Site icon Vistara News

Gali janardhan reddy | ಬಿಜೆಪಿಯೇ ನನ್ನ ಕುಟುಂಬ, ರಾಜಕೀಯ ಜೀವನ: ಗಾಲಿ ಜನಾರ್ದನ ರೆಡ್ಡಿ

Gali janardhan reddy

ಗದಗ: ಭಾರತೀಯ‌ ಜನತಾ ಪಕ್ಷವೇ ನನ್ನ ಇಡೀ ರಾಜಕೀಯ ಜೀವನವಾಗಿದೆ. ಕಳೆದ 30 ವರ್ಷಗಳಿಂದ ಭಾಜಪವೇ ನನ್ನ ಕುಟುಂಬ, ಲಾಲ್ ಕೃಷ್ಣ ಅಡ್ವಾಣಿ ಮತ್ತು ರಾಮಮಂದಿರ ಕಾರಣದಿಂದ ಎಮೋಷನಲ್ ಆಗಿ ರಾಜಕೀಯಕ್ಕೆ ಬಂದಿದ್ದೇನೆ. ನನ್ನ ವಿಚಾರದಲ್ಲಿ ಪಕ್ಷದ ಹಿರಿಯರು‌ ಏನು ತೀರ್ಮಾನ ಮಾಡುತ್ತಾರೆ ಎಂಬುದನ್ನು ನೋಡುತ್ತಿದ್ದೇನೆ ಎಂದು ಹೇಳುವ ಮೂಲಕ ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆ ವಿಚಾರಕ್ಕೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Gali janardhan reddy) ತೆರೆ ಎಳೆದಿದ್ದಾರೆ.

ನಗರದ ಐತಿಹಾಸಿಕ ಭೀಷ್ಮಕೆರೆಯಲ್ಲಿರುವ 116 ಅಡಿ ಎತ್ತರದ ಬಸವೇಶ್ವರ ಪ್ರತಿಮೆಯನ್ನು ಮಂಗಳವಾರ ವೀಕ್ಷಿಸಿ ಮಾತನಾಡಿದ ಅವರು, 12 ವರ್ಷಗಳ ಕಾಲ ನಾನು ಮನೆಯಲ್ಲಿ ಇದ್ದೆ. ಮಕ್ಕಳ ಶಿಕ್ಷಣ, ಮದುವೆ ಎಲ್ಲವೂ ಅಯಿತು. ಮನೆಯಲ್ಲಿ ಕುಳಿತುಕೊಳ್ಳೋ ವಯಸ್ಸೂ ನನ್ನದಲ್ಲ. ಸಾರ್ವಜನಿಕ ಬದುಕಲ್ಲಿ ಬರಬೇಕೆನ್ನುವುದು ನನ್ನ ಸ್ಪಷ್ಟ ತೀರ್ಮಾನ. ಹೀಗಾಗಿ ನಾನು ಗಂಗಾವತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ | ʼದಲಿತ ವಿರೋಧಿ ಕಾಂಗ್ರೆಸ್‌ʼ: ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನದಂದು ದಾಳಿ ನಡೆಸಿದ ಬಿಜೆಪಿ

ಶ್ರೀರಾಮುಲು ಜತೆ ಭಿನ್ನಾಭಿಪ್ರಾಯದ ಬಗ್ಗೆ ಪ್ರತಿಕ್ರಿಯಿಸಿ, ಶ್ರೀರಾಮುಲು ಮತ್ತು ಜನಾರ್ದನರೆಡ್ಡಿ ನಡುವೆ ಬಿರುಕು ಎಂಬುವುದು ಕನಸು, ನಮ್ಮ ನಡುವೆ ಯಾವತ್ತೂ‌ ಬಿರುಕು‌ ಎಂಬ ಪ್ರಶ್ನೆಯೇ ಬರುವುದಿಲ್ಲ. ಬೇರೆ ರಾಜಕೀಯ ವಿಚಾರಗಳನ್ನು ಹೇಳಲು ಇದು ಸರಿಯಾದ ಸಮಯವಲ್ಲ. ನಾನು ಯಾವ ಮಾರ್ಗದಲ್ಲಿ ಹೋಗುವುದು ಬಿಡುವುದು ಎಂಬುವುದು ಬಸವೇಶ್ವರನಿಗೆ ಬಿಟ್ಟದ್ದು ಎಂದು ಹೇಳಿದರು.

ಗಂಗಾವತಿಯಲ್ಲಿ ಹೊಸ ಮನೆ ಹಾಗೂ ಕಚೇರಿಯನ್ನು ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ರಾಜಕೀಯಕ್ಕೆ ರೀ ಎಂಟ್ರಿ ನೀಡುತ್ತಾರೆ ಹಾಗೂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ನಂತರ ಬಿಜೆಪಿ ನಾಯಕರು, ರೆಡ್ಡಿ ಜತೆಗೆ ಅಂತರ ಕಾಯ್ದುಕೊಂಡಿರುವುದರಿಂದ ಅವರು ಹೊಸ ಪ್ರಾದೇಶಿಕ ಪಕ್ಷ ಸ್ಥಾಪಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು.

ಇದನ್ನೂ ಓದಿ | ಬೊಮ್ಮಾಯುಲ್ಲಾ ಖಾನ್, ಗಡ್ಕರಿ ಶೇಕ್: ಸಿದ್ರಾಮುಲ್ಲಾ ಖಾನ್‌ ಎಂದ ಸಿ.ಟಿ. ರವಿಗೆ ಕಾಂಗ್ರೆಸ್‌ ತಿರುಗೇಟು

Exit mobile version