Site icon Vistara News

Namma Metro: ಅ.9ರಿಂದ ನೇರಳೆ ಮಾರ್ಗದಲ್ಲಿ ಪೂರ್ಣ ಪ್ರಮಾಣದ ಮೆಟ್ರೋ ಸೇವೆ

Namma metro rail

ಬೆಂಗಳೂರು: ನೇರಳೆ ಮಾರ್ಗದ ಮೆಟ್ರೋ (Namma Metro) ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ಗುಡ್ ನ್ಯೂಸ್ ನೀಡಿದೆ. ನೇರಳೆ ಮಾರ್ಗದ ಚಲ್ಲಘಟ್ಟ-ವೈಟ್‌ಫೀಲ್ಡ್‌ ನಡುವೆ ಪೂರ್ಣ ಪ್ರಮಾಣದ ವಾಣಿಜ್ಯ ಸೇವೆ ಅ.9ರಂದು ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದ್ದು, ಇದರಿಂದ ವೈಟ್‌ಫೀಲ್ಡ್‌ ಭಾಗಕ್ಕೆ ತೆರಳುವ ಲಕ್ಷಾಂತರ ಐಟಿ ಉದ್ಯೋಗಿಗಳಿಗೆ ನೆರವಾಗಲಿದೆ.

ಬೈಯಪ್ಪನಹಳ್ಳಿ- ಕೆಆರ್‌.ಪುರ ನಡುವೆ 2.1 ಕಿ.ಮೀ ಮಾರ್ಗದ ಕಾಮಗಾರಿ ಬಾಕಿ ಇದ್ದ ಹಿನ್ನೆಲೆಯಲ್ಲಿ ನೇರಳೆ ಮಾರ್ಗದಲ್ಲಿ ಪೂರ್ಣ ಪ್ರಮಾಣದ ವಾಣಿಜ್ಯ ಸೇವೆ ಆರಂಭವಾಗಿರಲಿಲ್ಲ. ಇತ್ತೀಚೆಗೆ ಬಾಕಿ ಕಾಮಗಾರಿ ಮುಗಿದು, ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗದ ಸುರಕ್ಷತಾ ಪರಿಶೀಲನೆ ನಡೆಸಿ ವಾಣಿಜ್ಯ ಸೇವೆ ಆರಂಭಕ್ಕೆ ಹಸಿರು ನಿಶಾನೆ ನೀಡಿದ್ದರು. ಹೀಗಾಗಿ ಸೋಮವಾರದಿಂದ ಈ ಮಾರ್ಗವು ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಲಿದೆ.

ಸೋಮವಾರ ಬೆಳಗ್ಗೆ 5ರಿಂದ ವಾಣಿಜ್ಯ ಸೇವೆ

ಕೆಂಗೇರಿಯಿಂದ ಚಲ್ಲಘಟ್ಟ ಮತ್ತು ಬೈಯಪ್ಪನಹಳ್ಳಿಯಿಂದ ಕೆಆರ್‌ ಪುರಂವರೆಗಿನ ನೇರಳೆ ವಿಸ್ತೃತ ಮಾರ್ಗ ಸೋಮವಾರದಿಂದ ಪ್ರಯಾಣಿಕರಿಗೆ ಮುಕ್ತವಾಗಲಿದೆ. 2.1 ಕಿ.ಮೀ.ನ ಕೃಷ್ಣರಾಜಪುರದಿಂದ ಬೈಯಪ್ಪನಹಳ್ಳಿವರೆಗೆ ಹಾಗೂ 2.1 ಕಿ.ಮೀನ ಕೆಂಗೇರಿಯಿಂದ ಚಲ್ಲಘಟ್ಟವರೆಗಿನ ಮಾರ್ಗ ಅ.9ರ ಬೆಳಗ್ಗೆ 5ರಿಂದ ಸೇವೆಗೆ ಲಭ್ಯವಾಗಲಿದೆ. ಈ ಎರಡು ಮಾರ್ಗಗಳನ್ನು ತೆರೆಯುವುದರೊಂದಿಗೆ ಮೆಟ್ರೋ ಜಾಲವು 69.66 ಕಿ.ಮೀ ದಿಂದ 73.81 ಕಿ.ಮೀ.ಗೆ ಏರಿಕೆಯಾಲಿದೆ ಎಂದು BMRCL ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಯ ಸಮಯ

1) ವೈಟ್‌ಫೀಲ್ಡ್‌ನಿಂದ ಪಟ್ಟಂದೂರು ಅಗ್ರಹಾರದ ನಡುವೆ 10 ನಿಮಿಷ

2) ಮೈಸೂರು ರಸ್ತೆಯಿಂದ ಚಲಘಟ್ಟಕ್ಕೆ 10 ನಿಮಿಷ

3) ಪಟಂದೂರು ಅಗ್ರಹಾರದಿಂದ ಮೈಸೂರು ರಸ್ತೆಗೆ 5 ನಿಮಿಷ

4) ನಾಡಪ್ರಭು ಕೆಂಪೇಗೌಡ ನಿಲ್ದಾಣ(ಮೆಜೆಸ್ಟಿಕ್‌ನಿಂದ) ಎಂ.ಜಿ ರಸ್ತೆಗೆ ಬೆಳಗಿನ ಪೀಕ್ ಸಮಯದಲ್ಲಿ 3 ನಿಮಿಷಕ್ಕೆ ಒಂದು ರೈಲು

ಇದನ್ನೂ ಓದಿ | Caste Census: ಜಾತಿ ಗಣತಿಯಿಂದ ಜಾತಿ ದ್ವೇಷ ಸೃಷ್ಟಿಸಲು ಹೊರಟಿದ್ದಾರೆ ಎಂದ ಎಚ್‌ಡಿಕೆ

ವಿಳಂಬವಾಗಿದ್ದಕ್ಕೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶ

ನೇರಳೆ ಮಾರ್ಗದಲ್ಲಿ ಪೂರ್ಣ ಪ್ರಮಾಣದ ವಾಣಿಜ್ಯ ಸೇವೆ ಆರಂಭಕ್ಕೆ ವಿಳಂಬ ಆಗುತ್ತಿರುವ ಬಗ್ಗೆ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ, ಯಾವುದೇ ವಿಐಪಿ ವ್ಯಕ್ತಿಗಳಿಗೆ ಕಾಯದೇ ವಾಣಿಜ್ಯ ಸೇವೆ ಶುರು ಮಾಡುವಂತೆ ಸೂಚಿಸಿತ್ತು.

