Site icon Vistara News

ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಹಿ ಸುದ್ದಿ; ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಸರ್ಕಾರ ಆದೇಶ

Two days special casual leave for state government employees

ಬೆಂಗಳೂರು: ನೇರಪಾವತಿ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಜ್ಯದ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೇರ ಪಾವತಿ, ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ (equal pay for equal work), ದಿನಗೂಲಿ, ಕ್ಷೇಮಾಭಿವೃದ್ಧಿಯಡಿ ಡಿ.ವೃಂದದ ನೌಕರರ ವೇತನ ಪಾವತಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಸಂಬಂಧ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರಪಾವತಿ, ಗುತ್ತಿಗೆ/ಹೊರಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ, ದಿನಗೂಲಿ, ಕ್ಷೇಮಾಭಿವೃದ್ಧಿಯಡಿ ಡಿ ವೃಂದದ ಪೌರಕಾರ್ಮಿಕರು, ಲೋಡರ್ಸ್, ಕ್ಲೀನರ್ಸ್, ಹೆಲ್ಬರ್ ವಾಲ್‌ಮನ್ ಮುಂತಾದ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಈ ನೌಕರರು ಸಾರ್ವಜನಿಕರಿಗೆ ಅತಿ ಅಗತ್ಯ ಸೇವೆಗಳನ್ನು ಪೂರೈಸುವ ಕಾರ್ಯವನ್ನು ನಿರ್ವಹಿಸುತ್ತಿರುತ್ತಾರೆ ಎಂದಿದ್ದಾರೆ.

ಈ ನೌಕರರ ವೇತನವನ್ನು ಸ್ಥಳೀಯ ಸಂಸ್ಥೆಯ ನಿಧಿಯಿಂದ ಪ್ರಥಮ ಆದ್ಯತೆಯ ಮೇಲೆ ಪ್ರತಿ ತಿಂಗಳು ಪಾವತಿಸಬೇಕಿರುತ್ತದೆ, ಆದರೆ, ಬಹುತೇಕ ಮಹಾನಗರಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸದರಿ ಸಿಬ್ಬಂದಿಗೆ ಸಕಾಲದಲ್ಲಿ ವೇತನವನ್ನು ಪಾವತಿಸದ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ಗುತ್ತಿಗೆದಾರರ ಬಿಲ್ಲುಗಳನ್ನು ಪಾವತಿಸುವುದಕ್ಕಾಗಿ ವಿನಿಯೋಗಿಸುತ್ತಿರುವುದನ್ನು ಗಮನಿಸಿದೆ. ಇದರಿಂದಾಗಿ ಪ್ರಸ್ತಾಪಿತ ನೌಕರರು ಆರ್ಥಿಕವಾಗಿ ಸಂಕಷ್ಟದಿಂದ ಬಳಲುತ್ತಿರುವುದು ನಿರ್ದೇಶನಾಲಯದ ಗಮನಕ್ಕೆ ಬಂದಿರುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Old Pension Scheme: ಹಳೇ ಪಿಂಚಣಿಗೆ ಅರ್ಜಿ ಸಲ್ಲಿಸಿಲ್ಲವೇ? ಹಾಗಿದ್ದರೆ ಹೀಗೆ ಮಾಡಿ

ಆದ್ದರಿಂದ ಮಹಾನಗರಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರಪಾವತಿ, ಗುತ್ತಿಗೆ/ಹೊರಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ, ದಿನಗೂಲಿ, ಕ್ಷೇಮಾಭಿವೃದ್ಧಿಯಡಿ ಕರ್ತವ್ಯ ನಿರ್ವಹಿಸುತ್ತಿರುವ ಡಿ ವೃಂದದ ನೌಕರರ ವೇತನವನ್ನು ಸಾಮಾನ್ಯ ನಿಧಿಯಿಂದ ಪ್ರಥಮ ಆದ್ಯತೆ ಮೇರೆಗೆ ಪರಿಗಣಿಸಿ, ಪ್ರತಿ ತಿಂಗಳ 5ನೇ ತಾರೀಖಿನೊಳಗಾಗಿ ಕಡ್ಡಾಯವಾಗಿ ಪಾವತಿಸಲು ಎಲ್ಲಾ ಆಯುಕ್ತರು/ಪೌರಾಯುಕ್ತರು/ ಮುಖ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ. ತಪ್ಪಿದಲ್ಲಿ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಎಚ್ಚರಿಸಿದ್ದಾರೆ.

Exit mobile version