Site icon Vistara News

Road Accident : ಹಾಸನದಲ್ಲಿ ಹಿಟ್‌ ಆ್ಯಂಡ್ ರನ್‌ಗೆ ಮಾವ-ಅಳಿಯ ಬಲಿ; ಮಗಳು ಗಂಭೀರ

road Accident.. lorry hit car

ಹಾಸನ: ಹಿಟ್‌ ಆ್ಯಂಡ್ ರನ್‌ ಕೇಸ್‌ಗೆ (Hit & Run Case) ಮಾವ-ಅಳಿಯ ಬಲಿಯಾಗಿದ್ದರೆ, ಮಗಳು ತೀವ್ರ ಗಾಯಗೊಂಡಿದ್ದಾರೆ. ಹಾಸನ (Hasana News) ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ, ಶೆಟ್ಟಿಹಳ್ಳಿ ಬೈಪಾಸ್‌ನಲ್ಲಿ ಅಪಘಾತ (Road Accident) ಸಂಭವಿಸಿದೆ.

ಅರಸೀಕೆರೆ ತಾಲೂಕಿನ ನಾಗೇನಹಳ್ಳಿ ಗ್ರಾಮದ ಮಧು (35), ಬೇಲೂರು ತಾಲೂಕಿನ ದೇವಿಹಳ್ಳಿ ಗ್ರಾಮದ ಜವರಯ್ಯ (65) ಮೃತ ದುರ್ದೈವಿ.

ಬೆಂಗಳೂರಿನಿಂದ ಪತ್ನಿ, ಮಾವನ ಜತೆಗೆ ಕಾರಿನಲ್ಲಿ ಮಧು ಬರುತ್ತಿದ್ದರು. ಶೆಟ್ಟಿಹಳ್ಳಿ ಬೈಪಾಸ್ ಬಳಿ ಬರುವಾಗ ಕಾರಿನ ಟೈಯರ್‌ ಪಂಕ್ಚರ್ ಆಗಿತ್ತು. ಹೀಗಾಗಿ ರಸ್ತೆ ಬದಿ ಕಾರು ನಿಲ್ಲಿಸಿ ಮಧು ಟೈಯರ್ ಚೇಂಜ್ ಮಾಡುತ್ತಿದ್ದರು. ಈ ವೇಳೆ ಬೆಂಗಳೂರು ಕಡೆಯಿಂದ ವೇಗವಾಗಿ ಬಂದು ಲಾರಿಯು ಕಾರಿಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಮಧು ಸ್ಥಳದಲ್ಲೇ ಮೃತಪಟ್ಟಿದ್ದರು. ಇತ್ತ ತೀವ್ರವಾಗಿ ಗಾಯಗೊಂಡಿದ್ದ ಮಾವ ಜವರಯ್ಯ ಅವರನ್ನು ಸ್ಥಳೀಯರು ಚನ್ನರಾಯಪಟ್ಟಣ ಆಸ್ಪತ್ರೆಗೆ ಸೇರಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮಧು ಪತ್ನಿ ಗೀತಾಗೆ ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಇನ್ನೂ ಲಾರಿ ನಿಲ್ಲಿಸದೆ ಚಾಲಕ ಎಸ್ಕೇಪ್ ಆಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತ್ತರ ಮಾಡಲಾಗಿದೆ.

ಪರಾರಿ ಆಗಿರುವ ಚಾಲಕನಿಗೆ ಹುಡುಕಾಟ ನಡೆಸಲಾಗುತ್ತಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ; 6 ಸಾವಿರ ರೂ. ವ್ಯಯಿಸಿ ಬಾಂಬ್‌ ತಯಾರಿ, ಆನ್‌ಲೈನ್‌ನಲ್ಲೇ ಖರೀದಿ!

ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ; ಫೋಟೋಗ್ರಾಫರ್‌ ಸ್ಥಳದಲ್ಲೇ ಸಾವು

ತ್ರದುರ್ಗ: ಮದುವೆ ಸಮಾರಂಭಕ್ಕೆ ಫೋಟೋಗ್ರಫಿ (Photography) ಮಾಡಲು ತೆರಳಿದ್ದ ಫೋಟೋಗ್ರಾಫರ್‌ರೊಬ್ಬರು ಮರಳಿ ಬರುವಾಗ ನಡೆದ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಚಿಕ್ಕಮ್ಮನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 150 ಎ ರ ಬಳಿ (Road Accident) ನಡೆದಿದೆ.

ಚಳ್ಳಕೆರೆ ನಗರದ ಚಿತ್ರಯ್ಯನಹಟ್ಟಿಯ ಫೋಟೋಗ್ರಾಫರ್ ಅಭಿಷೇಕ್ (30) ಮೃತಪಟ್ಟ ಯುವಕ. ಈತ ಮೊಳಕಾಲ್ಮೂರು ತಾಲೂಕಿನ ರಾಯದುರ್ಗದಲ್ಲಿ ನಡೆದ ವಿವಾಹ ಕಾರ್ಯಕ್ರಮವೊಂದಕ್ಕೆ ಫೋಟೋ ತೆಗೆಯಲು ಹೋಗಿ ಮರಳಿ ನಗರಕ್ಕೆ ಕಾರಿನಲ್ಲಿ ವಾಪಸ್ ಬರುವಾಗ ಗುರುವಾರ ತಡರಾತ್ರಿ 12 ಗಂಟೆ ಸುಮಾರಿಗೆ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ ಎಂದು ತಿಳಿದುಬಂದಿದೆ. ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ: Board Exams: ಬೋರ್ಡ್‌ ಎಕ್ಸಾಂ ವ್ಯಾಲ್ಯುವೇಶನ್‌; 3 ದಿನದ ಗಡುವು ಆದೇಶ ವಾಪಸ್‌

ತಲೆ ಮೇಲೆ ಹರಿದ ಲಾರಿ; ಅರಣ್ಯ ಇಲಾಖೆ ಸಿಬ್ಬಂದಿ ಸಾವು, ಮತ್ತೊಬ್ಬ ಗಂಭೀರ

ವೇಗವಾಗಿ ಬಂದ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟರೆ, ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಮಿರ್ಜಾ ರಸ್ತೆಯಲ್ಲಿ ಘಟನೆ (Road Accident) ನಡೆದಿದೆ.

ರಾಕೇಶ್ (28) ಮೃತ ದುರ್ದೈವಿ. ಮತ್ತೋರ್ವ ಅರಣ್ಯ ಇಲಾಖೆ ಸಿಬ್ಬಂದಿ ವಿನಯ್ ಎಂಬಾತನಿಗೆ ಗಂಭೀರ ಗಾಯವಾಗಿದೆ. ಇವರಿಬ್ಬರು ಆನೇಕಲ್ ಅರಣ್ಯ ಇಲಾಖೆಯ ಚಿರತೆ ಕಾರ್ಯಪಡೆಯಲ್ಲಿ ಕೆಲಸ ಮಾಡುತ್ತಿದ್ದರು.

ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಂಡು ಬರುವುದಾಗಿ ಹೇಳಿ ಬೈಕ್‌ನಲ್ಲಿ ತೆರಳಿದ್ದರು. ಈ ವೇಳೆ ಅತಿ ವೇಗವಾಗಿ ಬಂದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ರಾಕೇಶ್ ತಲೆಯ ಮೇಲೆಯೇ ಲಾರಿಯ ಚಕ್ರ ಹರಿದಿದೆ. ಪರಿಣಾಮ ನಜ್ಜುಗುಜ್ಜಾದ ರಾಕೇಶ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಅಪಘಾತದಲ್ಲಿ ವಿನಯ್‌ಗೂ ಗಂಭೀರ ಗಾಯವಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version