ಈ ಬಗ್ಗೆ ಬೆಂಗಳೂರಿನ ಎಲ್ಲ ಸಂಸದರು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು. ಈ ಸಂಬಂಧ ಕರ್ನಾಟಕ ಸರ್ಕಾರದ ಕಾರ್ಯದರ್ಶಿಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪತ್ರ ಬರೆದಿದ್ದು, ಅಕ್ಟೋಬರ್ 9ರಿಂದ ಮೆಟ್ರೋ ರೈಲು ಸಂಚಾರ ಆರಂಭಿಸುವಂತೆ ಸೂಚನೆ ನೀಡಿದೆ. ಇದಕ್ಕೆ ಯಾವುದೇ ಅಧಿಕೃತ ಉದ್ಘಾಟನಾ ಸಮಾರಂಭದ ಅಗತ್ಯವಿಲ್ಲ. ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಸಂಚಾರವನ್ನು ಕೂಡಲೇ ಆರಂಭಿಸಿ ಎಂದು ತಿಳಿಸಿದೆ. ಹೀಗಾಗಿ, ಚಲ್ಲಘಟ್ಟ – ಕೆಂಗೇರಿ, ಬೈಯಪ್ಪನಹಳ್ಳಿ – ಕೆಆರ್ ಪುರದ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗುತ್ತಿದೆ.

ಮಾರ್ಚ್ 25ರಂದು ಕೆ.ಆರ್.ಪುರ- ವೈಟ್ ಫೀಲ್ಡ್ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಚಾಲನೆ ನೀಡಿದ್ದರು. ಆದರೆ, ವೈಟ್‌ಫೀಲ್ಡ್ – ಬೈಯಪ್ಪನಹಳ್ಳಿ‌ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಕೆ.ಆರ್. ಪುರದಲ್ಲಿ ಇಳಿದು ಇತರೆ ಸಾರಿಗೆಯನ್ನು ಅವಲಂಬಿಸಬೇಕಿತ್ತು. ಈಗ ನೇರಳೆ ಮಾರ್ಗದಲ್ಲಿ ಪೂರ್ಣ ಪ್ರಮಾಣದಲ್ಲಿ ರೈಲು ಕಾರ್ಯಾಚರಣೆ ನಡೆಯಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಹೀಗಾಗಿ ಇನ್ನು ಈ ಮಾರ್ಗದಲ್ಲಿ ಪ್ರತಿನಿತ್ಯ 1 ಲಕ್ಷವರೆಗೆ ಪ್ರಯಾಣಿಕರು ಸಂಚರಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಸಂಸದ ತೇಜಸ್ವಿ ಸೂರ್ಯ ಟ್ವೀಟ್‌

“ಯಾವುದೇ ವಿಳಂಬವಿಲ್ಲದೆ ಮತ್ತು ಅಧಿಕೃತ ಸಮಾರಂಭಕ್ಕಾಗಿ ಯಾವುದೇ ವಿಐಪಿಗಾಗಿ ಕಾಯದೆ ನೇರಳೆ ಮಾರ್ಗದಲ್ಲಿ (#PurpleLine) ಸೇವೆ ಪ್ರಾರಂಭಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಔಪಚಾರಿಕ ಉದ್ಘಾಟನೆಯ ದಿನಾಂಕವನ್ನು ಕೋರಿ ಕರ್ನಾಟಕ ಸರ್ಕಾರ ಮತ್ತು ಬಿಎಂಆರ್‌ಸಿಎಲ್‌ ವತಿಯಿಂದ ಅಕ್ಟೋಬರ್ 5 ರಂದು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತ ಉದ್ಘಾಟನೆಯನ್ನು ರದ್ದುಗೊಳಿಸಿದ್ದಲ್ಲದೆ, ನಾಳೆಯಿಂದಲೇ ಸೇವೆಗಳನ್ನು ಪ್ರಾರಂಭಿಸುವಂತೆ ಭಾನುವಾರ (ಅಕ್ಟೋಬರ್‌ 8) ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ” ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್‌ ಮಾಡಿದ್ದಾರೆ.

ಇದನ್ನU‌ ಓದಿ | Israel Palestine War: ಇಸ್ರೇಲ್‌ನಲ್ಲಿನ ಕನ್ನಡಿಗರಿಗಾಗಿ ರಾಜ್ಯ ಸರ್ಕಾರದಿಂದ ಹೆಲ್ಪ್‌ಲೈನ್‌

ಮೊದಲು ಸಂಚಾರ ಪ್ರಾರಂಭಿಸಿ

ನಾಗರಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದು ಬೆಂಗಳೂರಿನ ಎಲ್ಲ ಸಂಸದರು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ, “ನೀವು ಮೊದಲು ಸಂಚಾರವನ್ನು ಆರಂಭಿಸಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಇನ್ನು ಎರಡು ವಾರಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ” ಎಂದು ಕೇಂದ್ರದಿಂದ ಬಂದ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

Exit mobile version