Site icon Vistara News

Poisoning: ತಾಯಿ ಮಾಡಿದ ತಿಂಡಿಗೆ ವಿಷ ಬೆರೆಸಿ ತಂದೆ- ತಾಯಿಯನ್ನು ಕೊಂದ ಮಗ!

poisoned parents

ಹಾಸನ: ಕಲುಷಿತ ಆಹಾರ (contaminated food) ಸೇವಿಸಿ ಅಸ್ವಸ್ಥಗೊಂಡಿದ್ದ ದಂಪತಿ ಸಾವಿಗೀಡಾದ ಪ್ರಕರಣದಲ್ಲಿ, ತನಿಖೆ ವೇಳೆ ದಂಪತಿಯ ಸಾವಿನ ರಹಸ್ಯ ಬಯಲಾಗಿದೆ. ಪಾಪಿ ಪುತ್ರನೇ ಪೋಷಕರಿಗೆ ವಿಷ ಹಾಕಿ (Poisoning) ಕೊಂದಿರುವ ಘೋರ ಸತ್ಯ (Crime news) ಬಹಿರಂಗಗೊಂಡಿದೆ.

ಹೆತ್ತ ತಂದೆತಾಯಿಗೆ ವಿಷ ಹಾಕಿ ಕೊಂದ ಮಗ ಮಂಜುನಾಥ್ (27), ತಿಂಡಿಗೆ ವಿಷ (food poison) ಬೆರಸಿದ್ದ. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಿಸಿಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ದಂಪತಿಯ ಎರಡನೇ ಪುತ್ರ ಮಂಜುನಾಥ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಕೊಲೆ‌ (murder news) ಮಾಡಿರುವ ವಿಷಯ ಬಯಲಾಗಿದೆ.

ಆಗಸ್ಟ್ 15ರಂದು ಮನೆಯಲ್ಲಿ ತಿಂಡಿ ಸೇವಿಸಿದ ಬಳಿಕ ದಂಪತಿ ಅಸ್ವಸ್ಥಗೊಂಡಿದ್ದರು. ಚಿಕಿತ್ಸೆ ಪಡೆದು ಮನೆಗೆ ವಾಪಸ್ ಬರುವ ವೇಳೆ ಇಬ್ಬರೂ ದಿಢೀರ್ ಸಾವಿಗೀಡಾಗಿದ್ದರು. ಉಮಾ (48), ನಂಜುಂಡಪ್ಪ (55) ಮೃತಪಟ್ಟಿದ್ದ ದಂಪತಿ. ದಂಪತಿಗಳ ಹಠಾತ್ ಸಾವಿನ ಬಗ್ಗೆ ಕಿರಿಯ ಪುತ್ರ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮಂಜುನಾಥ್‌, ವಿಧವೆಯೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಮಂಜುನಾಥ್ ತಾಯಿ ಉಮಾ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಸಹಕಾರ ಸಂಘಗಳಲ್ಲಿ ತಾಯಿ ಉಮಾ ಮಾಡಿದ್ದ ಸಾಲದ ಹಣವನ್ನು ಮಂಜುನಾಥ್‌ ದುರುಪಯೋಗ ಪಡಿಸಿಕೊಂಡಿದ್ದ. ಹಣ ನೀಡುವಂತೆ ಪದೇ ಪದೆ ತಾಯಿಯನ್ನು ಒತ್ತಾಯಿಸುತ್ತಿದ್ದ. ಆದರೆ ಒಂದು ಹಂತದ ನಂತರ ತಾಯಿ ಹಣ ನೀಡಲು ನಿರಾಕರಿಸಿದ್ದರು.

ಅಕ್ರಮ ಸಂಬಂಧಕ್ಕೆ ವಿರೋಧ ಹಾಗೂ ಹಣ ಕೊಡದ ಸಿಟ್ಟಿನಿಂದ ಕೋಪಗೊಂಡು ತಾಯಿಯ ಹತ್ಯೆಗೆ ಮಂಜುನಾಥ್ ಸ್ಕೆಚ್ ಹಾಕಿದ್ದ. ಆ.15ರಂದು ಉಮಾ ಮನೆಯಲ್ಲಿ ಬೆಳಿಗ್ಗೆ ತಿಂಡಿಗೆ ಪಲಾವ್ ಮಾಡಿದ್ದರು. ಮಂಜುನಾಥ ತಂದೆ, ತಾಯಿಗಿಂತ ಮೊದಲೇ ತಿಂಡಿ ತಿಂದು ಆನಂತರ ಪಲಾವ್‌ಗೆ ಕಳೆನಾಶಕ ಬೆರೆಸಿದ್ದ. ತಂದೆ, ತಾಯಿ ತಿಂಡಿ ತಿಂದ ವೇಳೆ ಔಷಧಿ ವಾಸನೆ ಬರುತ್ತಿದೆ ಎಂದು ವಾಂತಿ ಮಾಡಿದ ನಾಟಕವಾಡಿದ್ದ ಈತ.

ಗುರುವಾರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದ‌ ವೇಳೆ‌ ಗ್ರಾಮಕ್ಕೆ ಆಗಮಿಸಿ ಪೊಲೀಸರು ಅಂತ್ಯಕ್ರಿಯೆ ತಡೆದಿದ್ದರು. ಕುಟುಂಬ ಸದಸ್ಯರ ಮನವೊಲಿಸಿ ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದರು. ಅಸಹಜ ಸಾವು ಎಂದು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಇದೀಗ ಪೋಷಕರನ್ನೇ ಕೊಲೆ ಮಾಡಿರುವ ಸತ್ಯವನ್ನು ಮಗ ಬಾಯ್ಬಿಟ್ಟಿದ್ದಾನೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Food Poisoning : ಚಿಕನ್‌ ಸೇವಿಸಿದ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

Exit mobile version