ನ, ಮೊಸರು ಬಜ್ಜಿ ಇವೆ. ವೇದಿಕೆ ಸಮೀಪವೇ ಊಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಅಡುಗೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಡುಗೆ ಮನೆಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಮೈಸೂರ್ ಪಾಕ್‌ಗಳ ತಯಾರಿ ಆರಂಭವಾಗಿದೆ. ಮಂಗಳವಾರ ಬೆಳಗ್ಗೆ 9.30ರಿಂದಲೇ ಊಟದ ವ್ಯವಸ್ಥೆ ಮಾಡಲಾಗುತ್ತದೆ, 320 ಕೌಂಟರ್‌ಗಳ ಮೂಲಕ ಕಾರ್ಯಕ್ರಮ ಮುಗಿಯುವವರೆಗೆ ನಿರಂತರವಾಗಿ ದಾಸೋಹ ನಡೆಯಲಿದೆ.

Exit mobile version