Site icon Vistara News

ಬೆಳಗಾವಿ ಅಧಿವೇಶನ | ಸ್ವಾತಂತ್ರ್ಯ ಹೋರಾಟಗಾರರ ಮಾಸಿಕ ಗೌರವಧನ ರೂ. 15 ಸಾವಿರಕ್ಕೆ ಹೆಚ್ಚಳ: ಸಚಿವ ಅಶೋಕ್‌

Minister R Ashok

ಸುವರ್ಣ ಸೌಧ, ಬೆಳಗಾವಿ: ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಸಿಕವಾಗಿ ನೀಡಲಾಗುತ್ತಿರುವ ರೂ. 10 ಸಾವಿರ ಗೌರವ ಧನವನ್ನು 15 ಸಾವಿರ ರೂ.ಗಳಿಗೆ ಹೆಚ್ಚಿಸುವ ಬಗ್ಗೆ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ. ಹಣಕಾಸು ಇಲಾಖೆ ಒಪ್ಪಿಗೆ ಬಂದ ತಕ್ಷಣ ಗೌರವಧನಲ್ಲಿ ಹೆಚ್ಚಳ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

ಗುರುವಾರ ವಿಧಾನ ಪರಿಷತ್ ಕಲಾಪದಲ್ಲಿ ಶಾಸಕ ಯು.ಬಿ.ವೆಂಕಟೇಶ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಕಂದಾಯ ಸಚಿವರು ಉತ್ತರಿಸಿದರು.

ಮಾಸಿಕ ಪಿಂಚಣಿ ಪಡೆಯುತ್ತಿರುವ ಸ್ವಾತಂತ್ರ್ಯ ಹೋರಾಟಗಾರರು ಮರಣ ಹೊಂದಿದರೆ, ಅವರ ವಿಧವಾ ಪತ್ನಿ ಅಥವಾ ಪತಿಗೆ ಅಥವಾ ಅವರ ಅಪ್ರಾಪ್ತ ವಯಸ್ಕ ಮಕ್ಕಳಿಗೆ ಕುಟುಂಬ ಪಿಂಚಣಿಯನ್ನು ನೀಡಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ವಿಧವಾ ಪತ್ನಿ ಅಥವಾ ಪತಿಗೆ ರಾಜ್ಯದ ವ್ಯಾಪ್ತಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸಲು ಜೀವಿತಾವಧಿಗೆ ಉಚಿತ ಬಸ್ ಪಾಸ್ ವಿತರಿಸಲಾಗುತ್ತಿದೆ. ಸ್ವಾತಂತ್ರ್ಯ ಯೋಧರು ಮರಣ ಹೊಂದಿದಲ್ಲಿ ಅವರ ಶವಸಂಸ್ಕಾರಕ್ಕಾಗಿ 4 ಸಾವಿರ ರೂ.ಗಳನ್ನು ಶವಸಂಸ್ಕಾರ ಭತ್ಯೆಯಾಗಿ ನೀಡಲಾಗುತ್ತಿದೆ ಎಂದರು.
ಶಾಸಕ ಯು.ಬಿ.ವೆಂಕಟೇಶ ಬೇರೆ ರಾಜ್ಯಗಳ ಮಾದರಿಯಲ್ಲಿ ರೂ.25,000 ಗೌರವ ಧನವನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಭ್ರಷ್ಟ ನೆಹರೂ ಎಂದಿದ್ದಕ್ಕೆ ಪರಿಷತ್‌ನಲ್ಲಿ ಹಂಗಾಮ: ಒಂಟಿಯಾದ ರವಿಕುಮಾರ್; ಕ್ಷಮೆ ಯಾಚನೆ

Exit mobile version