Site icon Vistara News

ಗೋ ಮೂತ್ರ, ಪಂಚಗವ್ಯ ಮೂಲಕ ಕ್ಯಾನ್ಸರ್‌ಗೆ ಚಿಕಿತ್ಸೆ

ಆಯುರ್ವೇದ ಶಿಬಿರ

ಗದಗ: ಮಾರಕ ಕ್ಯಾನ್ಸರ್‌ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಹೊಸ ಹೊಸ ಪ್ರಯೋಗ, ಆವಿಷ್ಕಾರ ನಡೆಯುತ್ತಲೇ ಇದೆ. ಆಯುರ್ವೇದ ಪದ್ಧತಿ ಮೂಲಕ ಕ್ಯಾನ್ಸರ್‌ಗೆ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು ಎನ್ನುತ್ತಾರೆ ಪರಿಣತರು.

ಇದನ್ನೂ ಓದಿ | ಚಹಾಕ್ಕೆ ಬೆಲ್ಲ ಬೆರೆಸಿ ಕುಡೀತಿದ್ದೀರಾ?-ಈ ಅಭ್ಯಾಸ ಬೇಡ ಎನ್ನುತ್ತಿದ್ದಾರೆ ಆಯುರ್ವೇದ ತಜ್ಞರು !

ಗದಗ್‌ನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಪಂಚಗವ್ಯ ಮತ್ತು ಸಾಂಪ್ರದಾಯಿಕ ಪದ್ಧತಿ ಆಧಾರಿತ ತಪಾಸಣೆ, ಉಚಿತ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು.

ಪಂಚಗವ್ಯದ ಮೂಲಕ ಮಂಡಿ ನೋವು, ಅಸ್ತಮಾ, ಸಕ್ಕರೆ ಕಾಯಿಲೆ, ಥೈರಾಯ್ಡ್ ಮತ್ತು ಮುಟ್ಟಿನ ಸಮಸ್ಯೆ, ಸ್ತನ ಕ್ಯಾನ್ಸರ್ ಸಮಸ್ಯೆಗಳಿಗೆ ಉಚಿತ ತಪಾಸಣೆ, ಪರಿಹಾರ ಸೂಚಿಸಲು ಈ ಶಿಬಿರ ನಡೆಸಲಾಗಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಇಬ್ಬರು ಕ್ಯಾನ್ಸರ್ ರೋಗಿಗಳು ಸೇರಿದಂತೆ ಸುಮಾರು 150 ಜನರು ಶಿಬಿರದಲ್ಲಿ ಭಾಗವಹಿಸಿ ಚಿಕಿತ್ಸೆ ಹಾಗೂ ಸಲಹೆ ಪಡೆದುಕೊಂಡಿದ್ದಾರೆ.

ದೇಸಿ ವೈದ್ಯ ಪದ್ಧತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಶಿಬಿರ ಆಯೋಜನೆ ಮಾಡಲಾಗಿತ್ತು. ಕ್ಯಾನ್ಸರ್‌ಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಆಯುರ್ವೇದದಲ್ಲಿ ಅವಕಾಶ ಇದೆ. ಯೋಗ, ಪಂಚಗವ್ಯ ಔಷಧ ಸೇರಿದಂತೆ 11 ಹಂತಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಪ್ರತಿ ಹಂತವನ್ನು ಪಾಲಿಸಿಕೊಂಡು ಬಂದಲ್ಲಿ ರೋಗ ಮುಕ್ತರಾಗಬಹುದು ಎಂದು ಶಿಬಿರದ ವೈದ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.  

ಚಿಕಿತ್ಸೆಯ ಉಸ್ತುವಾರಿಯನ್ನು ಡಾ. ಡಿ.ಪಿ.ರಮೇಶ್ ವಹಿಸಿದ್ದರು. ಪಂಚಗವ್ಯದ ಆಧಾರದಲ್ಲಿ ಆಯುರ್ವೇದ ನಿಂತಿದ್ದು, ಹಾಲು, ತುಪ್ಪ, ಮೊಸರು, ಗೋಮೂತ್ರ, ಗೋಮಯ ಎಂಬ ಪಂಚಗವ್ಯಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ದೇಸಿ ತಳಿಯ ಗೋವಿನ ಮೂತ್ರದ ಜೊತೆಗೆ ಸರಿಯಾದ ಪ್ರಮಾಣದ ದ್ರವ್ಯ ಸೇರಿಸಿ ಔಷಧ ತಯಾರಾಗುತ್ತದೆ. ಪಂಚಗವ್ಯದ ಔಷಧ ಬಳಕೆಯಿಂದ ನೂರು ಪ್ರತಿಶತ ರೋಗ ಗುಣಮುಖವಾಗಿವೆ ಎಂದು ಡಾ. ಗೊಳಪ್ಪ ಹೇಳಿದ್ದಾರೆ.

ಇದನ್ನೂ ಓದಿ | Health Tips: ಸೆರೆಲ್ಸ್‌, ಜ್ಯೂಸ್‌ಗಳೂ ಹೃದಯ ಕಾಯಿಲೆ ತರಬಲ್ಲವು; ಯಾವುದಕ್ಕೂ ಸೇವನೆ ಮಿತವಾಗಿರಲಿ

Exit mobile version