Site icon Vistara News

Fraud Case: ಏಷ್ಯನ್‌ ಪೇಂಟ್ಸ್‌ ಹೆಸರಲ್ಲಿ ನಕಲಿ ಪೇಂಟ್‌ ಮಾರಾಟ ಮಾಡುತ್ತಿದ್ದ ಉದ್ಯಮಿ ಬಂಧನ

#image_title

ಬೆಂಗಳೂರು: ಉದ್ಯಮಿಯೊಬ್ಬ ತನ್ನ ಕಂಪೆನಿ ಬ್ಯುಸಿನೆಸ್ ವರ್ಕ್ ಆಗಲಿಲ್ಲ ಎಂಬ ಕಾರಣಕ್ಕೆ ಪ್ರತಿಷ್ಠಿತ ಬ್ರ್ಯಾಂಡ್‌ನ ಪೇಂಟ್‌ ಕಂಪನಿಯ ನಕಲು (Fraud Case) ಮಾಡಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಈಗ ಆರೋಪಿಯನ್ನು ಬಂಧಿಸಲಾಗಿದೆ. ರಾಜಸ್ಥಾನ ಮೂಲದ ಕಿನ್ನಿಲಾಲ್ ಬಂಧಿತ ಆರೋಪಿ.

ಈತ ಕಳೆದ ಹತ್ತು ವರ್ಷದಿಂದ ಪ್ರತಿಷ್ಠಿತ ಕಂಪನಿಯಾದ ಏಷ್ಯನ್ ಪೇಂಟ್ಸ್ (Asian Paints) ಅನ್ನು ನಕಲಿ ಮಾಡಿ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ವಿವಿ ಪುರಂ ಪೊಲೀಸರ ಕಾರ್ಯಾಚರಣೆ ವೇಳೆ ನಕಲಿ ಬ್ರ್ಯಾಂಡ್ ಕಳ್ಳಾಟ ಬಯಲಾಗಿದೆ. ಪೇಂಟ್ ನಕಲು ಮಾಡಿ ಡಿಸ್ಟ್ರಿಬ್ಯೂಟ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಕಳೆದ ಹತ್ತು ವರ್ಷದಿಂದ ಯಾರ ಗಮನಕ್ಕೂ ಬಾರದಂತೆ ಡಿಸ್ಟ್ರಿಬ್ಯೂಟ್‌ ಮಾಡುತ್ತಿದ್ದ ಈತ ಮೊದಲಿಗೆ ತನ್ನದೇ ಲೋಕಲ್ ಬ್ರ್ಯಾಂಡ್‌ನಲ್ಲಿ ವ್ಯವಹಾರ ಆರಂಭಿಸಿದ್ದ, ಆದರೆ, ಅಷ್ಟರ ಮಟ್ಟಿಗೆ ಯಶಸ್ಸು ಕಾಣದ ಕಾರಣಕ್ಕೆ ಪ್ರತಿಷ್ಠಿತ ಕಂಪನಿಯ ನಕಲು ಮಾಡಿ ವಿತರಣೆ ಮಾಡುತ್ತಿದ್ದ. ಇನ್ನು ಏಷ್ಯನ್ ಪೇಂಟ್ಸ್ ಕಂಪನಿಗೆ ವಂಚನೆಯಾದ ಬಗ್ಗೆ ಮಾಹಿತಿ ತಿಳಿದು ಬಂದಾಗ ಹುಡುಕಿ ಹೊರಟಾಗ ಕಂಪನಿ ಹೆಸರಿನಲ್ಲಿ ನಕಲಿ ಪೇಂಟಿಂಗ್ ಮಾರಾಟದ ಜಾಲ ಪತ್ತೆ ಆಗಿದೆ.

ಹೀಗಾಗಿ ಏಷ್ಯನ್ ಪೇಂಟ್ಸ್ ಕಂಪೆನಿಯವರು ಈ ಬಗ್ಗೆ ವಿ.ವಿ ಪುರಂ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಹಿನ್ನೆಲೆಯಲ್ಲಿ ಮೊದಲಿಗೆ ಸ್ಯಾಂಪಲ್ ಪಡೆದು ಪರಿಶೀಲನೆ ನಡೆಸಿದಾಗ ಕಳ್ಳಾಟ ಬಯಲಾಗಿದೆ. ಬಳಿಕ ವಿದ್ಯಾರಣ್ಯಪುರದ ಕಚೇರಿಗೆ ಪೊಲೀಸರು ದಾಳಿ ನಡೆಸಿ 10 ಲಕ್ಷ ರೂಪಾಯಿ ಮೌಲ್ಯದ ನಕಲಿ ಪೇಂಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಭವಿಷ್ಯ ಹೇಳುವ ನೆಪದಲ್ಲಿ 73 ಗ್ರಾಂ ಚಿನ್ನದ ಗಟ್ಟಿ ದೋಚಿದ ನಕಲಿ ಜ್ಯೋತಿಷಿಗಳು

ಇಲ್ಲಿನ ಕುಂಬಾರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನ (Dharmarayaswamy Temple) ಸಮೀಪ ಚಿನ್ನದ ವ್ಯಾಪಾರಿಯೊಬ್ಬರಿಗೆ ನಕಲಿ ಜ್ಯೋತಿಷಿಗಳು (Fake astrologer) ಭವಿಷ್ಯ ಹೇಳುವ ನೆಪದಲ್ಲಿ ಆತನ ಬಳಿಯಿದ್ದ 73 ಗ್ರಾಂ ಚಿನ್ನದ ಗಟ್ಟಿಯನ್ನು ದೋಚಿ ಪರಾರಿ (Theft Case) ಆಗಿರುವ ಘಟನೆ ಕುಂಬಾರಪೇಟೆ ಸಮೀಪ ನಡೆದಿದೆ.

ಓಂ ಗೋಲ್ಡ್ ಎಂಬ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಮನ್ ಸರ್ಕಾರ್ (20) ಎಂಬಾತನ ಬಳಿ ಬಂಗಾಲಿ ಬಾಬ ಎಂದು ಹೇಳಿದ ನಯವಂಚಕರು ಕೈ ರೇಖೆ ನೋಡಿ ಭವಿಷ್ಯ ಹೇಳುವುದಾಗಿ ನಂಬಿಸಿ ವಂಚಿಸಿದ್ದಾರೆ. ಕಳೆದ ಮಾರ್ಚ್‌ 27ರ ಮಧ್ಯಾಹ್ನ 3.30ರ ಸುಮಾರಿಗೆ ಮಾಲೀಕನ ಅಣತಿಯಂತೆ 75 ಗ್ರಾಂ ಚಿನ್ನವನ್ನು ಟೆಸ್ಟಿಂಗ್ ಮಾಡಿಸುವ ಸಲುವಾಗಿ ಸುಮನ್‌ ಚಿನ್ನದ ಗಟ್ಟಿಯನ್ನು ಬಾಲಾಜಿ ಗೋಲ್ಡ್ ಟೆಸ್ಟಿಂಗ್ ಅಂಗಡಿಗೆ ತೆಗೆದುಕೊಂಡು ಹೋಗಿದ್ದರು.

ಟೆಸ್ಟ್‌ ಮಾಡಿಸಿ ಸುಮನ್‌ ವಾಪಸ್‌ ಬರುವಾಗ ಗಾಣಿಗರ ಸಿ ಲೇನ್ ಹತ್ತಿರ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು, ಇವರದ್ದೇ ಬಂಗಾಳಿ ಭಾಷೆಯಲ್ಲಿ ಪರಿಚಯ ಮಾಡಿಕೊಂಡಿದ್ದಾರೆ. ನಾವುಗಳು ಬಂಗಾಲಿ ಜ್ಯೋತಿಷಿಗಳು ನಿನ್ನ ಕೈ ರೇಖೆಯನ್ನು ನೋಡಿ ಭವಿಷ್ಯ ಹೇಳುತ್ತೇವೆ ಎಂದು ನಂಬಿಸಿದ್ದಾರೆ. ಬಳಿಕ ನಮ್ಮೊಂದಿಗೆ ಬಂದರೆ ಕೈ ನೋಡಿ ಒಳ್ಳೆಯ ಮಂತ್ರಿಸಿದ ದಾರವನ್ನು ಕೊಡುವುದಾಗಿ ಹೇಳಿದ್ದಾರೆ.

ನಕಲಿ ಜ್ಯೋತಿಷಿಗಳ ಮಾತಿಗೆ ಮರುಳಾದ ಸುಮನ್‌ ಅವರೊಟ್ಟಿಗೆ ಹೋಗಿದ್ದಾರೆ. ಕುಡಿಯಲು ಯಾವುದೋ ನೀರನ್ನು ತೀರ್ಥ ಎಂದು ನೀಡಿದ್ದು ಬಳಿಕ ಏನಾಗುತ್ತಿದೆ ಎಂದು ತಿಳಿಯದ ಸುಮನ್‌, ನಕಲಿ ಜ್ಯೋತಿಷಿಗಳು ಹೇಳಿದ ಹಾಗೇ ಕೇಳಲು ಶುರು ಮಾಡಿದ್ದಾರೆ. ಬಳಿ ಇಟ್ಟುಕೊಂಡಿದ್ದ ಚಿನ್ನದ ಗಟ್ಟಿಯನ್ನು ಕೊಡು ಎಂದು ಕೇಳಿದ ಕೂಡಲೇ ಅರಿವಿಗೆ ಬಾರದೆ ತಂದಿದ್ದ 75 ಗ್ರಾಂ ಚಿನ್ನವನ್ನು ಕೊಟ್ಟಿದ್ದಾರೆ. ನಂತರ ವಂಚಕರು ಈತನಿಗೆ 100 ಹೆಜ್ಜೆ ಮುಂದಕ್ಕೆ ಹೋಗಿ ವಾಪಸ್‌ ಬರುವಂತೆ ತಿಳಿಸಿದ್ದಾರೆ. ಅವರು ಹೇಳಿದಂತೆ ಸ್ವಲ್ಪ ಮುಂದೆ ನಡೆದು ಹೋಗಿ ಹಿಂದಿರುಗಿ ನೋಡುವಷ್ಟರಲ್ಲಿ, ಆ ವ್ಯಕ್ತಿಗಳು ಪರಾರಿ ಆಗಿದ್ದಾರೆ. ಆಗಲೇ ಸುಮನ್‌ಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಬಾಲಕನ ಬಟ್ಟೆ ಬಿಚ್ಚಿ, ಥಳಿಸಿ ಜೈ ಶ್ರೀರಾಮ್​ ಎನ್ನುವಂತೆ ಬೆದರಿಸಿದ ಹುಡುಗರು; ವಿಡಿಯೊ ವೈರಲ್ ಮಾಡದಂತೆ ಪೊಲೀಸ್ ಸೂಚನೆ

ಸದ್ಯ ನಕಲಿ ಜ್ಯೋತಿಷಿಗಳ ವಿರುದ್ಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಕಳ್ಳರಿಗೆ ಬಲೆ ಬೀಸಿದ್ದಾರೆ.

Exit mobile version